ಪರಿಸರ ಸಂರಕ್ಷಣೆಗೆ ಟೊಂಕ ಕಟ್ಟಿ ನಿಂತ ಆಧುನಿಕ ಭಗೀರಥನ ಸ್ಫೂರ್ತಿದಾಯಕ ಕಥೆ..!

Date:

ಹಸಿರು ಕ್ರಾಂತಿಯ ಕಾಲದಲ್ಲಿ ಪಂಜಾಬಿನ ಹೋಷಿಯಾರ್ಪುರ, ಕಪೂರ್ತಲಾ, ಜಲಂಧರ್ ಸೇರಿದಂತೆ ಕಾಲೀಬೇನ್ ಉಪನದಿ ಹರಿಯುವ ಪ್ರಮುಖ ನಗರಗಳಲ್ಲಿ ಕಾರ್ಖಾನೆಗಳು ಹೆಚ್ಚಾಗತೊಡಗಿದವು. ಹಾಗೇ ರಾಸಾಯನಿಕ ಯುಕ್ತ ಕೃಷಿಯೂ ಹೆಚ್ಚತೊಡಗಿತು. ಇದರಿಂದಾಗಿ ಒಂದೆಡೆ ಕಾರ್ಖಾನೆಗಳಿಂದ ಹರಿಯುವ ರಾಸಾಯನಿಕ ತ್ಯಾಜ್ಯಗಳು ಕಾಲೀಬೇನ್ ಸೇರತೊಡಗಿದವು. ಇದರಿಂದ 160 ಕಿಲೋಮೀಟರ್ ಸ್ವಚ್ಛಂದವಾಗಿ ಹರಿಯುತ್ತಿದ್ದ ಶುದ್ಧ ಕಾಲೀಬೇನ್, ಮಲಿನಗೊಂಡು ವಿಷ ಕಾರತೊಡಗಿತು. ಇದರಿಂದ ಲಕ್ಷಾಂತರ ಜನರಿಗೆ ನೀರಿನ ಸಮಸ್ಯೆ ಎದುರಾಯಿತು.

ಅದೇ ಸಮಯದಲ್ಲೇ ಸಂತ ಬಾಬಾ ಬಲ್ಬೀರ್ ಸಿಂಗ್ ಸೀಚೆವಾಲ್ ಎಚ್ಚೆತ್ತುಕೊಂಡರು. ಅದಾಗಲೇ ಪ್ರಕೃತಿಪರ ಹೋರಾಟಗಳಿಂದ ಪಂಜಾಬ್ನಾದ್ಯಂತ ಎಕೋಬಾಬಾ ಎಂದೇ ಹೆಸರು ಗಳಿಸಿದ್ದ ಅವರು, 2000ನೇ ಇಸವಿಯಲ್ಲಿ ಕಾಲೀಬೇನ್ ನದಿಯ ರಕ್ಷಣೆಗೆ ಪಣತೊಟ್ಟಿ ನಿಂತರು. ಪಂಜಾಬ್ನ ಮಾಲಿನ್ಯ ನಿಯಂತ್ರಣ ಮಂಡಳಿಯೇ ಕೈಚೆಲ್ಲಿ ಕುಳಿತಿದ್ದಾಗ, ಕಾವಿ ತೊಟ್ಟು ಬಂದ ಈ ಸಂತ, ಕಾಲೀಬೇನ್ ಸಂರಕ್ಷಣೆಗೆ ಮುಂದಾದರು.

2000ರಲ್ಲಿ ಪ್ರಾರಂಭವಾದ ಕಾಲೀಬೇನ್ ಸ್ವಚ್ಛತಾ ಅಭಿಯಾನದಲ್ಲಿ ಮೊದಲು ಸುಲ್ತಾನ್ಪುರ ಲೋಧಿ ಭಾಗವನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಕರ ಸೇವಕರನ್ನು ಒಟ್ಟುಗೂಡಿಸಿ ತಾವೂ ನದಿಗಿಳಿದ ಎಕೋಬಾಬಾ ಅದರಲ್ಲಿದ್ದ ರಾಶಿ ರಾಶಿ ಕಳೆ, ಗಿಡ- ಗಂಟೆ ಹೂವಿನ ಜೊಂಡುಗಳನ್ನು ಹೊರಹಾಕಿದರು. ಬರೋಬ್ಬರಿ 3 ವರ್ಷಗಳ ಕಾಲ ಅಂದರೆ, 2003ರವರೆಗೂ ಇದೇ ಕೆಲಸ ನಡೆಯಿತು. ಕೆಲವೊಮ್ಮೆಯಂತೂ 3 ಸಾವಿರಕ್ಕೂ ಹೆಚ್ಚು ಮಂದಿ ಕಾಲೀಬೇನ್ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸ್ವಯಂಪ್ರೇರಿತರಾಗಿ ಪಾಲ್ಗೊಂಡು ಶ್ರಮದಾನ ಮಾಡಿದರು.
ಅಷ್ಟೇ ಅಲ್ಲ, ಎಕೋಬಾಬಾ ನದಿ ಸ್ವಚ್ವತಾ ಕಾರ್ಯಕ್ಕೆ ಹಣದ ಹರಿವು ಕೂಡ ಹರಿದು ಬಂತು. ಸುತ್ತಮುತ್ತಲಿನ ಹಳ್ಳಿಯ ಜನರಿಂದ ಧನಸಹಾಯದಿಂದ ಸ್ವಚ್ಛತೆಗೆ ಬೇಕಾದ ಪರಿಕರಗಳನ್ನು ಖರೀದಿಸಲಾಯಿತು. ಹಾಗಂತ ಎಕೋಬಾಬಾ ಸ್ವಚ್ಛತೆಗೆ ಮಾತ್ರವಲ್ಲ ಅದರ ಜೊತೆ ಜೊತೆಗೇ ನದಿನೀರು, ಅಂತರ್ಜಲಗಳ ಕುರಿತು ಜನರಲ್ಲಿ ಅರಿವು ಮೂಡಿಸುವತ್ತಲೂ ಗಮನ ಹರಿಸಿದರು. ಇದರಿಂದ ಕಾರ್ಖಾನೆಗಳ ರಾಸಾಯನಿಕ ತ್ಯಾಜ್ಯ ಹಾಗೂ ಕೊಳಚೆ ಮೋರಿಗಳಿಂದ ಕಾಲೀಬೇನ್ ಸೇರುತ್ತಿದ್ದ ಮಲಿನ ನೀರನ್ನು ಸ್ಥಗಿತಗೊಳಿಸಲಾಯಿತು. ಇದರಿಂದ ದಿನಕಳೆದಂತೆ ಕಾಲೀಬೇನ್ನ ನೀರಿನ ಮಟ್ಟವೂ ಹೆಚ್ಚಾಗತೊಡಗಿತು.

ಇಷ್ಟು ಮಾತ್ರವಲ್ಲ ಎಕೋಬಾಬಾ, ಪಂಜಾಬ್ ಸರ್ಕಾರದೊಂದಿಗೆ ಕೈ ಜೋಡಿಸಿ ಕೆರೆ-ಕಟ್ಟೆಗಳನ್ನು ಸೇರಿದ ಕೊಳಚೆ ನೀರನ್ನು ನೈಸರ್ಗಿಕವಾಗಿಯೇ ಶುದ್ಧೀಕರಿಸುವ ಹೊಸ ಯೋಜನೆಯೊಂದನ್ನು ಕೈಗೊಂಡಿದ್ದಾರೆ. ಅದರ ಜೊತೆಗೆ ಕಡಿಮೆ ವೆಚ್ಚದ, ಪ್ರಕೃತಿಗೆ ಮಾರಕವಾಗದ ಕಸ ಸಂಸ್ಕರಣಾ ಘಟಕಕ್ಕೂ ಚಾಲನೆ ನೀಡಿದ್ದಾರೆ.
ವಿದ್ಯಾ ಸಂಸ್ಥೆಗಳನ್ನು ಕಟ್ಟುವ ಮೂಲಕ ಶಿಕ್ಷಣ ನೀಡುವುದರ ಜೊತೆಗೆ ಎಕೋಬಾಬಾ ಪರಿಸರ ಸಂರಕ್ಷಣೆಗೂ ಟೊಂಕ ಕಟ್ಟಿ ನಿಂತಿದ್ದಾರೆ. ಪ್ರತಿಯೊಬ್ಬ ಭಾರತೀಯರಲ್ಲೂ ಇಂತಹ ಒಬ್ಬ ಬಾಬಾ ಇದ್ದರೆ ಸಾಕು, ಸ್ವಚ್ಛ ಭಾರತ ಸುಂದರ ಭಾರತದ ಕನಸು, ಕೆಲವೇ ದಿನಗಳಲ್ಲಿ ನನಸಾಗುವುದರಲ್ಲಿ ಸಂಶಯವೇ ಇಲ್ಲ ಅಲ್ಲವೇ ?

Share post:

Subscribe

spot_imgspot_img

Popular

More like this
Related

ಮುಂದಿನ ಆಯವ್ಯಯದಲ್ಲಿ ಯಲ್ಲಾಪುರದಲ್ಲಿ ವಸತಿ ನಿಲಯ ನಿರ್ಮಾಣ: ಸಿದ್ದರಾಮಯ್ಯ ಭರವಸೆ

ಮುಂದಿನ ಆಯವ್ಯಯದಲ್ಲಿ ಯಲ್ಲಾಪುರದಲ್ಲಿ ವಸತಿ ನಿಲಯ ನಿರ್ಮಾಣ: ಸಿದ್ದರಾಮಯ್ಯ ಭರವಸೆ ಬೆಳಗಾವಿ: ಉತ್ತರಕನ್ನಡ...

ಕೇಂದ್ರ ಸರಕಾರದ ಜೊತೆ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು: ಬಿ.ವೈ.ವಿಜಯೇಂದ್ರ

ಕೇಂದ್ರ ಸರಕಾರದ ಜೊತೆ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು: ಬಿ.ವೈ.ವಿಜಯೇಂದ್ರ ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರಕಾರ...

ಕೆಎಸ್ ಸಿಎ ಮನವಿ ಬಗ್ಗೆ ನಾವು ಮುಕ್ತ ಮನಸ್ಸಿನಲ್ಲಿದ್ದೇವೆ: ಡಿಸಿಎಂ ಡಿ.ಕೆ. ಶಿವಕುಮಾರ್

ಕೆಎಸ್ ಸಿಎ ಮನವಿ ಬಗ್ಗೆ ನಾವು ಮುಕ್ತ ಮನಸ್ಸಿನಲ್ಲಿದ್ದೇವೆ: ಡಿಸಿಎಂ ಡಿ.ಕೆ....

ಮಹಿಳೆಯರಲ್ಲಿ ನಿದ್ರೆಯ ಕೊರತೆಗೆ ಕಾರಣಗಳೇನು? ಇದಕ್ಕೆ ಪರಿಹಾರವೇನು..?

ಮಹಿಳೆಯರಲ್ಲಿ ನಿದ್ರೆಯ ಕೊರತೆಗೆ ಕಾರಣಗಳೇನು? ಇದಕ್ಕೆ ಪರಿಹಾರವೇನು..? ಮನೆಯ ದೈನಂದಿನ ಕೆಲಸಭಾರವನ್ನು ನಿರ್ವಹಿಸುವ...