ಭೈರಪ್ಪ ಅವರದ್ದು ಹಿಮಾಲಯದಷ್ಟೇ ಎತ್ತರದ ವ್ಯಕ್ತಿತ್ವ ಎಂದು ನಟ ಅನಂತನಾಗ್ ಭಾವುಕರಾದರು.
ನವರಾತ್ರಿಯ ಸಂದರ್ಭದಲ್ಲಿ ಅವರು ಹೋಗಬಾರದಿತ್ತು. ಪರ್ವತಪ್ರಾಯ, ಹಿಮಾಲಯದಷ್ಟು ಎತ್ತರದ ವ್ಯಕ್ತಿಯನ್ನ ಕಳೆದುಕೊಂಡದ್ದು ದುಃಖ ತಂದಿದೆ. ನಾವೆಲ್ಲರೂ ಭೈರಪ್ಪನವರ ಕಾದಂಬರಿ ಓದಿ ಮೆಚ್ಚಿದವರು. ಅವರ ʻನಾಯಿ ನೆರಳುʼ ಕಾದಂಬರಿ ಸಿನಿಮಾ ಆಗಿ ಪರಿವರ್ತನೆ ಆಯಿತು. ನನಗೆ ಮುಖ್ಯಪಾತ್ರದಲ್ಲಿ ಅವಕಾಶ ಮಾಡಿಕೊಟ್ಟರು ಅಲ್ಲಿಂದಲೇ ನನ್ನ ನಟನೆ ಆರಂಭವಾಯಿತು ಎಂದು ತಿಳಿಸಿದರು.
ಭೈರಪ್ಪನವರ ಯಾವುದೇ ಕಾದಂಬರಿಯನ್ನು ಬಿಟ್ಟಿಲ್ಲ, ಏಕೆಂದ್ರೆ ಅವರ ಬರಹ ನನಗೆ ಪ್ರಿಯವಾದದ್ದು, ಯಾವಾಗಲೂ ರೆಫರೆನ್ಸ್ಗೆ ಅಂತ ಜೊತೆಯಲ್ಲೇ ಇಟ್ಟುಕೊಳ್ತಿದೆ. ಅದ್ರಲ್ಲೂ ʻಯಾನʼ ನನ್ನ ನೆಚ್ಚಿನ ಕಾದಂಬರಿ. ಇಡೀ ವಿಶ್ವದಲ್ಲೇ ಆ ರೀತಿಯ ಸ್ಪೇಸ್ (ಬಾಹ್ಯಾಕಾಶ) ಸೃಷ್ಟಿಸಿ ಯಾರೂ ಬರೆದಿಲ್ಲ. ವಿಜ್ಞಾನಿಗಳಿಗೂ ಯೋಚನೆ ಮಾಡಲು ಸಾಧ್ಯವಾಗದಂತಹ ಸ್ಪೇಸ್ ಅದು. ನಮ್ಮ ಹಿಂದೂ ತತ್ವಶಾಸ್ತ್ರವನ್ನ ಯಾರು ಅಭ್ಯಾಸ ಮಾಡಿದ್ದಾರೋ ಅವರು ಮಾತ್ರ ಅರ್ಥ ಮಾಡಿಕೊಳ್ಳೋದಕ್ಕೆ ಸಾಧ್ಯ.
ಒಂದು ಕಾದಂಬರಿಯಲ್ಲಿ ಮಹಿಳೆ, ಪುರುಷನ ಪಾತ್ರ ಸೃಷ್ಟಿಸಿದ ರೀತಿ.. ಅದನ್ನ ಓದಿದ್ರೆ ರಾತ್ರಿ ನಿದ್ರೆ ಬರಲ್ಲ. ಆಕಾಶ ಹೇಗೆ ಕೊನೆಯಿಲ್ಲದೇ ಇನ್ನು ಮುಂದೆ.. ಇನ್ನು ಮುಂದೆ ಅಂತ ಸಾಗುತ್ತದೋ, ಹಾಗೇ ಕೊನೆಯಿಲ್ಲದ ಯಾನಕ್ಕೆ ಸ್ಪೇಸ್ ಶಿಪ್ಪನ್ನ ಕಳಿಸಿದ್ರು. ಕಲ್ಪನೆ ಮಾಡಿದ್ರೂ ಸಹ ಪೃಥ್ವಿ, ಜಗತ್ತು, ಕುರುಕ್ಷೇತ್ರ, ಮಹಾಭಾರತ ಎಲ್ಲವೂ ಇರುತ್ತಿತ್ತು. ಆಕಾಶಕ್ಕಿಂತಲೂ ಎತ್ತರ, ಹಿಮಾಲಕ್ಕಿಂತಲೂ ದೊಡ್ಡ ಮನುಷ್ಯ ಅವರು. ಅವರನ್ನ ಕಳೆದುಕೊಂಡು ನಾವಿಂದು ಬಡವಾಗಿದ್ದೇವೆ ಎಂದು ಭಾವುಕರಾದರು.