ಪೌರತ್ವ (ತಿದ್ದುಪಡಿ) ಮಸೂದೆ ವಿರುದ್ಧ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ ಸೆಂಥಿಲ್ ಬಹಿರಂವಾಗಿ ಸಿಡಿಡಿದ್ದೆದ್ದಿದ್ದಾರೆ. ಮಸೂದೆಯನ್ನು ಖಂಡಿಸಿ ವಿಧೇಯಕದ ವಿರುದ್ಧ ಗೃಹ ಸಚಿವರಿಗೆ ಖಡಕ್ ಪತ್ರ ಬರೆದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಜನಮನ್ನಣೆ ಗಳಿಸಿದ್ದ ಸೆಂಥಿಲ್ ಕೇಂದ್ರ ಸರಕಾರದ ಕೆಲವೊಂದು ವಿಚಾರಗಳ ಬಗ್ಗೆ ಅಸಮಾಧಾನಗೊಂಡು ತಮ್ಮ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದರು. ಇದೀಗ ಮತ್ತೆ ಸುದ್ದಿಯಾಗಿದ್ದಾರೆ.
ಪೌರತ್ವ ಮಸೂದೆ ಅಂಗೀಕಾರವಾದ ದಿನ ಆಧುನಿಕ ಭಾರತದ ಇತಿಹಾಸದಲ್ಲಿ ಕರಾಳ ದಿನವಾಗಿದೆ. ತಾನು ಪೌರತ್ವ ಮಸೂದೆಯನ್ನು ಸ್ವೀಕರಿಸುವುದಿಲ್ಲ, ಭಾರತೀಯನೆಂದು ಪೌರತ್ವವನ್ನು ಸಾಬೀತುಪಡಿಸಲು ಅಗತ್ಯವಾದ ದಾಖಲೆಗಳನ್ನು ಸಲ್ಲಿಸುವುದಿಲ್ಲ ಮತ್ತು ನನ್ನ ಅಸಹಕಾರಕ್ಕಾಗಿ ಭಾರತ ದೇಶವು ನನ್ನ ಮೇಲೆ ಕ್ರಮ ಕೈಗೊಂಡರೆ ಸ್ವೀಕರಿಸುತ್ತೇನೆ ಎಂದು ಸೆಂಥಿಲ್ ಸಚಿವರಿಗೆ ಸವಾಲು ಹಾಕಿದ್ದಾರೆ.
ಈ ದೇಶದಲ್ಲಿ ಹುಟ್ಟಿ ಬೆಳೆದು ನಾನು ನನ್ನ ಪೌರತ್ವ ಸಾಬೀತುಪಡಿಸಬೇಕಾಗಿರುವುದು ದುರದೃಷ್ಟಕರ. ನನ್ನ ಪೌರತ್ವವನ್ನು ಸಾಬೀತುಪಡಿಸಲು ಅಗತ್ಯವಾದ ದಾಖಲೆಗಳನ್ನು ಸಲ್ಲಿಸದೆ ಎನ್ ಆರ್ ಸಿ ಗಣತಿಗೆ ಅಸಹಕಾರ ನೀಡುತ್ತೇನೆ. ಒಂದು ವೇಳೆ ನಾನು ಈ ದೇಶದ ನಾಗರಿಕನಲ್ಲ ಎಂದು ಗುರುತಿಸಿದರೆ ನೀವು ನಿರ್ಮಿಸುತ್ತಿರುವ ಅನೇಕ `ವಲಸೆ ಕೇಂದ್ರ’ ಭರ್ತಿ ಮಾಡಲು ನನಗೆ ಸಂತೋಷವಾಗುತ್ತದೆ. ಯಾಕೆಂದರೆ ಸರಕಾರ ದೇಶದಾದ್ಯಂತ ಪ್ರತಿ ಹೆಜ್ಜೆಗೂ ಇಂತಹ ಕೇಂದ್ರಗಳನ್ನು ತೆರೆಯಬೇಕಾದೀತು. ಹೀಗಾಗಿ ಜನ ವಿರೋಧಿ ಮಸೂದೆಯ ಬಗ್ಗೆ ಮೌನವಾಗಿರುವುದಕ್ಕಿಂತ ಇದನ್ನು ವಿರೋಧಿಸಿ ನೀವು ಕೈಗೊಳ್ಳುವ ಕ್ರಮವನ್ನು ವಿನಮ್ರತೆಯಿಂದ ಸ್ವೀಕರಿಸುತ್ತೇನೆ. ಮಸೂದೆಯನ್ನು ಮಂಡಿಸುವ ಮೂಲಕ ನಿಮ್ಮ ಸರಕಾರ ದ್ವೇಷದ ಮೂಲ ಸಿದ್ಧಾಂತವನ್ನು ಬಹಿರಂಗಪಡಿಸಿದೆ.
ಒಂದೇ ದೇಶದಲ್ಲಿ ವಾಸವಾಗಿದ್ದ ನಮ್ಮ ಮುಸ್ಲಿಂ ಮತ್ತು ಆದಿವಾಸಿ ಸಹೋದರ ಸಹೋದರಿಯರಿಗೆ ದೇಶದ ಜಾತ್ಯತೀತ ನೀತಿಗಳ ಬಗ್ಗೆ ಅವರಿಗಿದ್ದ ಭಯವನ್ನು ನೀಗಿಸಲು ಈ ಮಸೂದೆ ಯಶಸ್ವಿಯಾಗಲಿಲ್ಲ ಎಂಬ ವಿಚಾರ ನನಗೆ ಲಜ್ಜೆಗೀಡು ಮಾಡಿದೆ ಎಂದು ಬರೆದುಕೊಂಡಿದ್ದಾರೆ.
ಮಸೂದೆ ವಿರೋಧಿಸುವ ಕಾರಣ ಹಲವಾರು ನಾಗರಿಕತ್ವ ಕಳೆದುಕೊಳ್ಳಲಿದ್ದು, ನಿಮ್ಮ ಅಜೆಂಡಾ ಯಶಸ್ವಿಯಾಗುವ ಮುನ್ನ ನಿಮ್ಮ ವಲಸೆ ಕೇಂದ್ರಗಳ ಸಾಮರ್ಥ್ಯವನ್ನು ಹೆಚ್ಚಿಸಲು ನಾನೊಬ್ಬ ಮಾಜಿ ಐಎಎಸ್ ಅಧಿಕಾರಿಯಾಗಿ ಸಲಹೆ ನೀಡುತ್ತೇನೆ. ನಮ್ಮನ್ನು ಪ್ರತ್ಯೇಕಿಸುವ ಷಡ್ಯಂತ್ರದ ವಿರುದ್ಧ ಮುಂದಿನ ದಿನಗಳಲ್ಲಿ ದೇಶದ ಜನ ಒಬ್ಬರಿಗೊಬ್ಬರು ಕೈಜೋಡಿಸಿ, ಹೋರಾಡಲಿದ್ದಾರೆ ಎಂದು ನಿಮಗೆ ಗೊತ್ತಾಗಲಿದೆ ಎಂದು ಬರೆದಿದ್ದಾರೆ.






