ಬೆಂಗಳೂರಿನಲ್ಲಿ 19ನೇ‌ ಮಹಡಿಯಿಂದ ಬಿದ್ದು ವ್ಯಕ್ತಿ ಆತ್ಮಹತ್ಯೆ

1 Min Read

ಬೆಂಗಳೂರು: 19ನೇ‌ ಮಹಡಿಯಿಂದ ಬಿದ್ದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾದವನಗರದಲ್ಲಿರುವ ಖಾಸಗಿ ಹೋಟೆಲ್‌ ವೊಂದರಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ತಮಿಳುನಾಡು ಮೂಲದ ಶರಣ್ (28) ಎಂದು ತಿಳಿದುಬಂದಿದೆ. ಈತ ಭಾನುವಾರ ಹೋಟೆಲ್‌ಗೆ ಬಂದು ಚೆಕ್ ಇನ್ ಆಗಿದ್ದು, ಬ್ಯುಸಿನೆಸ್ ವಿಚಾರವಾಗಿ ಬಂದಿರುವುದಾಗಿ ರಿಸೆಪ್ಷನ್ ಬುಕ್‌ನಲ್ಲಿ ಎಂಟ್ರಿ ಮಾಡಿದ್ದ. ಈ ಹಿಂದೆ ಕೂಡ ಈತ ಹೋಟೆಲ್‌ಗೆ ಬಂದು ಉಳಿದುಕೊಂಡಿದ್ದ. ಈ ಬಾರಿ ಎರಡು ದಿನ ಉಳಿಯೋದಾಗಿ ಹೋಟೆಲ್ ಸಿಬ್ಬಂದಿಗೆ ಹೇಳಿದ ಈತ,
ಇಂದು ಮಧ್ಯಾಹ್ನ 2 ಗಂಟೆಯ ಸುಮಾರಿಗೆ 19ನೇ ಫ್ಲೋರ್‌ನ ಬಾಲ್ಕನಿಗೆ ಬಂದು ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಳ್ಳುವ ಅರ್ಧಗಂಟೆಗೂ ಮೊದಲು ಈತ ತನ್ನ ರೂಮಿನಿಂದ ಹೊರಗೆ ಬಂದು ಬಾಲ್ಕನಿಯಲ್ಲಿ ಕುಳಿತಿದ್ದು, ಆತ್ಮಹತ್ಯೆ ಮಾಡಿಕೊಳ್ಳಬೇಕೋ ಬೇಡವೋ ಎಂದು ಯೋಚಿಸಿದ್ದ ಎಂದು ಶಂಕಿಸಲಾಗಿದೆ. ಕೊನೆಗೆ 19ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ಹೈಗ್ರೌಂಡ್ಸ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Share This Article