ಆಸ್ಟ್ರೇಲಿಯಾ ವಿರುದ್ದದ ಎರಡನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಭಾರತೀಯ ಕ್ರಿಕೆಟ್ ತಂಡಕ್ಕೆ ಸಲಹೆಯನ್ನು ನೀಡಿದ್ದಾರೆ. ತಂಡದ ಆಯ್ಕೆ ಯಾವ ರೀತಿ ಇದ್ದರೆ ಅನುಕೂಲವಾಗಲಿದೆ ಎಂದು ಗಂಭೀರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮೊದಲ ಟೆಸ್ಟ್ ಪಂದ್ಯ ಸೋಲಿನ ಹಿನ್ನೆಲೆಯಲ್ಲಿ ಪ್ರಮುಖ ಬದಲಾವಣೆಯನ್ನು ಗಂಭೀರ್ ಬಯಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಭಾರತ ಹೀನಾಯವಾಗಿ ಸೋಲಿ ಕಂಡಿತ್ತು. ಮೊದಲ ಇನ್ನಿಂಗ್ಸ್ನಲ್ಲಿ ಸಾಧಾರಣ ಬ್ಯಾಟಿಂಗ್ ನಡೆಸಿತ್ತಾದರೂ ಬೌಲಿಂಗ್ ವಿಭಾಗದ ಅದ್ಬುತ ಪ್ರದರ್ಶನದಿಂದಾಗಿ ಮುನ್ನಡೆಯನ್ನು ಸಾಧಿಸಿತ್ತು. ಆದರೆ ಎರಡನೇ ಇನ್ನಿಂಗ್ಸ್ ಭಾರತದ ಪಾಲಿಗೆ ಅತ್ಯಂತ ಭಯಾನಕವಾಗಿದ್ದು 36 ರನ್ಗಳಿಗೆ ಸಂಪೂರ್ಣವಾಗಿ ಕುಸಿದಿತ್ತು. ಹೀಗಾಗಿ 8 ವಿಕೆಟ್ಗಳಿಂದ ಆಸ್ಟ್ರೇಲಿಯಾ ಗೆದ್ದಿದ್ದು ಸರಣಿಯಲ್ಲಿ 1-0 ಮುನ್ನಡೆಯನ್ನು ಕಾಯ್ದುಕೊಂಡಿದೆ.
ಈ ಹಿನ್ನೆಲೆಯಲ್ಲಿ ಗೌತಮ್ ಗಂಭೀರ್ ಟೀಮ್ ಇಂಡಿಯಾಗೆ ಪ್ರಮುಖ ಸಲಹೆಯನ್ನು ನೀಡಿದ್ದು ತಂಡದ ಆಯ್ಕೆಯ ಬಗ್ಗೆ ವಿವರಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ಮೆಲ್ಬೋರ್ನ್ನಲ್ಲಿ ಬಾಕ್ಸಿಂಡ್ ಡೇಯಂದು ಆರಂಭವಾಗಲಿದೆ. ಅಜಿಂಕ್ಯ ರಹಾನೆ ಮುನ್ನಡೆಸಲಿರುವ ಈ ಪಂದ್ಯಕ್ಕೆ ಭಾರತ ಐವರು ಬೌಲರ್ಗಳೊಂದಿಗೆ ಕಣಕ್ಕಿಳಿಯಲಿ ಎಂಬ ಅಭಿಪ್ರಾಯವನ್ನು ಗೌತಮ್ ಗಂಭೀರ್ ವ್ಯಕ್ತಪಡಿಸಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಪೃಥ್ವಿ ಶಾ ಪ್ರದರ್ಶನ ನೀಡಿ ಸರಣಿಯನ್ನು ಶಾ ಆರಂಭಿಸಲಿ ಎಂದು ಬಯಸಿದ್ದೆ. ಆದರೆ ಆತ ಫಾರ್ಮ್ನ ಕೊರತೆಯನ್ನು ಹೊಂದಿರುವುದಲ್ಲದೆ ಆತ್ಮವಿಶ್ವಾಸವನ್ನೂ ಕಳೆದುಕೊಂಡಿದ್ದಾನೆ. ಹೀಗಾಗಿ ಮಾಯಾಂಕ್ ಜೊತೆಗೆ ಶುಭ್ಮನ್ ಗಿಲ್ ಇನ್ನಿಂಗ್ಸ್ ಆರಂಭಿಸಲಿ. ಪೂಜಾರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿ ಎಂದು ಗಂಭೀರ್ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಇನ್ನು ಇದರ ಜೊತೆಗೆ ವಿರಾಟ್ ಕೊಹ್ಲಿ ಅಲಭ್ಯತೆಯಲ್ಲಿ ಅಜಿಂಕ್ಯ ರಹಾನೆ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯಬೇಕು. ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಆಡುವ ಬಳಗದಲ್ಲಿ ವೃದ್ಧಿಮಾನ್ ಸಾಹಾ ಹಾಗೂ ಹನುಮ ವಿಹಾರಿ ಬದಲಿಗೆ ಅವಕಾಶವನ್ನು ಪಡೆಯಲಿ ಎಂದು ಗಂಭೀರ್ ಹೇಳಿದ್ದಾರೆ.
ನಾಯಕ ವಿರಾಟ್ ಕೊಹ್ಲಿ ಅಲಭ್ಯತೆಯ ಕಾರಣದಿಂದಾಗಿ ತಂಡದ ಜವಾಬ್ಧಾರಿ ಹೊತ್ತಿರುವ ಅಜಿಂಕ್ಯ ರಹಾನೆ ತಮ್ಮ ಎಂದಿನ ಕ್ರಮಾಂಕವಾಗಿರುವ ಐದನೇ ಕ್ರಮಾಂಕದಲ್ಲಿ ಇಳಿಯುವ ಬದಲು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯಬೇಕು. ಯಾಕೆಂದರೆ ನಾಯಕನಾಗಿ ರಹಾನೆ ಮುಂದೆ ನಿಂತು ಮುನ್ನಡೆಸುವಂತಿರಬೇಕು. ಕೆಎಲ್ ರಾಹುಲ್ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲಿ ಎಂದು ಮಾಜಿ ಆರಂಬಿಕ ಆಟಗಾರ ಗೌತಮ್ ಗಂಭೀರ್ ಸಲಹೆಯನ್ನು ನೀಡಿದ್ದಾರೆ.