ತಿರು ರಾಮು ಬೈಲ್ವಾನ್. ತಮಿಳುನಾಡಿನ ಮಧುರೆ ಸಮೀಪದ ಪುಟ್ಟ ಗ್ರಾಮದವರು. ಇವರ ಈಗಿನ ವಯಸ್ಸು ಬರೋಬ್ಬರಿ 80 ವರ್ಷ. ಈ ಇಳಿವಯಸ್ಸಿನಲ್ಲೂ ಕಟ್ಟುಮಸ್ತಾದ ದೇಹ, ನಗು ಮೊಗ. ಇವರೊಂದು ರೀತಿ ಬ್ರಹ್ಮವಿದ್ಯೆ ಬಲ್ಲವರು. ಇವರು ಕಲಿತಿರುವ ವಿದ್ಯೆ ಒಂದೆರಡಲ್ಲ, ಹಲವಾರು. ಅವುಗಳನ್ನು ಯಾವಾಗ? ಯಾವುದನ್ನು? ಹೇಗೆ? ಬಳಸಬೇಕೆಂಬುವುದನ್ನು ಮಕ್ಕಳಿಗೆ ಹೇಳಿಕೊಡುತ್ತಿದ್ದಾರೆ.
ತಮಿಳುನಾಡಿನ ಆರಾಧ್ಯ ದೈವ ಮುರುಗನ್ ಆರಾಧಕರಾದ 80ರ ಹರೆಯದ ತಿರು ರಾಮು ಅವರದು ಕೃಷಿಕ ಕುಟುಂಬ. ಹಳ್ಳಿ ವಾತಾವರಣದಲ್ಲಿ ಸ್ವಚ್ಛಂದ ಬದುಕು ನಡೆಸುತ್ತಿದ್ದಾರೆ. ಇವರ ವಿಶಾಲವಾದ ಮನೆಯ ಅಂಗಳವೆ ಒಂದು ರೀತಿ ದೊಡ್ಡ ಅಖಾಡ. ಇಲ್ಲಿ ತಿರುರಾಮು, ಮಕ್ಕಳಿಗೆ ನಿತ್ಯವೂ ಮಲ್ಲಯುದ್ಧ, ದೊಣ್ಣೆ ವರಸೆ, ಕುಸ್ತಿ, ಕರಾಟೆ, ಸಿಲಂಬಮ್ ಹೇಳಿಕೊಡುತ್ತಿದ್ದಾರೆ. ಯಾವುದೇ ಜಾತಿ, ಧರ್ಮ, ಪಂಥ ಎನ್ನದೆ ಎಲ್ಲರಿಗೂ ತಾವು ಕಲಿತ ವಿದ್ಯೆಯನ್ನ ಧಾರೆ ಎರೆಯುತ್ತಿದ್ದಾರೆ.
ತಿರು ರಾಮು ಅವರು ಕಲಿತಿರುವ ವಿದ್ಯೆಗಳಿಗೆ ಗುರುಗಳೇ ಇಲ್ಲವಂತೆ . ಬಾಲಕರಾಗಿದ್ದಾಗ ಅವರ ಆರಾಧ್ಯ ದೈವ ಮುರುಗನ್ ದೇವರು, ಮಾರುವೇಷದಲ್ಲಿ ಬಂದು ಮನುಷ್ಯನ ಕುಂಡಲಿನಿಯ ಯೋಗವನ್ನು ಹೇಳಿಕೊಟ್ಟಿತ್ತಂತೆ. ಮತ್ತೆ ದೇಹದ ನಾಡಿ ಮಿಡಿತವನ್ನು ಹೇಗೆ ಕಂಡು ಹಿಡಿಯಬೇಕೆಂಬ ಬಗ್ಗೆಯೂ ತಿಳಿಸಿದರಲ್ಲದೆ, ತಾಳೆಗರಿ ವಿದ್ಯೆಯನ್ನು ತಿರು ರಾಮು ಅವರಿಗೆ ಕರಗತ ಮಾಡಿಸಿದರೆಂದು ಇಂದಿಗೂ ಅವರು ಹೇಳುತ್ತಾರೆ. ಹೆಚ್ಚಾಗಿ ನಗರ ಪ್ರದೇಶವನ್ನು ಅವಲಂಭಿಸಿದ ಇವರು, ಹಳ್ಳಿ ಮನೆಯಲ್ಲೇ ನೆಲೆ ಕಂಡು ತಾವು ಕಲಿತ ವಿದ್ಯೆಗಳನ್ನು ಎಲ್ಲರಿಗೂ ಹಂಚುತ್ತಿದ್ದಾರೆ.
80 ಹರೆಯದಲ್ಲೂ ದೇಹ ಕುಗಿಲ್ಲ. ಇಂದಿಗೂ ಸ್ವತಃ ಮಲ್ಲಯುದ್ಧದಲ್ಲಿ ತೊಡೆತೊಟ್ಟಿ ನಿಲ್ಲಬಲ್ಲ ಗಟ್ಟಿಗರು. ಕಲ್ಲು ತಿಂದರೂ ದೇಹ ಅರಗಿಸಿಕೊಳ್ಳಬೇಕು. ದೇಹವನ್ನು ಜೋಪಾನ ಮಾಡಿಕೊಳ್ಳಬೇಕು ಎಂದು ಸಾರುತ್ತಾರೆ. ಮುಖ್ಯವಾಗಿ ನಾಟಿ ವಿದ್ಯೆಯಲ್ಲಿ ಪ್ರವೀಣರು ಕೂಡ. ನಾಡಿ ಮಿಡಿತ ಅರಿತು ಆರೋಗ್ಯ, ಆಯಸ್ಸಿನ ಬಗ್ಗೆ ಹೇಳುತ್ತಾರೆ. ಮತ್ತೆ ಕೈ ಕಾಲು ಉಳುಕು, ಮುರಿತಗಳಿಗೆ ಚಿಕಿತ್ಸೆ ನೀಡೋ ನಾಟಿ ವೈದ್ಯರಾಗಿಯೂ ಮಧುರೆ ಹಾಗೂ ಸುತ್ತಮತ್ತಲ ಭಾಗದಲ್ಲೂ ಬಹಳ ಪ್ರಸಿದ್ಧಿಯಾಗಿದ್ಧಾರೆ.
ನೋಡಿ, ತಿರು ರಾಮು ಅವರು, ಮುಖ್ಯವಾಗಿ ಮಕ್ಕಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಎದುರಾಳಿಗಳಿಂದ ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂಬ ವಿದ್ಯೆಗಳನ್ನು ಕಲಿಸುತ್ತಿರುವುದು ವಿಶೇಷ. ಅದರಲ್ಲಿ ದೊಣ್ಣೆ ವರಸೆ, ಕುಸ್ತಿ, ಕರಾಟೆ ಪ್ರಮುಖವಾದುದು. ಈ ಕಲಿಕೆಗೆ ಯಾರಿಂದಲೂ ಯಾವುದನ್ನೂ ಆಪೇಕ್ಷೆ ಪಡದೆ ಉಚಿತವಾಗಿ ಹೇಳಿಕೊಡುತ್ತಿದ್ದಾರೆ. ತಾವು ಕಲಿತ ವಿದ್ಯೆ ಮುಂದೆಯೂ ಇರಬೇಕೆಂಬ ಮಹಾದಾಸೆಯಿಂದ ತಿರು ರಾಮು ಅವರಷ್ಟೇ ಅಲ್ಲ, ಅವರ ಕುಟುಂಬ ಇವರ ಕಾರ್ಯಕ್ಕೆ ಕೈ ಜೋಡಿಸಿದೆ.
ಗತಿಸಿ ಹೋಗುತ್ತಿರುವ ಭಾರತೀಯ ಪುರಾತನ ವಿದ್ಯೆಗಳನ್ನು ಮಕ್ಕಳಿಗೆ ಕಲಿಸುತ್ತಿರುವ 80ರ ಹರೆಯದ ನಾಟಿ ವೈದ್ಯ ತಿರು ರಾಮು ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.