ನೂರು ರೂಪಾಯಿ ಲಂಚ ಕೊಡದ್ದಕ್ಕೆ ಅಧಿಕಾರಿಗಳು ಮಾಡಿದ್ದೇನು..? ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ..

admin
2 Min Read

ಕೊರೊನಾದಿಂದಾಗಿ ದೇಶದ ಆರ್ಥಿಕತೆ ಕುಗ್ಗಿದೆ. ದೊಡ್ಡ ಉದ್ಯಮಿಗಳೇ ಕೋವಿಡ್ ಹೊಡೆತಕ್ಕೆ ತತ್ತರಿಸಿದ್ದಾರೆ. ಇನ್ನೂ ಬೀದಿ ಬದಿ ವ್ಯಾಪಾರಸ್ಥರು ಲಾಕ್ ಡೌನ್ ತೆರವಿನ ಬಳಿಕ ಹಾಗೋ ಹೀಗೋ‌ ವ್ಯಾಪಾರ ಮಾಡಿ ಒಂದೊತ್ತಿನ ತುತ್ತಿನ ಚೀಲ ಹೊರೆಯುತ್ತಿದ್ದಾರೆ.
ಅಂಥದರಲ್ಲಿ ಅಧಿಕಾರಿಗಳು ಅವರ ಬಳಿಯೇ ಲಂಚಕ್ಕೆ ಕೈಕೊಡ್ಡಿ, ಲಂಚ ಕೊಡಲು ನಿರಾಕರಿಸಿದ್ದಕ್ಕೆ ಆತನ ವ್ಯಾಪಾರವನ್ನೇ ಹಾಳು ಮಾಡಿದರೆ ಹೇಗೆ.?

ಇಂಥ ಅಮಾನುಷ ಘಟನೆ ನಡೆದಿರೋದು ಮಧ್ಯಪ್ರದೇಶದ ಇಂದೋರ್ ನಲ್ಲಿ. ಇಂದೋರ್‌ನ ಟನೆ ಎಂಬಲ್ಲಿ ಪುರಸಭಾ ಅಧಿಕಾರಿಗಳು ಮೊಟ್ಟೆಗಳನ್ನು ಹೊತ್ತ ಬಂಡಿಯನ್ನು ಉರುಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈಗಾಗಲೇ ಕೊರೊನಾ ವೈರಸ್ ಮತ್ತು ನಂತರದ ಲಾಕ್‌ಡೌನ್‌ಗಳಿಂದ ದೊಡ್ಡ ಮತ್ತು ಸಣ್ಣ ಉದ್ದಿಮೆಗಳು ತೀವ್ರವಾಗಿ ಹೊಡೆತ ತಿಂದಿವೆ. ಸಣ್ಣಪುಟ್ಟ ವ್ಯಾಪಾರಸ್ಥರ ಬದುಕು ಬೀದಿಗೆ ಬಿದ್ದಿದೆ. ಕೇಂದ್ರ ಸರ್ಕಾರವು ಕಳೆದ ತಿಂಗಳು ಅಂಗಡಿಗಳನ್ನು ಮತ್ತು ಮಾರುಕಟ್ಟೆಗಳನ್ನು ನಿರ್ಬಂಧಗಳೊಂದಿಗೆ ತೆರೆಯಲು ಅವಕಾಶ ಮಾಡಿಕೊಟ್ಟಿತ್ತು. ಆದರೆ ಹೆಚ್ಚಿನ ರಾಜ್ಯಗಳು ಪ್ರಕರಣಗಳ ಸಂಖ್ಯೆ ಸ್ಥಿರವಾಗಿ ಹೆಚ್ಚಾಗುತ್ತಿರುವುದರಿಂದ ಎಚ್ಚರಿಕೆ ವಹಿಸುತ್ತಿವೆ. ಅದರಂತೆ ಮಧ್ಯಪ್ರದೇಶದಲ್ಲೂ ಸಹ ಕಠಿಣ ನಿಯಮಗಳ ಜಾರಿಗೆ ತರಲಾಗಿದೆ.ಮಧ್ಯಪ್ರದೇಶದ ಅತಿ ಹೆಚ್ಚು ಹಾನಿಗೊಳಗಾದ ನಗರವಾದ ಇಂದೋರ್‌ನಲ್ಲಿ ಕೊರೊನಾ‌ ನಿಯಂತ್ರಣಕ್ಕಾಗಿ ಎಡ-ಬಲ‌ ನಿಯಮ‌ ಜಾರಿಗೆ‌ ತರಲಾಗಿದೆ. ರಸ್ತೆಗಳ ಎಡ ಮತ್ತು ಬಲಭಾಗದಲ್ಲಿರುವ ಅಂಗಡಿಗಳನ್ನು ಪರ್ಯಾಯ ದಿನಗಳಲ್ಲಿ ತೆರೆಯಲು ಅವಕಾಶ ನೀಡಲಾಗುತ್ತಿದೆ. 

ಅದರಂತೆ ನಿಯಮ ಪಾಲನೆ‌ ಮಾಡದ್ದಕ್ಕೆ ಮೊಟ್ಟೆ ವ್ಯಾಪಾರಿಯ ಗಾಡಿಯನ್ನು ಪುರಸಭೆ ಅಧಿಕಾರಿಗಳು ಬುಡಮೇಲು‌ ಮಾಡಿದ್ದಾರೆ ಎನ್ನಲಾಗುತ್ತಿದೆ. ೧೪ ವರ್ಷದ ‌ಬಾಲಕನ ಮೊಟ್ಟೆ ಗಾಡಿಯನ್ನು ಅಧಿಕಾರಿಗಳು ಹಾಳುಗೆಡವಿದ್ದಾರೆ. ಈ ದೃಶ್ಯವನ್ನು ಬಾಲಕ ವಿಡಿಯೋ‌ ಮಾಡಿದ್ದು, ಸಾಮಾಜಿಕ‌ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಜೊತೆಗೆ ಅಧಿಕಾರಿಗಳ ವಿರುದ್ಧ ಕೆಲವರು ಆಕ್ರೋಶ ಹೊರಹಾಕಿದ್ದಾರೆ. 

ವೈರಲ್ ವಿಡಿಯೋವೊಂದರಲ್ಲಿ, ಅಧಿಕಾರಿಗಳು ತಮ್ಮ ಗಾಡಿ ತೆಗೆಯಲು ಇಲ್ಲಾ, 100 ರೂ ಲಂಚವಾಗಿ ನೀಡುವಂತೆ ಬೆಳಿಗ್ಗೆ ಎಚ್ಚರಿಕೆ ನೀಡಿದ್ದರು ಎಂದು ಆರೋಪಿಸಿದ್ದಾರೆ. ಅದಕ್ಕೆ ನಾನು ನಿರಾಕರಿಸಿದಾಗ, ಅಧಿಕಾರಿಗಳು ಬಂಡಿಯನ್ನು ತುದಿಯಲ್ಲಿಟ್ಟುಕೊಂಡು ಎಲ್ಲಾ ಮೊಟ್ಟೆಗಳನ್ನು ನಾಶಪಡಿಸಿದರು ಎಂದು ಹುಡುಗ ಆರೋಪಿಸಿದ್ದಾರೆ. ಜೊತೆಗೆ ಸಾಂಕ್ರಾಮಿಕ ರೋಗದಿಂದಾಗಿ ನಮ್ಮ ದೈನಂದಿನ ಮಾರಾಟ ಕಡಿಮೆಯಾಗಿದೆ ಮತ್ತು ನಷ್ಟವಾಗಿದೆ. ಜೊತೆಗೆ ಅವರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆಬಿದ್ದಿದೆ ಎಂದಿದ್ದಾರೆ.

ಇನ್ನೂ, ಹಿರಿಯ ರಾಜಕಾರಣಿ ಭನ್ವರ್ ಸಿಂಗ್ ಶೇಖಾವತ್ ಸೇರಿದಂತೆ ಆಡಳಿತಾರೂಢ BJP ಬಿಜೆಪಿಯ ಹಲವಾರು ನಾಯಕರು ಸರ್ಕಾರವು “ಎಡ-ಬಲ” ವ್ಯವಸ್ಥೆಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. ಶಾಸಕ ಮಹೇಂದಾ ಹೊರ್ಡಿಯಾ ಅವರು ಈ ನಿಯಮದ ವಿರುದ್ಧ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದಿದ್ದಾರೆ. ಇಂತಹ ನಿರ್ಧಾರಗಳು ಜನರಲ್ಲಿ ಪಕ್ಷದ ಚಿತ್ರಣವನ್ನು ಕೆಡಿಸುತ್ತವೆ ಎಂದು ಬಿಜೆಪಿ ಮುಖಂಡ ಕೃಷ್ಣ ಮುರಾರಿ ಮೊಘೆ ಹೇಳಿದರು.‌ ಜೊತೆಗೆ ಬೀದಿ ಬದಿ ವ್ಯಾಪಾರಿಗಳ ಕಿರುಕುಳವನ್ನು ನಿಲ್ಲಿಸದಿದ್ದರೆ ಬೀದಿಗಿಳಿಯಬೇಕಾಗುತ್ತದೆ ಎಂದು ಕಾಂಗ್ರೆಸ್ ಶಾಸಕ ಸಂಜಯ್ ಶುಕ್ಲಾ ಎಚ್ಚರಿಸಿದ್ದಾರೆ.

 

Share This Article
Leave a Comment