ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಸೌಲಭ್ಯಗಳಿಗೇನೂ ಕೊರತೆ ಇಲ್ಲ. ಆದರೆ, ಇಲ್ಲಿನ ಸಿಬ್ಬಂದಿಗೆ ಮಾನವೀಯತೆ ಕೊರತೆ ಇದೆ….ಬರೀ ಲಂಚ ಲಂಚ ಲಂಚ…! ಲಂಚ ನೀಡಿದವರಿಗೆ ಮಾತ್ರ ವೀಲ್ ಚೇರ್ ಕೊಡ್ತಾರೆ ಎಂಬ ಆರೋಪ ಇದ್ದು, ಮಹಿಳೆಯನ್ನು ಎತ್ತಿಕೊಂಡು ಹೋಗುತ್ತಿರುವ ದೃಶ್ಯವೊಂದು ಈ ಆರೋಪಕ್ಕೆ ಬಲ ನೀಡಿದೆ.
ಆಸ್ಪತ್ರೆ ಸಿಬ್ಬಂದಿ ವೀಲ್ ಚೇರ್ ನೀಡದ ಹಿನ್ನೆಲೆಯಲ್ಲಿ ರೋಗಿಯನ್ನು ಕುಟುಂಬಸ್ಥರು ಎತ್ತಿಕೊಂಡು ವೈದ್ಯರ ಬಳಿ ಹೋಗುತ್ತಿದ್ದಾರೆ. ಸಿಬ್ಬಂದಿಗಳ ಈ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಸ್ಪತ್ರೆಗೆ ಬರುವುದೇ ಬಡ ರೋಗಿಗಳು. ಇಲ್ಲಿ ದಿನನಿತ್ಯ ಆಸ್ಪತ್ರೆ ಮೇಲಿನ ಆರೋಪಕ್ಕೆ ಪುಷ್ಟಿ ನೀಡುವಂತಹ ದೃಶ್ಯಗಳು ನಡೆಯುತ್ತಲೇ ಇರುತ್ತೆ. ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ರೋಗಿಯ ಸಂಬಂಧಿಗಳು ಅಂತಹ ವಿಡಿಯೋವನ್ನ ಸೆರೆ ಹಿಡಿಯುತ್ತಲೇ ಇರುತ್ತಾರೆ. ಇದೀಗ ಮಹಿಳೆಯನ್ನು ಎತ್ತಿಕೊಂಡು ಹೋಗುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ.
ಈ ಬಗ್ಗೆ ಜಿಲ್ಲಾ ಸರ್ಜನ್ ದೊಡ್ಡಮಲ್ಲಪ್ಪ ತಮಗೇನು ಗೊತ್ತಿಲ್ಲದಂತಿದ್ದಾರೆ. ಆಸ್ಪತ್ರೆಯಲ್ಲಿ ಅಂತಹ ಘಟನೆ ನಡೆದಿಲ್ಲ. ಕೂಡಲೇ ಕೂಲಂಕುಶವಾಗಿ ಪರಿಶೀಲಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಾರೆ.