ವಕೀಲೆ ಚೈತ್ರಾ ಗೌಡ ಅನುಮಾನಾಸ್ಪದ ಸಾವು ಪ್ರಕರಣ: ಆತ್ಮಹತ್ಯೆ ಅನ್ನೋದು ತನಿಖೆಯಲ್ಲಿ ಬಯಲು

By
1 Min Read

ಬೆಂಗಳೂರು: ಕೆಎಎಸ್ ಅಧಿಕಾರಿ ಪತ್ನಿ ಹಾಗೂ ಹೈಕೋರ್ಟ್ ವಕೀಲರಾದ ಚೈತ್ರಾ ಗೌಡ ಅವರದ್ದು ಕೊಲೆಯಲ್ಲ, ಆತ್ಮಹತ್ಯೆ ಎಂದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹೌದು ಇತ್ತೀಚೆಗಷ್ಟೇ ಅನುಮಾನಾಸ್ಪದ ಸಾವಿಗೀಡಾಗಿದ್ದ ಚೈತ್ರಾ ಗೌಡ ಪ್ರಕರಣದಲ್ಲಿ ಡೆತ್ ನೋಟ್ ಸಹ ಪತ್ತೆಯಾಗಿದೆ. ಮೇ 11ರಂದು ವಕೀಲೆ ಚೈತ್ರಾ ಗೌಡ ಬೆಂಗಳೂರಿನ ಸಂಜಯನಗರದ ಅಣ್ಣಯ್ಯಪ್ಪ ಲೇಔಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆದ್ರೆ ಚೈತ್ರಾ ಕುಟುಂಬಸ್ಥರು ಕೊಲೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ಕೆಎಎಸ್ ಅಧಿಕಾರಿ ಶಿವಕುಮಾರ್‌ನನ್ನು ಪೊಲೀಸರು ವಿಚಾರಣೆ ನಡೆಸಿದ್ದರು.
ವಿಚಾರಣೆ ವೇಳೆ ಶಿವಕುಮಾರ್, ಪತ್ನಿಯೊಂದಿಗೆ ಯಾವುದೇ ದ್ವೇಷ ಇರಲಿಲ್ಲ. ಹಣಕಾಸಿನ ತೊಂದರೆಯೂ ಇರಲಿಲ್ಲ. ಆದ್ರೆ ಇತ್ತೀಚೆಗೆ ಖಿನ್ನತೆಗೆ ಒಳಗಾಗಿದ್ದರು ಅಂತ ಹೇಳಿದ್ದರು.ಈ ನಡುವೆ ಕುಟುಂಬಸ್ಥರೊಂದಿಗೆ ಚೈತ್ರಾ ಮಾತನಾಡುವಾಗ ಮೂರು ತಿಂಗಳ ಹಿಂದೆಯೇ ಸಾಯೋ ಮಾತುಗಳನ್ನಾಡಿದ್ದರು, ಆಗ ಕುಟುಂಬಸ್ಥರೇ ಧೈರ್ಯತುಂಬಿದ್ದರು. ಆನಂತರವೇ ಚೈತ್ರಾ ಹಿಂದೆಯೇ ಡೆತ್ ನೋಟ್ ಬರೆದಿಟ್ಟಿದ್ದರು ಅನ್ನೋ ಮಾಹಿತಿಯೂ ತಿಳಿದುಬಂದಿದೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಸಂಜಯ್ ನಗರದ ಪೊಲೀಸರಿಗೆ, ಮನೆಯಲ್ಲಿ ಸಿಕ್ಕ ಡೆತ್ ನೋಟ್‌ ಚೈತ್ರಾ ಅವರೇ ಬರೆದಿದ್ದಾರೆ ಅನ್ನೋದು ಕನ್ಫರ್ಮ್‌ ಆಗಿದೆ. ಮರಣೋತ್ತರ ಪರೀಕ್ಷೆಯಲ್ಲೂ ಆಕೆ ಆತ್ಮಹತ್ಯೆ ಮಾಡಿಕೊಂಡಿರೋದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸಂಜಯ್‌ನಗರ ಪೊಲೀಸರು ತನಿಖೆ ನಡೆಸಿ ಹಿರಿಯ ಅಧಿಕಾರಿಗಳಿಗೆ ವರದಿ ನೀಡಿದ್ದಾರೆ.

Share This Article