ಕಾರವಾರ:- ಹಿಂದೂ ಕಾರ್ಯಕರ್ತನ ಮೇಲೆ ವಿಚಾರಣೆ ನೆಪದಲ್ಲಿ ಎಸ್ಪಿ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ಹೀಗಾಗಿ ಕಾರ್ಯಕರ್ತರು ಭಟ್ಕಳದಲ್ಲಿ ಹೆದ್ದಾರಿ ತಡೆದು ಠಾಣೆಗೆ ಮುತ್ತಿಗೆಗೆ ಯತ್ನಿಸಿದ್ದಾರೆ.
ಭಟ್ಕಳದ ಹನುಮ ನಗರದ ಹಿಂದೂ ಸಂಘಟನೆ ಕಾರ್ಯಕರ್ತ ಶ್ರೀನಿವಾಸ್ ನಾಯ್ಕ ಹಲ್ಲೆಗೊಳಗಾಗಿದ್ದು, ಭಟ್ಕಳ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಂಗಳವಾರ ಶಿರಸಿಯಲ್ಲಿ ರೌಡಿಶೀಟರ್ ಪೆರೇಡ್ ಮಾಡಿದ್ದ ಎಸ್.ಪಿ ಎಂ.ನಾರಾಯಣ್ರವರು 6 ಪ್ರಕರಣದಲ್ಲಿ ಆರೋಪಿಯಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಗಡಿಪಾರಾಗಿದ್ದ ಆಟೋ ಚಾಲಕ ಶ್ರೀನಿವಾಸ ನಾಯ್ಕರನ್ನು ಮಂಗಳವಾರ ಬೆಳಗ್ಗೆ ಭಟ್ಕಳ ಪೊಲೀಸರು ಶಿರಸಿಗೆ ಕರೆದೊಯ್ದಿದ್ದರು. ಶಿರಸಿ ನಗರ ಠಾಣೆಯಲ್ಲಿ ಇದ್ದ ಎಸ್.ಪಿ ಎಂ.ನಾರಾಯಣ್ರವರು ತನಿಖೆ ನೆಪದಲ್ಲಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ಈ ಆರೋಪದ ಬೆನ್ನಲ್ಲೇ ಬಿಜೆಪಿ, ವಿಶ್ವ ಹಿಂದೂ ಪರಿಷತ್ ಸೇರಿದಂತೆ ವಿವಿಧ ಸಂಘಟನೆಗಳು ಭಟ್ಕಳ ಶಹರಾ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು. ಪ್ರತಿಭಟನೆಯಲ್ಲಿ ಮಾಜಿ ಬಿಜೆಪಿ ಶಾಸಕ ಸುನೀಲ್ ನಾಯ್ಕ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.