ಇ-ಖಾತಾ ಮಾಡಿಕೊಡುವಲ್ಲಿ ಗೃಹ ಮಂಡಳಿ ಯಿಂದ ನಿರ್ಲಕ್ಷ ವಾಗಿಲ್ಲ: ಸಚಿವ ಜಮೀರ್
ಬೆಳಗಾವಿ: ಸೂರ್ಯನಗರ 1ನೇ ಹಂತ ವಸತಿ ಬಡಾವಣೆಯನ್ನು ಚಂದಾಪುರ ಮತ್ತು ಬೊಮ್ಮಸಂದ್ರ ಪುರಸಭೆಗಳಿಗೆ ಹಸ್ತಾoತರಿಸಲು ಕ್ರಮ ಕೈಗೊಳ್ಳಲಾಗಿದ್ದು, ಸದರಿ ಪುರಸಭೆಗಳು ಹಸ್ತಾಂತರ ಮಾಡಿಕೊಂಡು ಬಡಾವಣೆಯ ಸ್ವತ್ತುಗಳಿಗೆ ಇ-ಖಾತಾವನ್ನು ಮಾಡಿಕೊಡಲು ಕ್ರಮ ವಹಿಸಬೇಕಾಗಿದೆ. ಈ ವಿಷಯದಲ್ಲಿ ಗೃಹ ಮಂಡಳಿಯಿಂದ ನಿರ್ಲಕ್ಷ ವಾಗಿಲ್ಲ ಎಂದು ವಸತಿ, ವಕ್ಫ್ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದರು.
ಅವರು ವಿಧಾನ ಪರಿಷತ್ ನಲ್ಲಿ ಸದಸ್ಯ ಸುನಿಲ್ ವಲ್ಯಾಪುರ್ ಅವರ ಚುಕ್ಕೆ ಗುರುತಿನ ಪ್ರಶ್ನೆ ಗೆ ಉತ್ತರಿಸಿ ಮಾತನಾಡಿದರು. ಸೂರ್ಯನಗರ 1ನೇ ಹಂತ ಬಡಾವಣೆಯು ಚಂದಾಪುರ ಹಾಗೂ ಬೊಮ್ಮಸಂದ್ರ ಪುರಸಭೆಗಳ ವ್ಯಾಪ್ತಿಗೆ ಬರುತ್ತದೆ. ಕರ್ನಾಟಕ ಗೃಹ ಮಂಡಳಿ ಬಡಾವಣೆಯನ್ನು ನಿರ್ವಹಣೆಗಾಗಿ ಹಸ್ತಾಂತರ ಮಾಡಿಕೊಳ್ಳುವಂತೆ ಚಂದಾಪುರ ಹಾಗೂ ಬೊಮ್ಮಸಂದ್ರ ಪುರಸಭೆಗಳಿಗೆ ಸಾಕಷ್ಟು ಬಾರಿ ಮಂಡಳಿಯಿಂದ ಪತ್ರ ವ್ಯವಹಾರ ಮಾಡಲಾಗಿದೆ.
ಚಂದಾಪುರ ಮತ್ತು ಬೊಮ್ಮಸಂದ್ರ ಪುರಸಭೆಗಳು ಸೂರ್ಯನಗರ 1ನೇ ಹಂತ ಬಡಾವಣೆಯನ್ನು ಹಸ್ತಾಂತರ ಮಾಡಿಕೊಂಡು ಬಡಾವಣೆಯ ಸ್ವತ್ತುಗಳಿಗೆ ಇ-ಖಾತಾವನ್ನು ಮಾಡಿಕೊಡಲು ಕ್ರಮ ವಹಿಸಬೇಕಾಗಿದೆ ಎಂದರು. ಕರ್ನಾಟಕ ಗೃಹ ಮಂಡಳಿ ಬಡಾವಣೆಯ ಸ್ವತ್ತುಗಳಿಗೆ ಮಂಡಳಿಯಿಂದಲೇ ಇ-ಖಾತಾ ನೀಡಲು ಸರ್ಕಾರದ ಆದೇಶವಾಗಿದ್ದು ಅದರಂತೆ 1 ತಿಂಗಳೊಳಗೆ ಇ-ಖಾತಾ ನೀಡಲು ಕ್ರಮಕೈಗೊಳ್ಳಲಾಗುವುದು ಎಂದರು.






