ಪತ್ನಿ ನಿಧನರಾದ ದಿನದಂದೇ ಇಹಲೋಕ ತ್ಯಜಿಸಿದ ನಟ ದ್ವಾರಕೀಶ್..!

By
1 Min Read

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ದ್ವಾರಕೀಶ್ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಪತ್ನಿಯನ್ನು ಕಳೆದುಕೊಂಡ ದಿನವೇ ನಟ ದ್ವಾರಕೀಶ್ ಕೂಡ ಇಹಲೋಕ ತ್ಯಜಿಸಿದ್ದಾರೆ. ದ್ವಾರಕೀಶ್ ಪತ್ನಿ ಅಂಬುಜಾ 16 ಜುಲೈ 2021ರಂದು ನಿಧನರಾಗಿದ್ದರು ದ್ವಾರಕೀಶ್ ಕೂಡ ಇದೇ ದಿನ ಕಣ್ಮುಚ್ಚಿದ್ದಾರೆ. ಮುಂಜಾನೆ 9.45ಕ್ಕೆ ಅಂಬುಜಾ ಅವರು ಪ್ರಾಣಬಿಟ್ಟಿದ್ದರೆ, ದ್ವಾರಕೀಶ್ ಕೂಡ ಅದೇ ಹೊತ್ತಿಗೆ ಉಸಿರು ನಿಲ್ಲಿಸಿದ್ದರು ಎಂದು ಅವರ ಪುತ್ರ ಯೋಗೀಶ್ ತಿಳಿಸಿದ್ದಾರೆ.
81 ವರ್ಷದ ದ್ವಾರಕೀಶ್ 19 ಅಗಷ್ಟ್ 1942ರಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಜನಿಸಿದರು. ತಂದೆ ಶಾಮರಾವ್ ಮತ್ತು ತಾಯಿ ಜಯಮ್ಮ. ಶಾರದ ವಿಲಾಸ್ ಮತ್ತು ಬನುಮಯ್ಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದಾರೆ. ಫ್ರೌಡಶಿಕ್ಷಣದ ನಂತರ ಸಿಪಿಸಿ ಪಾಕಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿದರು.
ನಂತರ ತಮ್ಮ ಸಹೋದರನ ಜೊತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಆರಂಭಿಸಿದ್ದರು. 1963ರಲ್ಲಿ ವ್ಯಾಪಾರ ಬಿಟ್ಟು ನಟನೆಯತ್ತ ಮುಖ ಮಾಡಿದ ದ್ವಾರಕೀಶ್ ತಮ್ಮ ಸೋದರ ಮಾವ ಹುಣಸೂರು ಕೃಷ್ಣಮೂರ್ತಿ ಅವರ ಮೂಲಕ 1964ರಲ್ಲಿ ‘ವೀರ ಸಂಕಲ್ಪ’ ಚಲನಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ದ್ವಾರಕೀಶ್, ನಟರಾಗಿ, ಹಾಸ್ಯ ಕಲಾವಿದರಾಗಿ, ಪೋಷಕ ನಟನಾಗಿ ಈವರೆಗೂ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.

Share This Article