ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಯುವಕ 4 ದಿನಗಳ ಬಳಿಕ ಶವವಾಗಿ ಪತ್ತೆ.!

1 Min Read

ರಾಮನಗರ: ಮಾಗಡಿ ತಾಲೂಕಿನ ಸಾವನದುರ್ಗ ಏಕಶಿಲಾ ಬೆಟ್ಟಕ್ಕೆ ಸ್ನೇಹಿತನ ಜೊತೆ ಚಾರಣಕ್ಕೆ ಬಂದ ಯುವಕ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ದಿನಗಳ ಕಾರ್ಯಾಚರಣೆ ಬಳಿಕ ಶವವಾಗಿ ಪತ್ತೆಯಾದ ಘಟನೆ ರಾಮನಗರದಲ್ಲಿ ನಡೆದಿದೆ. ಚಾರಣದ ವೇಳೆ ಕಾಲುಜಾರಿ ಕಂದಕಕ್ಕೆ ಜಾರಿ ಬಿದ್ದು ಯುವಕ ಸಾವನ್ನಪ್ಪಿದ್ದಾನೆ. ಕಳೆದ ಭಾನುವಾರ ಉತ್ತರ ಪ್ರದೇಶ ಮೂಲದ ಯುವಕ ಗಗನ್‌ದೀಪ್ ಸಿಂಗ್ ಸ್ನೇಹಿತನ ಜೊತೆ ಮಾಗಡಿ ತಾಲೂಕಿನ ಸಾವನದುರ್ಗ ಏಕಶಿಲಾ ಬೆಟ್ಟಕ್ಕೆ ಚಾರಣ ಬಂದಿದ್ದ. ಈ ವೇಳೆ ಅರಣ್ಯ ಪ್ರದೇಶದಲ್ಲಿ ದಾರಿ ತಪ್ಪಿದ ಗಗನ್ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಮೊಬೈಲ್ ಕೂಡಾ ಸ್ವಿಚ್‌ಆಫ್ ಆಗಿತ್ತು.
ಬಳಿಕ ಗಗನ್ ಸ್ನೇಹಿತ ಈ ಸಂಬಂಧ ಮಾಗಡಿ ಪೊಲೀಸರ ಸಹಾಯ ಕೋರಿದ್ದರು. ಈ ಹಿನ್ನೆಲೆ ಕಳೆದ ನಾಲ್ಕು ದಿನಗಳಿಂದ ನಿರಂತರ ಹುಡುಕಾಟ ನಡೆಸಿದ್ದ ಅರಣ್ಯ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ, ಥರ್ಮಲ್ ಡ್ರೋನ್, ಶ್ವಾನದಳ ಸೇರಿ ಎಸ್‌ಡಿಆರ್‌ಎಫ್ ತಂಡದಿಂದಲೂ ಶೋಧ ನಡೆಸಿ ಸತತ 100 ಗಂಟೆಗಳ ಕಾರ್ಯಾಚರಣೆ ಬಳಿಕ ಇದೀಗ ಗಗನ್‌ದೀಪ್ ಸಿಂಗ್ ಶವ ಪತ್ತೆಯಾಗಿದೆ. ಸದ್ಯ ಮೃತದೇಹ ಹೊರತೆಗೆಯುತ್ತಿರುವ ಪೊಲೀಸರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article