ಬೇಡವಾದ ಔಷಧ ಸಂಗ್ರಹಿಸುವುದೇ ಈ ಮೆಡಿಸಿನ್ ಬಾಬಾ ಕೆಲಸ .. !
ಓಂಕಾರ್ನಾಥ್ ಶರ್ಮಾ .. 80 ವರ್ಷದ ಹಣ್ಣು ಹಣ್ಣು ಮುದುಕ, ವಯಸ್ಸು ಕೊಂಚ ಹೆಚ್ಚಾದ್ರೂ ಇವರ ಉತ್ಸಾಹಕ್ಕೇನು ಕೊರತೆ ಇಲ್ಲ. ಈ ಓಂಕಾರ್ನಾಥ್ ಶರ್ಮಾ ಅವರು “ಮೆಡಿಸಿನ್ ಬಾಬಾ” ಅಂತಲೇ ದೆಹಲಿಯಲ್ಲಿ ಫೇಮಸ್. ಓಂಕಾರ್ನಾಥ್ ಅವರು ಡಾಕ್ಟರ್ ಅಲ್ಲ. ಔಷಧಿ ವ್ಯಾಪಾರಿಯೂ ಅಲ್ಲ. ಆದ್ರೆ ಇವರು ಮಾಡುವ ಕೆಲಸ ಯಾವ ವೈದ್ಯ ಮಾಡುವ ಕೆಲಸಕ್ಕೂ ಕಡಿಮೆ ಇಲ್ಲ.
ಓಂಕಾರ್ನಾಥ್ ಶರ್ಮಾ ಅವರು ಕಾಲು ಊನುವಾದರೂ ದೆಹಲಿಯ ಎಲ್ಲಾ ಕಡೆ ಓಡಾಡುತ್ತಾರೆ. ಮನೆ ಮನೆ ತಿರುಗುತ್ತಾರೆ. ಅಲ್ಲಿ ಉಪಯೋಗಕ್ಕೆ ಬಾರದ ಮೆಡಿಸಿನ್ಗಳನ್ನು ಸಂಗ್ರಹಿಸುತ್ತಾರೆ. ಹಾಗೇ ಸಂಗ್ರಹವಾದ ಔಷಧಗಳನ್ನು ಬಡವರಿಗೆ ಹಂಚುತ್ತಾರೆ. ಓಂಕಾರ್ನಾಥ್ ಅವರು ಈ ಕೆಲಸ ಶುರುಮಾಡಿಕೊಂಡು ಇಲ್ಲಿಗೆ ಏಳೆಂಟು ವರ್ಷಗಳೇ ಕಳೆದಿವೆ.
ಈ ಮೊದಲು ಓಂಕಾರ್ನಾಥ್ ಅವರು ಉತ್ತರಪ್ರದೇಶದ ನೋಯ್ಡಾದ ಬಳಿಯಿರುವ ಕೈಲಾಶ್ ಆಸ್ಪತ್ರೆಯ ಬ್ಲಡ್ಬ್ಯಾಂಕ್ನಲ್ಲಿ ಟೆಕ್ನಿಷಿಯನ್ ಕೆಲಸ ಮಾಡಿ ನಿವೃತ್ತಿ ಹೊಂದಿದ್ದರು. ನಿವೃತ್ತಿಯ ನಂತರ ಓಂಕಾರ್ ಆರಾಮವಾಗಿ ಕಾಲ ಕಳೆಯುತ್ತಿದ್ದರು. ಆದ್ರೆ 2008ರಲ್ಲಿ ನಡೆದ ಘಟನೆ ಒಂದು ಓಂಕಾರ್ ಅವರ ಮನಸ್ಸುನ್ನು ಬದಲಿಸಿತು.
ಅದೇನೆಂದರೆ, ಪೂರ್ವ ದೆಹಲಿಯಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಸೇತುವೆ ಕುಸಿದು ಬಿದ್ದು ಇಬ್ಬರು ಮರಣ ಹೊಂದಿದ್ರು. ಹಲವು ಮಂದಿ ಗಾಯಗೊಂಡ್ರು. ಈ ಘಟನೆ ಓಂಕಾರ್ ಮನಸ್ಸಿನ ಮೇಲೆ ಸಾಕಷ್ಟು ಪರಿಣಾಮ ಬೀರಿತು. ಸರ್ಕಾರಿ ಆಸ್ಪತ್ರೆಗಳ ದು:ಸ್ಥಿತಿ ಮತ್ತು ಬಡವರಿಗೆ ಔಷಧಿಗಳು ಕೈಗೆಟುಕುತ್ತಿಲ್ಲ ಅನ್ನುವ ಸತ್ಯ ಓಂಕಾರ್ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿತು. ಅಷ್ಟೇ ಅಲ್ಲ ಔಷಧಿಗಳನ್ನು ಸಪ್ಲೈ ಮಾಡುವ ಚೈನ್ ಅನ್ನು ಬಿಲ್ಡ್ ಮಾಡುವ ಕಾರ್ಯದಲ್ಲಿ ತೊಡಗಿದ್ರು.
ಅಷ್ಟಕ್ಕೂ ಈ ಮೆಡಿಸಿನ್ ಬಾಬಾ ಅವರು ಸುಖವಾಗಿ ಜೀವಿಸುವಷ್ಟು ತಾಕತ್ತು ಹೊಂದಿಲ್ಲ. ಬಾಡಿಗೆ ಮನೆಯೊಂದರಲ್ಲಿ ಓಂಕಾರ್, ಮಡದಿ ಮತ್ತು 45 ವರ್ಷ ವಯಸ್ಸಿನ ಮಗ ಜಗ್ಮೋಹನ್ ಜೊತೆ ವಾಸಿಸುತ್ತಿದ್ದಾರೆ. ಮಗ ಮಾನಸಿಕ ಅಸ್ವಸ್ಥ ಅನ್ನೋದು ಕೂಡ ಇಲ್ಲಿ ಗಮನಿಸಬೇಕಾದ ವಿಷಯ.
ಓಂಕಾರ್ ಪ್ರತಿದಿನ ಕನಿಷ್ಠ 5 ರಿಂದ 6 ಕಿಲೋಮೀಟರ್ ನಡೆದೇ ಸಾಗುತ್ತಾರೆ. ಮೆಟ್ರೋದಲ್ಲಿ ಓಡಾಡುವಷ್ಟು ಆರ್ಥಿಕ ಸ್ಥಿತಿ ಚೆನ್ನಾಗಿ ಇರದೇ ಇರುವುದರಿಂದ ಡೆಲ್ಲಿಯ ಬಸ್ಗಳಲ್ಲಿ ಸಂಚರಿಸಿ, ಗಲ್ಲಿ ಗಲ್ಲಿಗಳಲ್ಲಿ ಸುತ್ತಾಡಿ ಔಷಧಿಗಳನ್ನು ಸಂಪಾದಿಸುತ್ತಾರೆ. ಬಸ್ಗಳು ಹೋಗದೇ ಇರುವ ಜಾಗಕ್ಕೂ ಓಂಕಾರ್ ತೆರಳಿ ಔಷಧಿ ಸಂಗ್ರಹಿಸುತ್ತಾರೆ. ಓಂಕಾರ್ ಪ್ರತಿ ತಿಂಗಳು 4 ರಿಂದ 6 ಲಕ್ಷ ರೂಪಾಯಿ ಬೆಲೆ ಬಾಳುವ ಔಷಧಿಗಳನ್ನು ಸಂಗ್ರಹಿಸಿ ಬೇಕಾದವರಿಗೆ ಹಂಚುತ್ತಾರೆ.
ಇಂದು ಓಂಕಾರ್ ಅವರು ದೆಹಲಿಯಾದ್ಯಂತ ಮೆಡಿಸಿನ್ ಬಾಬಾ ಅಂತಲೇ ಖ್ಯಾತರಾಗಿದ್ದಾರೆ. ಉಚಿತವಾಗಿ ಈ ಸೇವೆ ಮಾಡುವ ಓಂಕಾರ್ ಅವರಿಗೆ ಅದೆಷ್ಟು ಧನ್ಯವಾದಗಳನ್ನು ಅರ್ಪಿಸಿದ್ರೂ ಕಡಿಮೆಯೇ. ಪ್ರತಿಯೊಬ್ಬರಿಗೂ ಸ್ಫೂರ್ತಿಯ ಶಕ್ತಿಯೇ ಸರಿ.