ಬೆಂಗಳೂರಿನಲ್ಲಿ ಮಲಗಿದ್ದ ಸ್ಥಿತಿಯಲ್ಲಿ ವೃದ್ಧ ಸಜೀವ ದಹನ!

tnit editors
1 Min Read

ಬೆಂಗಳೂರಿನಲ್ಲಿ ಮಲಗಿದ್ದ ಸ್ಥಿತಿಯಲ್ಲಿ ವೃದ್ಧ ಸಜೀವ ದಹನ!

ಬೆಂಗಳೂರು: ನಗರದ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಮೈಲಸಂದ್ರ ಬಳಿ ವೃದ್ಧರೊಬ್ಬರು ಮನೆಯಲ್ಲಿ ಮಲಗಿದ್ದ ಸ್ಥಿತಿಯಲ್ಲೇ ಸಜೀವ ದಹನಗೊಂಡ ಘಟನೆ ಇಂದು ಸಂಭವಿಸಿದೆ.

ಮೃತರನ್ನು 80 ವರ್ಷದ ಮೈಲಾರಪ್ಪ ಎಂದು ಗುರುತಿಸಲಾಗಿದೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪ್ರಾಥಮಿಕ ತನಿಖೆಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿರುವ ಸಾಧ್ಯತೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಅಗ್ನಿಶಾಮಕ ದಳ ಹಾಗೂ ವಿದ್ಯುತ್ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪೊಲೀಸರ ಮಾಹಿತಿ ಪ್ರಕಾರ, ಮೈಲಾರಪ್ಪ ಅವರಿಗೆ ನಾಲ್ವರು ಮಕ್ಕಳು ಇದ್ದು, ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಮೈಲಸಂದ್ರ ತಿಮ್ಮರಾಯಪ್ಪ ಸರ್ಕಲ್ ಸಮೀಪ ಮಗನ ಮನೆ ಬಳಿಯ ಮತ್ತೊಂದು ಮನೆಯಲ್ಲಿ ಅವರು ವಾಸವಾಗಿದ್ದರು. ಗ್ಯಾಂಗ್ರಿನ್‌ನಿಂದ ಎಡಕಾಲು ಕತ್ತರಿಸಲಾಗಿದ್ದ ಕಾರಣ, ಸ್ವತಃ ಓಡಾಡಲು ಸಾಧ್ಯವಾಗುತ್ತಿರಲಿಲ್ಲ. ಅವರ ಯೋಗಕ್ಷೇಮವನ್ನು ಮೊಮ್ಮಕ್ಕಳು ಪ್ರತಿದಿನ ಬಂದು ವಿಚಾರಿಸುತ್ತಿದ್ದರು.

ನಿನ್ನೆ ರಾತ್ರಿ ಮೊಮ್ಮಗ ಊಟ ನೀಡಿ ತೆರಳಿದ್ದನು. ಈ ವೇಳೆ ಬೇಧಿ ಇದ್ದ ಕಾರಣ ಮಾತ್ರೆ ತಂದುಕೊಡಲು ಹೇಳಿದ್ದು, ಮೊಮ್ಮಗ ಮಾತ್ರೆ ನೀಡಿ ಮನೆಗೆ ತೆರಳಿದ್ದಾನೆ. ಇಂದು ಬೆಳಿಗ್ಗೆ ಸುಮಾರು 2 ಗಂಟೆ ಸುಮಾರಿಗೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಬೆಂಕಿ ನಂದಿಸಿದರೂ, ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮೈಲಾರಪ್ಪ ಅವರ ಶವ ಪತ್ತೆಯಾಗಿದೆ. ಘಟನೆ ಸಂಬಂಧ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಅಗ್ನಿ ಅವಘಡಕ್ಕೆ ನಿಖರ ಕಾರಣ ಪತ್ತೆ ಹಚ್ಚಲು ತನಿಖೆ ಮುಂದುವರಿಸಿದ್ದಾರೆ.

Share This Article