ಚೆನ್ನಾಗಿ ಸಂಪಾದಿಸಿ, ಹಣ ಕೂಡಿಟ್ಟು ತಮ್ಮ ಹೆಂಡ್ತಿ ಮಕ್ಕಳೊಂದಿಗೆ ಆರಾಮಾಗಿ ಇರ್ಬೇಕು.ಐಷಾರಾಮಿ ಜೀವನ ನಡೆಸಬೇಕು ಎನ್ನುವ ಬಹುತೇಕರ ನಡುವೆ ತಮ್ಮ ಇಡೀ ಜೀವನವನ್ನ ‘ಸೇವೆಗಾಗಿ’ ಮುಡಿಪಾಗಿಡುವವರಿದ್ದಾರೆ. ಅಂತವರ ಸಾಲಿನಲ್ಲಿ ಪ್ರಮುಖರಾಗಿ ನಿಲ್ಲುತ್ತಾರೆ ತುಮಕೂರು ಜಿಲ್ಲೆಯ ಪಾವಗಡದ ಪ್ರಭಾಕರ ರೆಡ್ಡಿ.
ಹೌದು , ಪಾವಗಡ ತಾಲೂಕಿನ ವಳ್ಳೂರು ಗ್ರಾಮದಲ್ಲಿ ಜನಿಸಿದ ಡಾ. ಪ್ರಭಾಕರ ರೆಡ್ಡಿ ಅವರಿಗೀಗ 80ವರ್ಷ. ಭಿಕ್ಷೆ ಬೇಡಿ ಡಾಕ್ಟರ್ ಆದವರು…!
ಬೆಂಗಳೂರಿನಲ್ಲಿ ಎಂಬಿಬಿಎಸ್ ಮಾಡಿ, ಲಂಡನ್ ನಲ್ಲಿ ವೈದ್ಯರಾಗಿ ಸೇವೆ ಮಾಡಿ ನಿವೃತ್ತರಾಗಿದ್ದಾರೆ.
ಚಿಕ್ಕವಯಸ್ಸಿನಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡ ಇವರು ಕಡುಬಡತನದಲ್ಲಿ ಬೆಳೆದವರು. ಬಡತನ ಡಾಕ್ಟರ್ ಆಗಬೇಕೆಂಬ ಕನಸಿಗೆ ಶತ್ರುವಾಗಿತ್ತಾದರೂ. ಮನಸ್ಸಿದ್ದರೇ ಮಾರ್ಗ ಎಂದು ಛಲಬಿಡದೆ ಡಾಕ್ಟರ್ ಆದವರು. 1965ರಲ್ಲಿ ಎಂಬಿಬಿಎಸ್ ಸೀಟ್ ಸಿಕ್ಕಿತು. ಆದರೆ, ಆ ಕಾಲದಲ್ಲಿ 240ರೂ ಶುಲ್ಕ ಕಟ್ಟಲೂ ಕಷ್ಟವಿತ್ತು. ಸ್ನೇಹಿತರ ಬಳಿ ಸ್ವಲ್ಪ ಹಣ ಹೊಂದಿಸಿದರೂ ಅದು ಸಾಕಾಗಲಿಲ್ಲ. ಉಳಿದ ಹಣಕ್ಕಾಗಿ ಸಾರ್ವಜನಿಕವಾಗಿ ಭಿಕ್ಷೆ ಬೇಡಿ ಎಂಬಿಬಿಎಸ್ ಮುಗಿಸಿದರು.
ಕೆಲವು ಸಮಯ ಕರ್ನಾಟಕದಲ್ಲಿದ್ದು, ಬಳಿಕ ಲಂಡನ್ ಗೆ ಹೋಗಿ ಹೆಚ್ಚಿನ ವ್ಯಾಸಂಗ ಮಾಡಿ, ಅಲ್ಲಿಯೇ ಸೇವೆ ಸಲ್ಲಿಸಿ ನೆಲೆಸಿದ್ದರು.
ತಮ್ಮ ಕಷ್ಟದ ದಿನಗಳನ್ನು ನೆನಪಿನಲ್ಲಿಟ್ಟುಕೊಂಡಿರುವ ಇವರು ತಮ್ಮ ಹೆಸರಿನಲ್ಲಿ ಎಜುಕೇಷನ್ ಟ್ರಸ್ಟ್ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಸಹಾಯ ಮಾಡ್ತಿದ್ದಾರೆ. ವಿದ್ಯಾರ್ಥಿ ವೇತನ, ಶಾಲಾ-ಕಾಲೇಜುಗಳಿಗೆ ಕುಡಿಯುವ ನೀರು, ಸಮವಸ್ತ್ರ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ನೀಡುತ್ತಾ ಬಂದಿದ್ದಾರೆ.
ತವರು ಪಾವಗಡದಲ್ಲಿ ಸುಮಾರು 1ಕೋಟಿ ರೂ ವೆಚ್ಚದಲ್ಲಿ ವಿದ್ಯಾರ್ಥಿನಿಯರ ನಿಲಯ ಕಟ್ಟಿ, ಸಮಾಜ ಕಲ್ಯಾಣ ಇಲಾಖೆಗೆ ಅತಿ ಕಡಿಮೆ ಬಡ್ಡಿಗೆ ನೀಡಿದ್ದಾರೆ.
ಬೆಂಗಳೂರಿನಲ್ಲಿದ್ದ ಸುಮಾರು1.5ಕೋಟಿ ರೂ ಮನೆ, ಲಂಡನ್ ನಲ್ಲಿನ ಸುಮಾರು 2ಕೋಟಿ ರೂ ಮನೆ ಮಾರಿ ಈಗ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ.