ಕೇರಳದಲ್ಲಿ ಮತದಾನ ಆರಂಭ: ಅಭಿವೃದ್ಧಿಯೇ ಮುಖ್ಯ ವಿಷಯ ಎಂದ ಪಿಣರಾಯಿ ವಿಜಯನ್
ತಿರುವನಂತಪುರಂ: ಕೇರಳ ರಾಜ್ಯದಾದ್ಯಂತ ಗುರುವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಮತದಾನ ಆರಂಭಕ್ಕೂ ಮುನ್ನವೇ ಹಲವು ಪ್ರಮುಖ ನಾಯಕರು ಹಾಗೂ ಅಭ್ಯರ್ಥಿಗಳು ಮತಗಟ್ಟೆಗಳಿಗೆ ತೆರಳಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು. ರಾಜ್ಯದಲ್ಲಿ ಹೊಸ ಸರ್ಕಾರವನ್ನು ಆಯ್ಕೆ ಮಾಡಲು 2.71 ಕೋಟಿಗೂ ಅಧಿಕ ಮತದಾರರು ಮತ ಚಲಾಯಿಸುತ್ತಿದ್ದಾರೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತಮ್ಮ ಪತ್ನಿ, ಮಗಳು ಮತ್ತು ಪುತ್ರನೊಂದಿಗೆ ಬೆಳಗ್ಗೆ ಸುಮಾರು 8 ಗಂಟೆಗೆ ಕಣ್ಣೂರು ಜಿಲ್ಲೆಯ ಪಿಣರಾಯಿಯಲ್ಲಿರುವ ಆರ್ಸಿ ಅಮಲ ಬೇಸಿಕ್ ಯುಪಿ ಶಾಲೆಯ ಮತಗಟ್ಟೆಗೆ ನಡೆದು ತೆರಳಿ ಮತ ಚಲಾಯಿಸಿದರು.
ಮತದಾನದ ನಂತರ ಮಾತನಾಡಿದ ಅವರು, ಈ ಚುನಾವಣೆ ಕೇರಳದ ಭವಿಷ್ಯವನ್ನು ನಿರ್ಧರಿಸುವ ಮಹತ್ವದ ಘಟ್ಟ ಎಂದು ಹೇಳಿದರು. ರಾಜ್ಯವು ಅಭಿವೃದ್ಧಿಯ ದಾರಿಗೆ ಸಾಗುತ್ತಿರುವುದರಿಂದ ಈ ಪ್ರಕ್ರಿಯೆ ಅತ್ಯಂತ ಮುಖ್ಯವಾಗಿದೆ ಎಂದು ಅವರು ತಿಳಿಸಿದರು. ಅಭಿವೃದ್ಧಿಯ ಹಾದಿ ಮುಂದುವರಿಯಬೇಕಾಗಿದೆ, ಅದನ್ನು ಯಾವುದೇ ಕಾರಣಕ್ಕೂ ಅಡ್ಡಿಪಡಿಸಬಾರದು ಎಂದು ಹೇಳಿದರು.
ರಾಜ್ಯದಲ್ಲಿ ಭ್ರಷ್ಟಾಚಾರ ಕಡಿಮೆಯಾಗಿದೆ ಮತ್ತು ಈ ಸಾಧನೆ ಎಲ್ಲ ಪಕ್ಷಗಳಿಂದ ಸಾಧ್ಯವಿಲ್ಲ ಎಂಬುದು ಜನರಿಗೆ ತಿಳಿದಿದೆ ಎಂದು ಅವರು ಅಭಿಪ್ರಾಯಪಟ್ಟರು. ಕಳೆದ ಹತ್ತು ವರ್ಷಗಳಲ್ಲಿ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ನಡೆದಿದೆ ಮತ್ತು ಅದು ಎಲ್ಡಿಎಫ್ ಸರ್ಕಾರದಿಂದ ಸಾಧ್ಯವಾಗಿದೆ ಎಂದು ಹೇಳಿದರು. ಈ ಅಭಿವೃದ್ಧಿ ಮುಂದುವರಿಯಲು ಎಲ್ಡಿಎಫ್ ಅಧಿಕಾರದಲ್ಲೇ ಉಳಿಯಬೇಕು ಎಂಬ ನಂಬಿಕೆ ಜನರಲ್ಲಿ ಇದೆ ಎಂದು ಹೇಳಿದರು.
ಈ ಬಾರಿ ಕೂಡ ಜನರು ಹೆಚ್ಚಿನ ಸ್ಥಾನಗಳನ್ನು ನೀಡುತ್ತಾರೆ ಎಂಬ ವಿಶ್ವಾಸ ನಮಗಿದೆ. ನಾವು ಜನರೊಂದಿಗೆ ಇದ್ದೇವೆ ಮತ್ತು ಜನರು ನಮ್ಮೊಂದಿಗಿದ್ದಾರೆ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.
