ಬಡವರಿಗೆ ಹಣ ಪಡೆಯದೇ ಚಿಕಿತ್ಸೆ ನೀಡೋ ಡಾಕ್ಟರ್!

admin
By admin
2 Min Read

ಡಾ. ಮನೋಜ್ ದುರೈರಾಜ್. ಜನಸೇವೆಯಲ್ಲಿ ಸಂತಸವನ್ನು ಕಾಣುತ್ತಿರುವ ಹೃದಯವಂತ ವೈದ್ಯರು. ಆರೋಗ್ಯ ಸೇವೆ ಹೆಸರಿನಲ್ಲಿ ಸುಲಿಗೆ ಮಾಡುವ ಇಂತಹ ಪರಿಸ್ಥಿತಿಯಲ್ಲೂ ಮರುಭೂಮಿಯಲ್ಲಿ ಓಯಸಿಸ್ ನಂತೆ ಡಾ. ಎಂ. ದುರೈರಾಜ್ ಹಣಕ್ಕಿಂತ ಮಾನವೀಯತೆ ಮುಖ್ಯ ಎಂದು ದುಡಿಯುತ್ತಿದ್ದಾರೆ. ಜನಸೇವೆಯಲ್ಲಿ ಸಂತಸವನ್ನು ಕಾಣುತ್ತಿದ್ದಾರೆ.
ಅಪರೂಪದ ವ್ಯಕ್ತಿ ಡಾ.ಎಂ. ದುರೈರಾಜ್ ಇಡೀ ಮಹಾರಾಷ್ಟ್ರದಲ್ಲಿ ಮನೆಮಾತಾಗಿದ್ದಾರೆ. ಇವರ ಆರೋಗ್ಯ ಸೇವೆ ನಿಜಕ್ಕೂ ಶ್ಲಾಘನೀಯ ಹಾಗೂ ವೈದ್ಯ ವೃತ್ತಿಯನ್ನು ನಿಜಕ್ಕೂ ಬಡವರ ಸೇವೆಗಾಗಿಯೇ ಬಳಸಿಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರದ ಪುಣೆಯ ಡಾ. ಮನೋಜ್ ಅವರು ರೋಗಿಗಳ ಹೃದಯ ಶಸ್ತ್ರಚಿಕಿತ್ಸೆ ಮಾಡಿ ಕಾಯಿಲೆ ಗುಣಪಡಿಸುವುದು ಮಾತ್ರವಲ್ಲದೆ ತಮ್ಮ ಬಳಿಗೆ ಬರುವ ರೋಗಿಗೆ ಹೊಸ ಜೀವನದ ಆಶಾಕಿರಣವನ್ನು ಮೂಡಿಸುತ್ತಿದ್ದಾರೆ.


ನೋಡಿ, ಡಾ. ಎಂ. ದುರೈರಾಜ್ ರೋಗದಿಂದ ನರಳುತ್ತಾ ಹಣ ಇಲ್ಲದೆ ಬರುವ ಬಡವರನ್ನು ಹಣಕ್ಕಾಗಿ ವಾಪಸ್ಸು ಕಳುಹಿಸುವ ಗುಣ ಇವರಿಗೆ ಬಂದೇ ಇಲ್ಲ. ಎಂತಹ ದೀನರಿಗೂ ಆರೋಗ್ಯ ಸೇವೆಯನ್ನು ನೀಡುತ್ತಾರೆ. ವಿಶೇಷವಾಗಿ ಮಕ್ಕಳು ಎಂದರೆ ಪಂಚಪ್ರಾಣ. ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳಿಗೆ ವಿಶೇಷ ಚಿಕಿತ್ಸೆ ಹಾಗೂ ಆರೈಕೆಯನ್ನು ಮಾಡಿಕೊಂಡು ಬರುತ್ತಿದ್ದಾರೆ.
ಇನ್ನು ಡಾ. ಎಂ. ದುರೈರಾಜ್ ಅವರು ತಮ್ಮ ತಂದೆ ಸ್ಥಾಪಿಸಿರುವ ಫೌಂಡೇಷನ್ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ 22 ವರ್ಷಗಳ ಹಿಂದೆ ಅವರ ತಂದೆ ದುರೈರಾಜ್ ಅವರು ನಿರ್ಮಾಣ ಮಾಡಿರುವ ಮರಿಯನ್ ಕಾರ್ಡಿಯಾಕ್ ಸೆಂಟರ್ ಮತ್ತು ಸಂಶೋಧನಾ ಸಂಸ್ಥೆಗೆ ಡಾ. ಮನೋಜ್ 2005ರಲ್ಲಿ ಸೇರಿ ತಮ್ಮ ಸೇವೆಯನ್ನು ನೀಡುತ್ತಾ ಬಂದಿದ್ದಾರೆ.


ಡಾ. ಎಂ. ದುರೈರಾಜ್ ಅವರು ವೈದ್ಯ ವೃತ್ತಿಯಲ್ಲಿ ಆರಂಭಿಸಿದ ಮೇಲೆ ಅವರ ನೆರವಿಗೆ ಬಂದ ಮೂವತ್ತು ದಾನಿಗಳು. ಅವರೆಲ್ಲರ ನೆರವು ಪಡೆದು ಇದುವರೆಗೂ ಡಾ. ಮನೋಜ್ 350ಕ್ಕೂ ಹೆಚ್ಚು ರೋಗಿಗಳ ಶಸ್ತ್ರಚಿಕಿತ್ಸೆಯನ್ನು ಹಣ ಪಡೆಯದೆ ಉಚಿತವಾಗಿ ಮಾಡಿ ಮಾನವೀಯತೆಯನ್ನು ಮೆರೆದಿದ್ದಾರೆ.
ಅಷ್ಟೇ ಮಾತ್ರವಲ್ಲದೆ, ಬಹಳಷ್ಟು ಬಡ ರೋಗಿಗಳಿಗೆ ಸರ್ಕಾರದ ಯೋಜನೆಗಳ ಮೂಲಕವೂ ಶಸ್ತ್ರಚಿಕಿತ್ಸೆಗೆ ವೆಚ್ಚ ಭರಿಸುವ ಕೆಲಸ ಮಾಡುವ ಈ ಸಂಸ್ಥೆಯು ಜನರಿಗೆ ಸಹಾಯವನ್ನು ನೀಡುತ್ತಿದೆ. ಬಿಪಿಎಲ್ ಕಾರ್ಡ್ ಲಭ್ಯವಿಲ್ಲದೇ ಇರುವ ರೋಗಿಗಳ ಚಿಕಿತ್ಸೆಗಾಗಿ ಅವರು ಮಹಾರಾಷ್ಟ್ರದಿಂದ ಹೊರಗೆ ಹೋಗಿ ಚಿಕಿತ್ಸೆ ನೀಡಿದ ಉದಾಹರಣೆಗಳು ಕೂಡಾ ಉಂಟು.
ಏನೇ ಹೇಳಿ ಆರೋಗ್ಯ ಸೇವೆ ಹೆಸರಿನಲ್ಲಿ ಹಣ ಸುಲಿಗೆ ಮಾಡುವ, ಬಡವರೆಂದರೆ ತಾತ್ಸಾರ ಮಾಡುವ ಎಷ್ಟೋ ವೈದ್ಯರಲ್ಲಿ ಡಾ. ಎಂ. ದುರೈರಾಜ್ ನಂತಹ ವೈದ್ಯರು ನಿಜಕ್ಕೂ ನಮ್ಮ ಸಮಾಜಕ್ಕೆ ಅಗತ್ಯವಿದ್ದು, ಇವರು ಮಾದರಿ ವೈದ್ಯರಾಗಿದ್ದಾರೆ.

Share This Article