ಲೈಂಗಿಕ ದೌರ್ಜನ್ಯ ಆರೋಪ: KPCC ಕಾರ್ಯದರ್ಶಿ ಸ್ಥಾನದಿಂದ ಗುರಪ್ಪ ನಾಯ್ಡು ಉಚ್ಚಾಟನೆ
ಬೆಂಗಳೂರು: ಕೆಪಿಸಿಸಿ ಕಾರ್ಯದರ್ಶಿ ಗುರಪ್ಪ ನಾಯ್ಡು ವಿರುದ್ದ ಲೈಂಗಿಕ ಕಿರುಕುಳ ಆರೋಪದ ಮೇಲೆ ದೂರು ದಾಖಲಾಗಿದೆ. ಬೆಂಗಳೂರಿನ ತ್ಯಾಗರಾಜನಗರದ ಖಾಸಗಿ ಶಾಲೆಯಲ್ಲಿ ಗುರಪ್ಪ ನಾಯ್ಡು ಲೈಂಗಿಕ ಕಿರುಕುಳ ನೀಡಿದ್ದಾರೆ ಅಂತ ಆರೋಪಿಸಿ, ದೂರು ಕೂಡ ದಾಖಲಾಗಿದೆ. ಇನ್ನೂ ಈ ಆರೋಪದ ಮೇಳೆ ಪಕ್ಷದಿಂದ ಅವರನ್ನು ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ.
ಪಕ್ಷದ ಶಿಸ್ತು ಸಮಿತಿಯ ಅಧ್ಯಕ್ಷ ಕೆ.ರೆಹಮಾನ್ ಖಾನ್ ಅವರು ಕ್ರಮ ಕೈಗೊಂಡಿದ್ದು, ಗುರಪ್ಪ ನಾಯ್ಡು ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಅವಧಿಗೆ ಉಚ್ಛಾಟನೆ ಮಾಡಿದ್ದಾರೆ.ಖಾಸಗಿ ಶಾಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕಿಯೊಬ್ಬರು ದೂರು ನೀಡಿದ್ದು, ಗುರಪ್ಪ ನಾಯ್ಡು ಹೆಣ್ಣು ಮಕ್ಕಳ ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಹೆದರಿಸುವುದು,
ಮಾತನಾಡುವ ನೆಪದಲ್ಲಿ ಕಚೇರಿಗೆ ಕರೆದು ಕೆಟ್ಟದಾಗಿ ನೋಡುವುದು, ಯಾವಾಗ ರೆಡಿಯಾಗ್ತಿಯಾ ಎಂದು ಅಸಭ್ಯವಾಗಿ ವರ್ತಿಸಿ, ಮಾನಸಿಕ ಕಿರುಕುಳ ನೀಡುತ್ತಿದ್ದಾರೆಂದು ದೂರಿನಲ್ಲಿ ಆರೋಪಿಸಿದ್ದರು. ಶಿಕ್ಷಕಿ ನೀಡಿದ ದೂರಿನ ಮೇರೆಗೆ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.