ಇರಾನ್–ಇಸ್ರೇಲ್ ಯುದ್ಧ ಎಫೆಕ್ಟ್: ರಾಜ್ಯದಲ್ಲಿ LPG ಸಂಕಷ್ಟ, ಹೋಟೆಲ್ಗಳಿಗೆ ಬೀಗ
ಬೆಂಗಳೂರು: ಇರಾನ್–ಇಸ್ರೇಲ್ ಯುದ್ಧದ ಪರಿಣಾಮವಾಗಿ ಉಂಟಾದ ಕಮರ್ಷಿಯಲ್ LPG ಕೊರತೆ ಕರ್ನಾಟಕದಲ್ಲಿ ತೀವ್ರ ಸಮಸ್ಯೆ ಸೃಷ್ಟಿಸಿದೆ. ಕಳೆದ 9 ದಿನಗಳಿಂದ ಮುಂದುವರಿದಿರುವ ಈ ಸಂಕಷ್ಟದಿಂದ ದೊಡ್ಡ ಹೋಟೆಲ್ಗಳು ಹಾಗೂ ರೆಸ್ಟೋರೆಂಟ್ಗಳು ಬಂದ್ ಆಗುವ ಹಂತಕ್ಕೆ ತಲುಪಿವೆ.
ಹೋಟೆಲ್ ಆಹಾರಕ್ಕೆ ಅವಲಂಬಿತವಾಗಿದ್ದ ಜನರು ಸಂಕಷ್ಟ ಅನುಭವಿಸುತ್ತಿದ್ದು, 6 ಸಾವಿರ ರೂಪಾಯಿ ಕೊಟ್ಟರೂ ಕಮರ್ಷಿಯಲ್ ಸಿಲಿಂಡರ್ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಪರಿಣಾಮವಾಗಿ ಅಡುಗೆ ಎಣ್ಣೆ ಸೇರಿದಂತೆ ಇತರೆ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗುತ್ತಿದೆ.
ರಾಜಧಾನಿ ಬೆಂಗಳೂರಿನ ಪ್ರಸಿದ್ಧ ‘ನ್ಯೂ ಮಾಡರ್ನ್ ಹೋಟೆಲ್’ ಬಾಗಿಲು ಮುಚ್ಚಿದ್ದು, ‘ನಾಗಾರ್ಜುನ ಹೋಟೆಲ್’ ಮೆನು ಕಡಿತಗೊಳಿಸಿ ಗ್ರಾಹಕರ ಸಹಕಾರ ಕೋರಿದೆ.
ಧಾರವಾಡದಲ್ಲಿ ಗ್ಯಾಸ್ ಕೊರತೆಯಿಂದ ‘ವಿಜಯಸಾಗರ್’ ಹೋಟೆಲ್ ಕೂಡ ಬಂದ್ ಆಗಿದ್ದು, ಹಲವು ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಸ್ಥಿತಿ ಎದುರಿಸುತ್ತಿದ್ದಾರೆ. ತುಮಕೂರಿನಲ್ಲಿ ಹೋಟೆಲ್ಗಳ ಜೊತೆಗೆ ಇಂದಿರಾ ಕ್ಯಾಂಟೀನ್ಗಳೂ ಕಾರ್ಯನಿರ್ವಹಣೆ ಸ್ಥಗಿತಗೊಂಡಿದ್ದು, ಅನೇಕರು ಬೇರೆ ಉದ್ಯೋಗಗಳತ್ತ ಮುಖಮಾಡಿದ್ದಾರೆ.
ರಂಜಾನ್ ಹಿನ್ನೆಲೆ ಆಹಾರ ತಯಾರಿಕೆಗೆ ಗ್ಯಾಸ್ ಸಿಗದೆ ಸೌದೆ ಒಲೆಗಳನ್ನು ಬಳಸುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿಜಯಪುರದಲ್ಲೂ ರೊಟ್ಟಿ ತಯಾರಿಕೆಗೆ ಗ್ಯಾಸ್ ಕೊರತೆ ತಟ್ಟಿದ್ದು, ಇದ್ದಿಲು ಮತ್ತು ಸೌದೆ ಒಲೆಗಳಿಗೆ ಅವಲಂಬನೆ ಹೆಚ್ಚಾಗಿದೆ.
ಹಾಸನದಲ್ಲಿ ರಫ್ತು ಕ್ಷೇತ್ರಕ್ಕೂ ಹೊಡೆತ ಬಿದ್ದಿದ್ದು, ಹಾರ್ಮುಜ್ ಜಲಮಾರ್ಗದ ಅಡಚಣೆಗಳಿಂದ ಲಕ್ಷಾಂತರ ಮೌಲ್ಯದ ಉತ್ಪನ್ನಗಳು ವಾಪಸ್ ಆಗುತ್ತಿವೆ. ಇದರಿಂದ ಉದ್ಯಮಿಗಳಿಗೆ ಭಾರೀ ನಷ್ಟ ಉಂಟಾಗಿದೆ.
ಇದರಿಂದ ಕುಕ್ಕುಟೋದ್ಯಮಕ್ಕೂ ಪರಿಣಾಮ ಬಿದ್ದಿದ್ದು, ಮೊಟ್ಟೆ ಬೇಡಿಕೆ 1.25 ಕೋಟಿಯಿಂದ 80 ಲಕ್ಷಕ್ಕೆ ಇಳಿದಿದೆ. ರಫ್ತು ಕುಸಿತದಿಂದ ಮೊಟ್ಟೆ ದರವೂ 6 ರೂಪಾಯಿಯಿಂದ 4 ರೂಪಾಯಿಗೆ ಇಳಿಕೆಯಾಗಿದೆ.






