ಮಂಡ್ಯ: ಮಂಡ್ಯದ ಗತ್ತು ಇಂಡಿಯಾಗೆ ಗೊತ್ತು ಎಂಬ ಮಾತಿದೆ. ಈ ಮಾತು ಬಂದಿರೋದೆ ಇಲ್ಲಿನ ರಾಜಕೀಯ ಚಟುವಟಿಕೆಗಳಿಂದ. ಈ ಬಾರಿಯ ಲೋಕಸಭಾ ಚುನಾವಣೆಯೂ ಸಹ ಮಂಡ್ಯದಲ್ಲಿ ಅದೇ ರೀತಿ ಸದ್ದು ಮಾಡುತ್ತಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಿದ್ದಾರೆ. ಇನ್ನೊಂದೆಡೆ ಇವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ವೆಂಕಟರಮಣೇಗೌಡ ಉರುಫ್ ಸ್ಟಾರ್ ಚಂದ್ರು ಸ್ಪರ್ಧೆ ಮಾಡುತ್ತಿದ್ದಾರೆ.
ಇಂದು ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಮೆರವಣಿಗೆ ಮಧ್ಯೆ ತೆರದ ವಾಹನದಿಂದ ಇಳಿದು ಡಿಸಿ ಕಚೇರಿಗೆ ಹೊರಟು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬರುವ ಮುನ್ನವೇ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಪಿಇಎಸ್ ಕಾಲೇಜು ಮುಂಭಾಗ ತೆರೆದ ವಾಹನದಿಂದ ಕೈ ನಾಯಕರು ಇಳಿದು ಅಲ್ಲಿಂದ ಕಾರಿನಲ್ಲಿ ತೆರಳಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಮಧ್ಯಾಹ್ನ 1 ಗಂಟೆಯೊಳಗೆ ನಾಮಪತ್ರ ಸಲ್ಲಿಕೆಗೆ ಸಮಯ ನಿಗದಿಯಾಗಿತ್ತು.
ನಿಗದಿತ ಸಮಯದೊಳಗೆ ನಾಮಪತ್ರ ಸಲ್ಲಿಕೆಗಾಗಿ ಮೆರವಣಿಗೆಯಿಂದ ಅರ್ಧಕ್ಕೆ ಹೊರಟು ಅಭ್ಯರ್ಥಿ ಹಾಗೂ ಕೈ ನಾಯಕರು ಚುನಾವಣಾ ಅಧಿಕಾರಿ ಡಾ.ಕುಮಾರ್ಗೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಸಚಿವ ಚಲುವರಾಯಸ್ವಾಮಿ, ಶಾಸಕರಾದ ನರೇಂದ್ರಸ್ವಾಮಿ, ಕದಲೂರು ಉದಯ್ ಸಾಥ್, ಮುಖಂಡ ದಡದಪುರ ಶಿವಣ್ಣ ಸಾಥ್ ನೀಡಿದರು.
ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ನಾಮಪತ್ರ ಸಲ್ಲಿಕೆ.!
