ಬರಗಾಲದಲ್ಲಿ ನೀರಿಗೆ ಹಾಹಾಕಾರ: ಇದೇ ಈತನಿಗೆ ಬಂಡವಾಳ

By
1 Min Read

ಬೆಂಗಳೂರು: ಪ್ರತಿಯೊಬ್ಬರಿಗೂ ಶುದ್ದ ಕುಡಿಯೋ ನೀರು ಸಿಗಬೇಕು ಅಂತ ಸರ್ಕಾರ ಪ್ರತಿ ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕ ತೆರೆದಿದೆ. 5 ರೂಪಾಯಿಗೆ 25 ಲೀಟರ್ ಕುಡಿಯುವ ನೀರು ಕೊಡುವ ಕೆಲಸವನ್ನ ಸರ್ಕಾರ ಮಾಡುತ್ತಿದೆ. ಆದರೆ ಬೆಂಗಳೂರು ನಗರ ಜಿಲ್ಲೆ ಯಲಹಂಕ ಕ್ಷೇತ್ರದ ಚಿಕ್ಕಗೊಲ್ಲರಟ್ಟಿ ಗ್ರಾಮದಲ್ಲಿ 5ರೂ ಬದಲಿಗೆ 10 ರೂ ಪಡೆಯಲಾಗ್ತಿದೆಯಂತೆ. ಕಾಚೋಹಳ್ಳಿ ಗ್ರಾಮ ಪಂಚಾಯ್ತಿಯ ಸದಸ್ಯ ರಾಜ ಎಂಬುವವನು ಒಂದು ಕ್ಯಾನ್ ನೀರಿಗೆ 10 ಫಿಕ್ಸ್ ಮಾಡಿದ್ದಾನಂತೆ.
ಈ ಬಗ್ಗೆ ಪ್ರಶ್ನೆ ಮಾಡಿದ ಗ್ರಾಮಸ್ಥರಿಗೂ ಆವಾಜ್ ಹಾಕಿ ಏನೂ ಬೇಕಾದ್ರೂ ಮಾಡ್ಕೋ ಯಾರಿಗ್ ಬೇಕಾದ್ರೂ ಹೇಳಿಕೋ ಎಂದು ಆವಾಜ್ ಬಿಟ್ಟಿದ್ದಾನೆ. ಹಣ ಹಾಕಿದ್ದೀನಿ ವರ್ಕೌಟ್ ಆಗ್ತಿಲ್ಲ ಅಂತ ಬೇರೆ ಹೇಳಿದ್ದಾನೆ. ಸಿಎಂ ಸಿದ್ದರಾಮಯ್ಯ ಅವರೇ ಈ ಕುಡಿಯುವ ನೀರಿನ‌ ಯೋಜನೆ ಇರೋದು ಜನರ ದಾಹ ತೀರಿಸೋಕೋ ಇಲ್ಲ ಹಣ ಸಂಪಾದನೆ ಮಾಡೋಕೋ ಅಂತ ನೀವೇ ಹೇಳಬೇಕು.
ಈ ಗ್ರಾಮ ಪಂಚಾಯತಿ ಸದಸ್ಯನಿಗೆ ಹಣ ಮಾಡಬೇಕು ಅಂತ ಇದ್ರೆ ಬೇರೆ ಕೆಲಸ ಮಾಡೋಕ್ ಹೇಳಿ. ಕುಡಿಯೋ‌ ನೀರಿನಲ್ಲಿ ಕಡ್ಡಿ ಅಲ್ಲಾಡಿಸೋ ಕೆಲಸ ಮಾಡದಂತೆ ಕಿವಿ ಹಿಂಡುವ ಕೆಲಸವನ್ನ ಅಧಿಕಾರಿಗಳಿಂದ ಮಾಡಿಸಿ. ಅವ್ರಿಗೆ ವರ್ಕೌಟ್ ಆಗಿಲ್ಲ ಅಂದ್ರೆ ಅದನ್ನ ಅವರಿಂದ ಬಿಡಿಸಿ ಒಬ್ಬ ಬಡ ಹುಡುಗನಿಗೆ ಸುಪರ್ಧಿಗೆ ನೀಡಿ. ಇನ್ನೂ ಇದನ್ನ ಪ್ರಶ್ನಿಸಬೇಕಾದ ಪಂಚಾಯತಿ ಅಧಿಕಾರಿಗಳಂತೂ ನಿದ್ರೆ ಮಂಪರಿನಲ್ಲಿರುವಂತೆ ಕಾಣುತ್ತೆ.

Share This Article