ಆತ ಒಬ್ಬ ಸಾಮಾನ್ಯ ಯುವಕ, ಆದರೆ ಆತ ಬದುಕಿದ ಪರಿ, ನಮಗೆಲ್ಲರಿಗೂ ಮಾದರಿ. ಬದುಕಿದ್ದಾಗ ನೂರಾರು ಮಂದಿಯ ಪ್ರಾಣ ಉಳಿಸಿದ್ದ ಇಂದು ತನ್ನ ಸಾವಿನ ಬಳಿಕವೂ ಎಂಟು ಜನರ ಜೀವನಕ್ಕೆ ಆಸರೆಯಾಗಿ ಸಾರ್ಥಕ ಜೀವನ ನಡೆಸಿದ್ದಾನೆ. ಇದು ಕೇರಳದ ಅನುಜಿತ್ ಅನ್ನೋ ಯುವಕನ ಸಾರ್ಥಕತೆಯ ಕಥೆ.
ಇದೇ ಜುಲೈ 14 ರಂದು ಕೊಟ್ಟಾರಕರ ಬಳಿ ಅನುಜಿತ್ ಬೈಕ್ ಅಪಘಾತಕ್ಕೀಡಾಗಿತ್ತು. ಗಂಭೀರ ಸ್ಥಿತಿಯಲ್ಲಿ ಅವರನ್ನು ಕೊಟ್ಟಾರಕರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ತಿರುವನಂತಪುರಂನ ಕಿಮ್ಸ್ ಗೆ ಸ್ಥಳಾಂತರಿಸಲಾಯಿತು. ಅವರ ಜೀವ ಉಳಿಸಲು ವೈದ್ಯರು ತಮ್ಮ ಪ್ರಯತ್ನ ಮಾಡಿದರೂ, ಜುಲೈ 17 ರಂದು ಅನುಜಿತ್ ಮಿದುಳು ಹಾನಿಯಿಂದ ಕೊನೆಯುಸಿರೆಳೆದರು.oಅನುಜಿತ್ ಸಾವಿನ ಸುದ್ದಿ ಕೇಳಿದ ಅವರ ಕುಟುಂಬಸ್ಥರು ಕುಸಿದರು. ಆದರೆ ಅದೇ ಕ್ಷಣ ದಿಟ್ಟ ನಿರ್ಧಾರ ಕೈಗೊಂಡರು. ಅನುಜಿತ್ ಪತ್ನಿ ಪ್ರಿನ್ಸಿ ಮತ್ತು ಸಹೋದರಿ ಅಜಲ್ಯಾ ಅನುಜಿತ್ ಅವರ ಅಂಗಾಂಗಗಳನ್ನು ದಾನ ಮಾಡಲು ಮುಂದೆ ಬಂದರು. ಎಂಟು ಜನರನ್ನು ಉಳಿಸಲು ಅವರ ಹೃದಯ, ಮೂತ್ರಪಿಂಡಗಳು, ಕಣ್ಣುಗಳು, ಸಣ್ಣ ಕರುಳು ಮತ್ತು ಕೈಗಳನ್ನು ದಾನ ಮಾಡಲಾಯಿತು.
ದುಃಖದಲ್ಲಿದ್ದಾಗ ಇಂತಹ ಮಾನವೀಯ ಹೆಜ್ಜೆ ಇಟ್ಟ ಕುಟುಂಬವನ್ನು ಕೇರಳ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಶ್ಲಾಘಿಸಿದರು. ಅನುಜಿತ್ ಅವರ ಕುಟುಂಬಕ್ಕೂ ಸಚಿವರು ಸಂತಾಪ ಸೂಚಿಸಿದ್ದಾರೆ.ಅಂಗಾಂಗ ದಾನವನ್ನು ರಾಜ್ಯ ಸರ್ಕಾರದ ‘ಮೃತಸಂಜೀವನಿ’ – ಕೇರಳ ನೆಟ್ವರ್ಕ್ ಫಾರ್ ಆರ್ಗನ್ ಶೇರಿಂಗ್ ಮೂಲಕ ನೀಡಲಾಯಿತು. ಎರ್ನಾಕುಲಂನಲ್ಲಿ ಚಿಕಿತ್ಸೆ ಪಡೆಯುತ್ತಿರುವ ತ್ರಿಪುಣಿಥುರ ಮೂಲದ ಸನ್ನಿ ಥಾಮಸ್ (55) ಗೆ ಅನುರಾಜ್ ಹೃದಯವನ್ನು ದಾನ ಮಾಡಲಾಯಿತು.
ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಅನುಜಿತ್ ಬದುಕಿದ್ದಾಗಲೂ ರೈಲು ಅವಘಡ ತಪ್ಪಿಸಿ, ನೂರಾರು ಜನರ ಜೀವ ಉಳಿಸಿದ್ದರು. ಹಿಂದೆ ೨೦೧೦ರಲ್ಲಿ ರೈಲು ಹಳಿ ಬಿರುಕು ಬಿಟ್ಟಿದ್ದನ್ನು ನೋಡಿದ ಅನುಜಿತ್ ಮತ್ತವರ ಸ್ನೇಹಿತರು ಕೂಡಲೇ ಅಲ್ಲೇ ಇದ್ದ ಕೆಂಪು ಬಣ್ಣದ ಬ್ಯಾಸ್ಕೆಟ್ ಹಿಡಿದು ತೋರಿಸಿ, ಟ್ರೈನ್ ಚಾಲಕರಿಗೆ ಸಿಗ್ನಲ್ ನೀಡಿದ್ದರು. ಯುವಕರ ಸಿಗ್ನಲ್ ನೋಡಿದ ಚಾಲಕ ರೈಲು ನಿಲ್ಲಿಸಿದ್ದರು. ಇದರಿಂದಾಗಿ ಸಂಭವಿಸಬಹುದಿದ್ದ ದೊಡ್ಡ ದುರಂತ ತಪ್ಪಿತ್ತು. ಅನುಜಿತ್ ಅವರ ಈ ಕಾರ್ಯವನ್ನು ಸರ್ಕಾರವೂ ಶ್ಲಾಘಿಸಿತ್ತು.
ಅಂದು ತಮ್ಮ ಸಮಯೋಚಿತ ಕೆಲಸದಿಂದ ನೂರಾರು ಜನರ ಉಳಿಸಿದ್ದ ಅನುಜಿತ್, ಸಾವಿನ ಬಳಿಕ 8 ಜನರ ಪ್ರಾಣ ಉಳಿಸಿ, ಅವರ ಕುಟುಂಬಗಳ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ.
ಕೊಟ್ಟಾರಕರದಲ್ಲಿರುವ ಸಸಿಧರನ್ ಪಿಳ್ಳೈ ಮತ್ತು ವಿಜಯಕುಮಾರರ ಪುತ್ರ ಅನುಜಿತ್. ಖಾಸಗಿ ಉದ್ಯಮವೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅನುಜಿತ್ ಲಾಕ್ ಡೌನ್ ನಿಂದಾಗಿ ಕೊಟ್ಟಾರಕರ ಸೂಪರ್ ಮಾರ್ಕೆಟ್ನಲ್ಲಿ ಸೇಲ್ಸ್ಮ್ಯಾನ್ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ಪ್ರಿನ್ಸಿ ಆಭರಣ ಅಂಗಡಿಯಲ್ಲಿ ಮಾರಾಟಗಾರರಾಗಿ ಕೆಲಸ ಮಾಡುತ್ತಿದ್ದಾರೆ. ದಂಪತಿಗೆ ಮೂರು ವರ್ಷದ ಮಗನಿದ್ದಾನೆ.