ಮತ್ತೊಂದು ಸಿನಿಮಾಕ್ಕೆ ಕ್ರೇಜಿಸ್ಟಾರ್ ಆ್ಯಕ್ಷನ್ ಕಟ್

admin
1 Min Read

ಮತ್ತೊಂದು ಸಿನಿಮಾಕ್ಕೆ ಕ್ರೇಜಿಸ್ಟಾರ್ ಆ್ಯಕ್ಷನ್ ಕಟ್

‘ಕ್ರೇಜಿ ಸ್ಟಾರ್’ ರವಿಚಂದ್ರನ್ ‘ರವಿ ಬೋಪಣ್ಣ’ ಸಿನಿಮಾ ಕೈಗೆತ್ತಿಕೊಂಡಿದ್ದರು. ಅದಕ್ಕೆ ಈಗಾಗಲೇ ಬಹುಪಾಲು ಶೂಟಿಂಗ್ ಮುಗಿಸಿದ್ದಾರೆ ಕೂಡ. ಶೀಘ್ರದಲ್ಲೇ ಆ ಸಿನಿಮಾ ತೆರೆಗೆ ಬರುವ ಸಾಧ್ಯತೆಗಳಿವೆ. ಈ ಮಧ್ಯೆ ‘ಕನ್ನಡಿಗ’ ಎಂಬ ಐತಿಹಾಸಿಕ ಚಿತ್ರದ ಚಿತ್ರೀಕರಣವನ್ನೂ ಕೂಡ ಮುಗಿಸಿದ್ದಾರೆ. ಆ ಚಿತ್ರ ಕೂಡ ತೆರೆಗೆ ಸಿದ್ಧವಾಗುತ್ತಿದೆ. ಇದೆಲ್ಲದರ ಮಧ್ಯೆ ಮತ್ತೊಂದು ಸಿನಿಮಾ ನಿರ್ದೇಶನಕ್ಕೆ ರವಿಚಂದ್ರನ್‌ ಕೈಹಾಕಿದ್ದಾರೆ. ವಿ‍ಶೇಷವೆಂದರೆ, ಇದೊಂದು ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾವಂತೆ!
ರವಿಚಂದ್ರನ್‌ ನಿರ್ದೇಶನ ಎಂದರೆ, ರೊಮ್ಯಾಂಟಿಕ್ ಪ್ರೇಮಕಥೆಗಳನ್ನೇ ಸಿನಿಮಾ ಮಾಡುತ್ತಾರೆ ಎಂಬ ಮಾತಿದೆ. ಅವರ ಸಿನಿಮಾಗಳು ಸಖತ್ ಕಲರ್‌ಫುಲ್ ಆಗಿರುತ್ತವೆ ಎಂಬುದು ಸಿನಿಪ್ರಿಯರ ನಂಬಿಕೆ. ಆದರೆ, ಈಗ ಅವರು ತಮ್ಮ ಜಾನರ್ ಬದಲಿಸಿದ್ದಾರೆ. ‘ರವಿ ಬೋಪಣ್ಣ’ ಥ್ರಿಲ್ಲರ್ ಮಾದರಿಯ ಸಿನಿಮಾ ಆಗಿದ್ದರೆ, ಈಗ ಮಾಡಲಿರುವ ಹೊಸ ಚಿತ್ರ ರಾಜಕೀಯ ಕುರಿತು ಇರಲಿದೆಯಂತೆ. ಇದಕ್ಕೂ ರವಿ ಡೈರೆಕ್ಷನ್ ಮಾಡಲಿದ್ದಾರೆ. ಆದರೆ, ಚಿತ್ರದಲ್ಲಿ ಯಾರೆಲ್ಲ ಇದ್ದಾರೆ? ಯಾವಾಗ ಈ ಸಿನಿಮಾ ಶುರುವಾಗುತ್ತದೆ ಎಂಬ ಮಾಹಿತಿಗಳೆಲ್ಲ ಸದ್ಯಕ್ಕೆ ಬಹಿರಂಗವಾಗಿಲ್ಲ.
ರವಿಚಂದ್ರನ್ ನಟಿಸಿರುವ ‘ಕನ್ನಡಿಗ’ ಚಿತ್ರವನ್ನು ನಿರ್ಮಾಣ ಮಾಡಿರುವುದು ಎನ್.ಎಸ್‌. ರಾಜ್‌ಕುಮಾರ್. ಇದೀಗ ರವಿಚಂದ್ರನ್ ನಿರ್ದೇಶನ ಮಾಡುತ್ತಿರುವ ಈ ಹೊಸ ಸಿನಿಮಾಕ್ಕೂ ಅವರೇ ಬಂಡವಾಳ ಹೂಡಲಿದ್ದಾರೆ. ಈ ಹಿಂದೆ ಜಟ್ಟ, ಕಟಕ, ಮೈತ್ರಿ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಇನ್ನು, ಈಗಾಗಲೇ ಸ್ಕ್ರಿಪ್ಟ್ ಕೆಲಸ ಆರಂಭವಾಗಿದೆಯಂತೆ. ಕಂಪ್ಲೀಟ್ ಆಗಿ ಸ್ಕ್ರಿಪ್ಟ್ ಮುಗಿದ ಮೇಲೆ ಅಧಿಕೃತವಾಗಿ ಅನೌನ್ಸ್ ಮಾಡಲಿದ್ದಾರಂತೆ.
ಇನ್ನು, ‘ಕನ್ನಡಿಗ’ ಚಿತ್ರದಲ್ಲಿ ಕನ್ನಡದ ಲಿಪಿಕಾರ ಗುಣಭದ್ರನ ಪಾತ್ರವನ್ನು ರವಿಚಂದ್ರನ್ ಮಾಡುತ್ತಿದ್ದಾರೆ. ಇದರ ಜೊತೆಗೆ ಈಗ ಸಾಮಂತಭದ್ರ ಎಂಬ ಯೋಧನ ಪಾತ್ರವೂ ಸೇರಿಕೊಂಡಿದೆ. ಅದು ಗುಣಭದ್ರನ ಪೂರ್ವಜರ ಪಾತ್ರವಂತೆ. ರಾಣಿ ಚೆನ್ನಭೈರಾದೇವಿ ಸೇನೆಯ ಯೋಧನಾಗಿ ರವಿಚಂದ್ರನ್‌ ಕಾಣಿಸಿಕೊಳ್ಳುತ್ತಾರೆ. ಈ ಥರದ ಪಾತ್ರವನ್ನು ಅವರು ಮಾಡಿರುವುದು ಇದೇ ಮೊದಲು. 150 ವರ್ಷಕ್ಕೂ ಹಿಂದಿನ ಕಥೆ ‘ಕನ್ನಡಿಗ’ ಚಿತ್ರದಲ್ಲಿದ್ದು, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ ಮಾಡಿದ್ದಾರೆ. ಚಿಕ್ಕಮಗಳೂರು, ಸಾಗರ ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ.

Share This Article
Leave a Comment