ನಿನ್ನೆಯಷ್ಟೆ ಅಸುನೀಗಿದ ಕನ್ನಡದ ಹಿರಿಯ ನಟಿ ಕಲಾವಿದೆ ಬಿ ಜಯ ಅವರ ಮೃತದೇಹವನ್ನು ರಸ್ತೆ ಬದಿ ಕೊಳಕು ಪ್ರದೇಶದಲ್ಲಿ ಅನಾಥವಾಗಿ ಬಿಟ್ಟುಹೋಗಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕನ್ನಡ ಸಿನಿಮಾರಂಗದಲ್ಲಿ ಹಲವು ದಶಕಗಳಿಂದಲೂ ನಟಿಸಿರುವ ಬಿ.ಜಯ ಅವರು ನಿನ್ನೆ ವಯೋ ಸಹಜ ಸಮಸ್ಯೆಯಿಂದ ಮೃತರಾದರು. ಅವರ ಅಂತ್ಯಕ್ರಿಯೆಯನ್ನು ಇಂದು ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು. ಆದರೆ ಜಯಮ್ಮರವರ ಮೃತದೇಹವನ್ನು ರಸ್ತೆ ಬದಿ ಕೊಳಕು ಪ್ರದೇಶದಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಸಾರ್ವಜನಿಕರು ಆರೋಪ ಮಾಡುತ್ತಿರುವ ವೀಡಿಯೋ ವೈರಲ್ ಆಗಿದೆ.
ರಸ್ತೆ ಬದಿಯಲ್ಲಿ ಕಸದ ರಾಶಿಯ ಬದಿಯಲ್ಲಿ ಜಯಮ್ಮನವರ ಶವ ಇರಿಸಲಾಗಿರುವ ವಿಡಿಯೋ ಚಿತ್ರೀಕರಣವನ್ನು ಕೆಲವರು ಮಾಡಿದ್ದು, ವಿಡಿಯೋದಲ್ಲಿ ವ್ಯಕ್ತಿಯೊಬ್ಬ, ‘ನೋಡಿ ಕಲಾವಿದೆಗೆ ಬಂದಿರುವ ಸ್ಥಿತಿ ನೋಡಿ. ಸ್ಯಾಂಡಲ್ವುಡ್ ನಟರೆಲ್ಲಾ ಎಲ್ಲಿದ್ದೀರಿ. ಜೋಡೆತ್ತುಗಳು ಎಲ್ಲಿದ್ದಾವೇ? ಹಿರಿಯ ಕಲಾವಿದೆಗೆ ಎಂಥಾ ಸ್ಥಿತಿ ಬಂದಿದೆ ನೋಡಿ. ಸ್ಯಾಂಡಲ್ವುಡ್ ಮಂದಿ ಎಲ್ಲಿದ್ದೀರಿ ಬನ್ನಿ ಹಿರಿಯ ಕಲಾವಿದೆಯ ಅಂತಿಮ ಸಂಸ್ಕಾರ ಮಾಡಿ ಬನ್ನಿ’ ಎಂದು ಕರೆಯುತ್ತಿದ್ದಾರೆ.
‘ಯಾರೋ ದೊಡ್ಡವರು ಸತ್ತಾಗ ಕೆಂಪು ಹಾಸು ಹಾಕಿ ಅದ್ಧೂರಿಯಾಗಿ ಅಂತ್ಯ ಸಂಸ್ಕಾರ ಮಾಡುತ್ತಾರೆ. ಆದರೆ ಚಿತ್ರರಂಗದ ಹಿರಿಯ ನಟಿಯೊಬ್ಬರು ಕಾಲವಾಗಿದ್ದಾರೆ ಆದರೆ ಯಾರೂ ಇತ್ತ ನೋಡುವವರು ಸಹ ಇಲ್ಲ. ರುದ್ರಭೂಮಿಯಲ್ಲಿ ಶಾಸಕ ಜಮೀರ್ ಅಹ್ಮದ್ ಅಕ್ಕಿ ವಿತರಿಸುತ್ತಿದ್ದಾರೆ ಎಂದು ಅಲ್ಲ ಮೀಡೀಯಾದವರು ಅಲ್ಲಿಯೇ ಇದ್ದಾರೆ ಕರೆದರೂ ಇಲ್ಲಿಗೆ ಯಾರೂ ಬಂದಿಲ್ಲ’ ಎಂದು ವಿಡಿಯೋದಲ್ಲಿ ಆರೋಪಿಸಿದ್ದಾರೆ.