ಸಿಎ ಸೈಟ್ ಕಬಳಿಕೆ ಆರೋಪ: ಕಾಂಗ್ರೆಸ್ ಸರ್ಕಾರದ ವಿರುದ್ಧ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ
ಬೆಂಗಳೂರು: ಕಾಂಗ್ರೆಸ್ ಪಕ್ಷದ ಕಚೇರಿಗಾಗಿ ಸಿಎ ಸೈಟ್ ಪಡೆಯಲು ನಿಯಮದಲ್ಲಿ ಅವಕಾಶವಿಲ್ಲ. ಆದರೂ ರಾಜ್ಯ ಸರ್ಕಾರ ರಾಜ್ಯಾದ್ಯಂತ ಸಿಎ ಸೈಟ್ಗಳನ್ನು ಕಬಳಿಸುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ರಾಜ್ಯ ಸರ್ಕಾರ ಬಡವರಿಗೆ ಮನೆ ಭೂಮಿ ನೀಡದೇ, ಸರ್ಕಾರವೇ ಭೂಮಿ ಕಬಳಿಸುತ್ತಿದೆ. ತುಮಕೂರು, ಚಾಮರಾಜನಗರ, ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪಾರ್ಟಿ ಕಚೇರಿಗೆ ಸಿಎ ಸೈಟ್ ಪಡೆದಿದ್ದಾರೆ” ಎಂದು ದೂರಿದರು.
ಚಿಕ್ಕಬಳ್ಳಾಪುರದಲ್ಲಿ ಕೇವಲ 22 ಲಕ್ಷ ರೂ.ಗೆ, ಬಾದಾಮಿಯಲ್ಲಿ 1 ಲಕ್ಷ 22 ಸಾವಿರ ರೂ.ಗೆ ಹಾಗೂ ಚನ್ನರಾಯಪಟ್ಟಣದಲ್ಲಿ ಸಹ ಸೈಟ್ ಪಡೆದಿರುವುದಾಗಿ ಅವರು ಆರೋಪಿಸಿದರು. “ಅವರದೇ ಪೆನ್ನು, ಅವರದೇ ಒಪ್ಪಿಗೆ, ಅವರದೇ ಸಹಿ. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಬೆಲೆಬಾಳುವ ಸೈಟ್ ಪಡೆದಿದ್ದಾರೆ” ಎಂದು ಟೀಕಿಸಿದರು.
“ಎಸ್ಆರ್ ವ್ಯಾಲ್ಯುವಿನ ಕೇವಲ 5% ಮಾತ್ರ ನೀಡಿ ಸಿಎ ಸೈಟ್ ಕಬಳಿಸಲಾಗಿದೆ. ಅಧಿಕಾರಿಗಳು ಸೈಟ್ ನೀಡಲು ಅವಕಾಶವಿಲ್ಲ ಎಂದು ಹೇಳಿದ್ದರೂ, ಸಂಪುಟದ ಮುಂದಿಟ್ಟು ಒಪ್ಪಿಗೆ ಪಡೆದಿದ್ದಾರೆ. ಸುಮಾರು 40 ಕೋಟಿ ರೂ. ಮೌಲ್ಯದ ಸೈಟ್ಗಳನ್ನುಕೇವಲ 2 ಕೋಟಿ ರೂ.ಗೆ ಪಡೆದುಕೊಂಡಿದ್ದಾರೆ” ಎಂದು ಗಂಭೀರ ಆರೋಪ ಮಾಡಿದರು.
“ರಾಜಕೀಯ ಪಕ್ಷ ಒಂದು ಸೈಟ್ ಪಡೆಯಬಹುದು. ಆದರೆ ಪಂಚಾಯತ್ ಮಟ್ಟದಲ್ಲೂ ಭೂ ಕಬಳಿಕೆ ಮಾಡಲಾಗಿದೆ. ತಕ್ಷಣ ಸೈಟ್ ವಾಪಸ್ ಕೊಡಬೇಕು. ಇಲ್ಲದಿದ್ದರೆ ಹೋರಾಟ ಮತ್ತು ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.






