ಪತಿಯಿಂದ ಪತ್ನಿಗೆ ನೇಣು ಹಾಕಿ ಕೊಲೆ ಯತ್ನ: ಪತ್ನಿ ಪಾರು, ಪತಿ ಬಂಧನ
ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿ ಕುಡಿತದ ಚಟದಿಂದ ಪತಿಯೋರ್ವ ತನ್ನ ಪತ್ನಿಗೆ ನೇಣು ಹಾಕಿ ಕೊಲೆ ಮಾಡಲು ಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ. ಇದೃಷ್ಟವಶಾತ್ ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರ್ ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಲ್ಲಿ, ಆರೋಪಿ ರಾಮ್ ನರೇಶ್ ಎಂಬಾತನು ತನ್ನ ಪತ್ನಿ ಗಾಯತ್ರಿಯನ್ನು ಕೊಲೆ ಮಾಡಲು ಯತ್ನಿಸಿದನು. 17 ವರ್ಷದ ಮಗಳು ಮನೆಯಲ್ಲಿದ್ದರೂ, ಅಂಗಡಿಗೆ ಕಳಿಸಿ ಈ ಕೃತ್ಯ ನಡೆಸಿದ ಎನ್ನಲಾಗಿದೆ.
ಪತ್ನಿ ಮಲಗಿದ್ದ ಸಮಯದಲ್ಲಿ, ಕಬ್ಬಿಣದ ರಾಡಿಗೆ ಸೀರೆ ಕಟ್ಟಿದ ರಾಮ್ ನರೇಶ್, ಪತ್ನಿಗೆ ನೇಣು ಹಾಕಿ ಮನೆಯಿಂದ ಪರಾರಿಯಾದ. ಆದರೆ ಮಗಳು ತಕ್ಷಣವೇ ಅಂಗಡಿಯಿಂದ ವಾಪಸ್ ಬಂದು ಪಕ್ಕದ ಮನೆಯವರ ಸಹಾಯದಿಂದ ಬಾಗಿಲು ಒಡೆದು ತಾಯಿ ಗಾಯತ್ರಿಯನ್ನು ರಕ್ಷಿಸಿದರು. ಗಾಯತ್ರಿಗೆ ತೀವ್ರ ಗಾಯಗಳಾಗಿದ್ದು,
ಇದೀಗ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಈ ಸಂಬಂಧ ಗಾಯತ್ರಿ ಅವರು ರಾಜರಾಜೇಶ್ವರಿ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ರಾಮ್ ನರೇಶ್ನ್ನು ಬಂಧಿಸಿ ತನಿಖೆ ಆರಂಭಿಸಿದ್ದಾರೆ.