ಭಾರತ ತಂಡದ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಸಾಮಾನ್ಯವಾಗಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಅವರನ್ನು, ಇಂಗ್ಲೆಂಡ್ ವಿರುದ್ಧ ಸದ್ಯ ನಡೆಯುತ್ತಿರುವ ಟಿ20 ಸರಣಿಯಲ್ಲಿ ಆಧ್ಯತೆಯ ಕ್ರಮಾಂಕದಲ್ಲಿ ಆಡಿಸಲಾಗುತ್ತಿದೆ.
“ಅವರಿಗೆ ಬೇರೆ ಯಾವುದೇ ಆಯ್ಕೆ ಇಲ್ಲ. ನಿಮ್ಮನ್ನು ನೀರಿಗೆ ತಳ್ಳಿದರೆ, ನೀವು ಈಜಿ ದಡ ಸೇರಬೇಕು. ಇದರಲ್ಲಿ ಯಾವುದೇ ಆಯ್ಕೆ ಇಲ್ಲ. ಹಾಗಾಗಿ, ಟೀಮ್ ಮ್ಯಾನೇಜ್ಮೆಂಟ್ ನೀಡುವ ಬ್ಯಾಟಿಂಗ್ ಕ್ರಮಾಂಕದಲ್ಲಿ ನೀವು ಆಡಲೇಬೇಕು,” ಎಂದು ಚೋಪ್ರಾ ಇಎಸ್ಪಿಎನ್ ಕ್ರಿಕ್ಇನ್ಪೋಗೆ ತಿಳಿಸಿದ್ದಾರೆ.
“ಶ್ರೇಯಸ್ ಅಯ್ಯರ್ ಅವರನ್ನು 6ನೇ ಕ್ರಮಾಂಕದಲ್ಲಿ ಕಳುಹಿಸುವುದು ನನ್ನ ಪ್ರಕಾರ ಸರಿಯಲ್ಲ. ಮೊದಲನೇ ಪಂದ್ಯದಲ್ಲಿ ತಂಡ ಗಳಿಸಿದ್ದ 124 ರನ್ಗಳಲ್ಲಿ ಅಯ್ಯರ್ 67 ರನ್ ಒಬ್ಬರೇ ಗಳಿಸಿದ್ದರು. ಆದರೂ ಅವರನ್ನು ನಂತರದ ಪಂದ್ಯದಲ್ಲಿಯೂ 5ನೇ ಕ್ರಮಾಂಕದಲ್ಲಿ ಆಡಿಸಲಾಗಿತ್ತು. ನಂತರ ಕೊನೆಯ ಎರಡು ಪಂದ್ಯಗಳಲ್ಲಿಯೂ 6ನೇ ಕ್ರಮಾಂಕದಲ್ಲಿ ಆಡಲು ಅವರಿಗೆ ಅವಕಾಶ ನೀಡಲಾಗಿತ್ತು. 6ನೇ ಕ್ರಮಾಂಕ ಶ್ರೇಯಸ್ ಅಯ್ಯರ್ಗೆ ಸೂಕ್ತವಲ್ಲ. ಆದರೂ ಅವರು ಚೆನ್ನಾಗಿಯೇ ಬ್ಯಾಟ್ ಮಾಡಿದ್ದಾರೆ. ಆದರೆ, ದೀರ್ಘಕಾಲ ಅವರ ಬ್ಯಾಟಿಂಗ್ ಕ್ರಮಾಂಕ ಬದಲಾವಣೆ ಮಾಡುವುದು ಒಳ್ಳೆಯದಲ್ಲ,” ಎಂದು ಹೇಳಿದರು.
“ಸಿಕ್ಕ ಅವಕಾಶಗಳನ್ನು ಶ್ರೇಯಸ್ ಅಯ್ಯರ್ ಸುದುಪಯೋಪಡಿಸಿಕೊಂಡಿದ್ದಾರೆ. ಆದರೆ, ಅವರಿಗೆ ಆರನೇ ಕ್ರಮಾಂಕ ಸೂಕ್ತವಲ್ಲ. ಇದರಿಂದ ಅವರಿಗೆ ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಾಗಲಿದೆ. ಏಕೆಂದರೆ ವಿರಾಟ್ ಕೊಹ್ಲಿ ಕೂಡ ಮೂರನೇ ಕ್ರಮಾಂಕದಲ್ಲಿ ಇನ್ನೂ ಬ್ಯಾಟ್ ಮಾಡಿಲ್ಲ. ತಂಡದಲ್ಲಿ ಸಾಕಷ್ಟು ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳಿದ್ದಾರೆ. ಒಂದು ದಿನ ಹಾರ್ದಿಕ್ ಪಾಂಡ್ಯ ನಂತರದ ಕ್ರಮಾಂಕದಲ್ಲಿ ಅಯ್ಯರ್ ಅವರನ್ನು ಇಳಿಸಿದರೂ ಅಚ್ಚರಿ ಇಲ್ಲ,” ಎಂದು ಆಕಾಶ್ ಚೋಪ್ರಾ ತಿಳಿಸಿದರು.
ಭಾರತ ಟಿ20 ತಂಡದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಆಡಿದ್ದ 9 ಪಂದ್ಯಗಳಲ್ಲಿ 50.00ರ ಸರಾಸರಿಯಲ್ಲಿ 250 ರನ್ ಕಲೆ ಹಾಕಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಆರಂಭಿಕ ನಾಲ್ಕು ಪಂದ್ಯಗಳಲ್ಲಿ ತಲಾ ಎರಡೆರಡು ಪಂದ್ಯಗಳಲ್ಲಿ ಗೆದ್ದು ಟಿ20 ಸರಣಿಯಲ್ಲಿ 2-2 ಸಮಬಲ ಸಾಧಿಸಿವೆ. ಶನಿವಾರ ಸರಣಿ ನಿರ್ಣಾಯಕ ಪಂದ್ಯದಲ್ಲಿ ಉಭಯ ತಂಡಗಳು ಪ್ರಶಸ್ತಿಗಾಗಿ ಮುಖಾಮುಖಿಯಾಗಲಿವೆ.