No menu items!
8.1 C
Munich
Tuesday, April 14, 2026

ನಡುರಾತ್ರಿಯಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆ ಗೇಟ್ ಮುಂದೆ ಕಾದುಕೂತ ಸುಧಾರಾಣಿ.. ಖಾಸಗಿ ಆಸ್ಪತ್ರೆ ವಿರುದ್ಧ ಕ್ರಮವೆಂದು ವೈದ್ಯಕೀಯ ಸಚಿವರ ಟ್ವೀಟ್..

Must read

ರಾಜ್ಯದಲ್ಲಿ ಕೊರೊನಾ ಹಾವಳಿ ಮಿತಿ‌ ಮೀರುತ್ತಿದ್ದು, ಬಹುತೇಕ ಎಲ್ಲಾ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆಗೆ ಮೀಸಲಾಗಿವೆ. ಹೀಗಾಗಿ ಚಿಕಿತ್ಸೆಗಾಗಿ‌ ಬೇರೆ ರೋಗಿಗಳು ಪರದಾಡುವಂತಾಗಿದೆ. ಜೊತೆಗೆ ಖಾಸಗಿ ಆಸ್ಪತ್ರೆಗಳಲ್ಲಿ ‌ಸಹ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಬೆಡ್ ಇಲ್ಲ ಅಂತಾ ಬಂದ ರೋಗಿಗಳನ್ನು ವಾಪಸ್ ಕಳಿಸುವ‌ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇದರಿಂದಾಗಿ ಚಿಕಿತ್ಸೆ ಸಿಗದೇ ಸಾಮಾನ್ಯರು ಪರದಾಡುವಂತಾಗಿದೆ. ಇದರಿಂದ ಸೆಲೆಬ್ರಿಟಿಗಳು ಸಹ ಹೊರತಾಗಿಲ್ಲ. ನಟಿ ಸುಧಾರಾಣಿ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆ ಎದುರು ಗಂಟೆಗಳ ಕಾಲ ಕಾದು ಕುಳಿತ ಘಟನೆ ಸಂಭವಿಸಿದೆ.

ಹೌದು, ನಿನ್ನೆ ತಡರಾತ್ರಿ ನಟಿ ಸುಧಾರಾಣಿ ಅವರ ಸಹೋದರನ ಪುತ್ರಿ ತಲೆಸುತ್ತಿ ಬಿದ್ದಿದ್ದರು. ಕೂಡಲೇ ಸುಧಾರಾಣಿ ಮತ್ತವರ ಕುಟುಂಬಸ್ಥರು ಆಕೆಗೆ ಚಿಕಿತ್ಸೆ ಕೊಡಿಸಲು ಶೇಷಾದ್ರಿಪುರಂನ ಖಾಸಗಿ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಆದರೆ, ಆಸ್ಪತ್ರೆ‌ ಸಿಬ್ಬಂದಿ ಚಿಕಿತ್ಸೆ‌ ಕೊಡುವುದು ಇರಲಿ, ಅವರನ್ನು ಗೇಟ್ ಒಳಗೂ ಬಿಡಲಿಲ್ಲ. ಅದು, ಇದು ನೆಪ ಹೇಳಿ ಅವರನ್ನು ಗೇಟ್ ಮುಂದೆಯೇ ನಿಲ್ಲಿಸಿದ್ದಾರೆ. ಹೀಗಾಗಿ‌ ಸುಧಾರಾಣಿ ಅವರು ನಡುರಾತ್ರಿಯಲ್ಲಿ, ಸುಮಾರು ಗಂಟೆಗಳ ಕಾಲ ಗೇಟ್ ಮುಂದೆಯೇ ಕಾದು ನಿಂತಿದ್ದಾರೆ. ಆದರೂ ಸಹ ಸಿಬ್ಬಂದಿ ಚಿಕಿತ್ಸೆ ಕೊಟ್ಟಿಲ್ಲ. ಇದರಿಂದಾಗಿ ಸಿಟ್ಟಾದ‌ ಸುಧಾರಾಣಿ ‌ ಕೊನೆಗೆ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರಿಗೆ ಕರೆ‌ ಮಾಡಿ ಖಾಸಗಿ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲಿವರೆಗೂ ಸುಮ್ಮನಿದ್ದ ಸಿಬ್ಬಂದಿ ‌ಆಯುಕ್ತರು ಸೂಚನೆ ನೀಡಿದ ಮೇಲೆ ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ‌ ನೀಡಿದ್ದಾರೆ.

ಇನ್ನೂ, ಈ ಬಗ್ಗೆ‌ ಮಾತನಾಡಿರುವ ಸುಧಾರಾಣಿ ಖಾಸಗಿ‌ ಆಸ್ಪತ್ರೆ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದಾರೆ.‌ ಅವರ ಪರಿಸ್ಥಿತಿಯನ್ನು ನಾವು ಅರ್ಥ ಮಾಡಿಕೊಳ್ಳುತ್ತೇವೆ. ಅದರೆ ನೋವಿನಿಂದ ನರಳುತ್ತಿರುವವರಿಗೆ ಚಿಕಿತ್ಸೆ ಕೊಡದಿದ್ದರೆ ಹೇಗೆ‌ ಎಂದು ಪ್ರಶ್ನಿಸಿದ್ದಾರೆ. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವಾರ್ಡ್ ದೂರವಿದೆ. ನಾವು ಎಮರ್ಜೆನ್ಸಿ ವಾರ್ಡ್ ಗೆ ಬಂದರು ಚಿಕಿತ್ಸೆ ಕೊಟ್ಟಿಲ್ಲ ಎಂದರು.

ಇನ್ನೂ, ಸುಧಾರಾಣಿಯ ಅಣ್ಣನ ಮಗಳಿಗೆ ಚಿಕಿತ್ಸೆ ಕೊಡಿಸಲು ನಡುರಾತ್ರಿ ಆಸ್ಪತ್ರೆಗೆ ತೆರಳಿದ್ದ ವೇಳೆ ಚಿಕಿತ್ಸೆ ನೀಡಲು ನಿರಾಕರಿಸಿದ ಖಾಸಗಿ ಆಸ್ಪತ್ರೆಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.

“ನಟಿ ಸುಧಾರಾಣಿ ಆರೋಗ್ಯ ಸಮಸ್ಯೆಯಿಂದ ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಗೆ ಬಂದರೂ ಚಿಕಿತ್ಸೆಗೆ ತಡಮಾಡಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ನೋಡಿದೆ. ಅವರಷ್ಟೇ ಅಲ್ಲ ಸಾಮಾನ್ಯ ವ್ಯಕ್ತಿ ಯಾರೇ ಆಗಲಿ ಚಿಕಿತ್ಸೆ ಸಿಗದೇ ಪರದಾಡಬಾರದು. ಆ ಖಾಸಗಿ ಆಸ್ಪತ್ರೆಯ ವಿರುದ್ಧ ಶಿಸ್ತು ಕ್ರಮವಹಿಸಲಾಗುವುದು” ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ ಸಚಿವರು.

ಒಟ್ಟಾರೆ, ಎಲ್ಲಾ ಆಸ್ಪತ್ರೆಗಳಲ್ಲೂ ಕೊರೊನಾ ಸೋಂಕಿತರು ಇರೋದು ನಿಜ.‌ ಆದರೆ ಇದೇ ನೆಪವೊಡ್ಡಿ ಬೇರೆ ಖಾಯಿಲೆಗಳ ರೋಗಿಗಳಿಗೆ ಚಿಕಿತ್ಸೆ ನೀಡದಿರೋದು ಎಷ್ಟು ಸರಿ.‌ ಸ್ವತಃ ‌ಮುಖ್ಯಮಂತ್ರಿಗಳೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ, ಖಾಸಗಿ ಆಸ್ಪತ್ರೆಗಳು ಈ ರೀತಿ ವರ್ತಿಸುತ್ತಿರೋದು ವಿಷಾದನೀಯ..

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article