ಈ ದಿನ ಪ್ರತಿಯೊಬ್ಬ ಕನ್ನಡಿಗನಿಗೂ ಸಂಭ್ರಮದ ದಿನ. ಎಲ್ಲೆಲ್ಲೂ ಕನ್ನಡ ರಾಜ್ಯೋತ್ಸವದ ಸಡಗರ, ಸಂಭ್ರಮ. ಮೈಸೂರು ಪ್ರಾಂತ್ಯ ಎಂದು ಕರೆಯಲ್ಪಡುತ್ತಿದ್ದ, ಅಲ್ಲದೆ ಹರಿದು ಹಂಚಿ ಹೋಗಿದ್ದ ನಾಡು 1956ರ ಈ ದಿನ ಅಂದರೆ ನವೆಂಬರ್ 1ರಂದು ಕರ್ನಾಟಕ ಎಂದು ಮರು ನಾಮಕರಣ ಮಾಡಲಾಯಿತು. ಅವತ್ತಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಾ ಬಂದಿದ್ದೇವೆ. ಇದು 64ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ.
ಕರ್ನಾಟಕದ ಹುಟ್ಟಿಗೆ ಕಾರಣರಾದ ಕನ್ನಡದ ಕುಲಪುರೋಹಿತ ಎಂದೇ ಹೆಸರಾದ ಆಲೂರು ವೆಂಕಟರಾವ್ ಅವರು ಮೊದಲಿಗೆ ಕರ್ನಾಟಕ ಏಕೀಕರಣ ಚಳುವಳಿಯನ್ನು ಸ್ವಾತಂತ್ರ್ಯ ಪೂರ್ವವೇ 1905ರಲ್ಲಿ ಪ್ರಾರಂಭಿಸಿದರು. ನಂತರ ಭಾರತಕ್ಕೆ ಸ್ವಾತಂತ್ರ್ಯ ದೊರೆತು ಗಣರಾಜ್ಯವಾದ ನಂತರ ಭಾಷೆಗಳ ಆಧಾರದ ಮೇಲೆ 1956ರ ನವೆಂಬರ್ 1ರಂದು ರಾಜ್ಯಗಳನ್ನು ವಿಂಗಡಿಸಿದರು. ಅದರಂತೆ ಮದ್ರಾಸ್, ಮುಂಬಯಿ ಮತ್ತು ಹೈದರಾಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳೆಲ್ಲವೂ ವಿಲೀನಗೊಂಡು ಮೈಸೂರು ರಾಜ್ಯ ಉದಯಿಸಿತು. ಉತ್ತರ ಕರ್ನಾಟಕ, ಹಳೆಯ ಮೈಸೂರು ಮತ್ತು ಮಲೆನಾಡು ಎಂದು ಮೈಸೂರು ರಾಜ್ಯವನ್ನು ವಿಂಗಡಿಸಲಾಯಿತು.
ಕರ್ನಾಟಕ ಪದದ ಅರ್ಥ? : ಸಂಸ್ಕೃತದ ಕನ್ನಡ ಎಂಬ ಪದದಿಂದ ಕರ್ನಾಟಕ ಎಂಬುದು ಹುಟ್ಟಿದೆ. ಕನ್ನಡಿಗರ ನಾಡು, ಕನ್ನಾಡು, ಕನ್ನಡ ನಾಡು ಎನ್ನುವುದು ಇದರ ಅರ್ಥ. ಅಲ್ಲದೆ ಕರು + ನಾಡು ಕರುನಾಡು.. ಈ ಪದವೇ ಕರ್ನಾಟಕವಾಯಿತು ಎಂಬ ಮತ್ತೊಂದು ಅರ್ಥವೂ ಇದೆ.
ಕರು ಎಂದರೆ ಕಪ್ಪು, ಇದರರ್ಥ ಕಪ್ಪು ಮಣ್ಣಿನ ನಾಡು ಎಂದೂ ಸಹ ಹೇಳಲಾಗುತ್ತದೆ. ಹಳೆಯ ಗ್ರಂಥಗಳು ಇದನ್ನು ಕರ್ನಾಟ ಎಂಬ ಪದದಿಂದ ಪಡೆಯಲಾಗಿದೆ ಎಂದು ಸೂಚಿಸುತ್ತವೆ, ಕೆಲವು ಮೂಲಗಳು ಕರ್ನಾಟಕವನ್ನು ಎತ್ತರದ ಭೂಮಿಗೆ ಅನುವಾದಿಸುತ್ತದೆ.
ಕನ್ನಡ ನಾಡಿನ ಮರುಹುಟ್ಟಿನ ದಿನ ಈ ನವೆಂಬರ್ 1. ಕರುನಾಡಿನ ಸಮಸ್ತ ಜನರು ಯಾವುದೇ ಜಾತಿ, ಧರ್ಮ, ಪಂಥಗಳ ಬೇಧವಿಲ್ಲದೆ ಒಗ್ಗಟ್ಟಿನಿಂದ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ, ನಾಡಹಬ್ಬದ ಸಂಭ್ರಮ ನಾಡಿನಲ್ಲಿ ಮನೆ ಮಾಡಿದೆ.