ಮನುಷ್ಯರಾಗಿ ಹುಟ್ಟಿದ ಮೇಲೆ ನಾವಷ್ಟೇ ಸಂಪಾದನೆ ಮಾಡಿಕೊಂಡು ಹೋಗೋದಲ್ಲ..ಹುಟ್ಟಿದ ಈ ಭೂಮಿಗೆ ನಮ್ಮಿಂದ ಏನಾದ್ರು ಒಂದಿಷ್ಟು ಉಪಯೋಗಗಳು ಆಗಲಿ, ಅಷ್ಟೇ ಅಲ್ಲದೆ ಪ್ರತಿದಿನ ತಿನ್ನುವ ಅನ್ನದ ಹಿಂದಿರುವ ರೈತರ ಬೆವರನ್ನ ಒರೆಸುವ ಕೆಲಸ ನಮ್ಮಿಂದಾಗಿದಲಿ ಅನ್ನೋ ಸದುದ್ದೇಶದಲ್ಲಿ ಹುಟ್ಟಿಕೊಂಡಿರೋದೆ “ಯಶೋಮಾರ್ಗ”.
‘ಯಶೋಮಾರ್ಗ ’ ಎರಡು ವರ್ಷದ ಹಿಂದೆ ರಾಜ್ಯದಲ್ಲಿ ನೀರಿಲ್ಲದೆ ಜನರು ಹನಿ ನೀರಿಗಾಗಿ ಪರದಾಡುತ್ತಿದ್ದ ಸಮಯದಲ್ಲಿ ಹುಟ್ಟಿಕೊಂಡ ಸಂಸ್ಥೆ. ಸಿನಿಮಾ ನಟ ರಾಕಿಂಗ್ ಸ್ಟಾರ್ ಯಶ್ ಅವರ ಕನಸಿನ ಕೂಸು.
ರೈತರ ಮಗನಾದ ನಾನು ಇಷ್ಟೆಲ್ಲ ಪ್ರೀತಿ ಸಂಪಾದನೆ ಮಾಡಿದ ನಂತರ ರೈತರಿಗಾಗಿ ಏನನ್ನಾದರೂ ಮಾಡಲೇ ಬೇಕು ಅನ್ನೋ ನಿಟ್ಟಿನಲ್ಲಿ ಹುಟ್ಟಿಹಾಕಿರೋ ಸಂಸ್ಥೆ. ಈಗಾಗಲೇ ಕಳೆದ ವರ್ಷದಲ್ಲಿ ಇದರ ಅಡಿಯಲ್ಲಿ ಸಾಕಷ್ಟು ಕಾರ್ಯಕ್ರಮಗಳು ನಡೆದಿದ್ದು ರೈತರ ಸಮಸ್ಯೆಗಳು, ಪರಿಸರ ಕಾಳಜಿ ಮತ್ತು ಬಡಜನರ ಕಷ್ಟ ನಿವಾರಿಸುವುದೇ ಇದರ ಮೂಲ ಉದ್ದೇಶ.
ಪ್ರತಿಯೊಬ್ಬರು ಗಿಡ ನೆಡಿ. ಮುಂದಿನ ಪೀಳಿಗೆಗೆ ಅದು ಜೀವನ ನೀಡುತ್ತದೆ ಅನ್ನುವ ಸಂದೇಶ ಸಾರುವ ಮೂಲಕ ಈಗಾಗಲೇ ಲಕ್ಷ ಲಕ್ಷ ಸಂಪಿಗೆ ಗಿಡಗಳನ್ನ ನೆಡುವಂತಹ ಕೆಲಸ ಈ “ಯಶೋಮಾರ್ಗ”ದಿಂದ ಆಗುತ್ತಿದೆ. ನೊಂದವರಿಗೆ ಆಸರೆಯಂತೆ, ವಯಸ್ಸಾದವ್ರಿಗೆ ಆಶ್ರಯ. ಹೀಗೆ ಉತ್ತಮ ಕೆಲಸಗಳು ಇದೇ “ಯಶೋಮಾರ್ಗ”ದಿಂದ ನಡೆಯುತ್ತಿದೆ.
ಉತ್ತರ ಕರ್ನಾಟಕದಲ್ಲಿ ಟ್ಯಾಂಕರ್ಗಳ ಮೂಲಕ ಜನರಿಗೆ ನೀರನ್ನ ಹಂಚಿದ ನಂತರ ಇದೇ “ಯಶೋಮಾರ್ಗ”ತಂಡದಿಂದ ಮತ್ತಷ್ಟು ಉತ್ತಮ ಕೆಲಸಗಳು ನಡೆದಿವೆ. ಚಿತ್ರೀಕರಣದ ವೇಳೆಯಲ್ಲಿ ಸಾವಿಗೀಡಾದ ದಿವಂಗತ ನಟ ಅನಿಲ್ ಮತ್ತು ಉದಯ್ಅವರ ಕುಟುಂಬಕ್ಕೆ ಅವರ ಮಕ್ಕಳ ಹೆಸರಿನಲ್ಲಿ ಹಣವನ್ನ ಡೆಪಾಸಿಟ್ ಮಾಡಲಾಗಿದೆ.
ಕೆಲ ವಿಶೇಷ ಸಂದರ್ಭದಲ್ಲಿ ಕೆಲವು ವಿಚಾರಗಳು ಜನರಿಗೆ ವೇಗವಾಗಿ ಮುಟ್ಟುತ್ತೆ ಅನ್ನುವ ಉದ್ದೇಶದಿಂದ ವಿವಿಧ ಕೆಲಸಗಳನ್ನು ಮಾಡಲಾಗುತ್ತದೆ. ಯಶ್ಅವರ ಹುಟ್ಟು ಹಬ್ಬದಂದು “ಯಶೋಮಾರ್ಗ”ದ ವತಿಯಿಂದ ಪರಿಸರ ಕ್ಯಾಲೆಂಡರ್ ಬಿಡುಗಡೆ ಮಾಡಲಾಗಿದೆ.
ವಿಶ್ವಸಂಸ್ಥೆ ನಿಗದಿ ಮಾಡಿ, ಆಚರಣೆ ಮಾಡುವ ಪರಿಸರ ದಿನಗಳು ಮಾತ್ರ ಇದರಲ್ಲಿ ದಾಖಲಾಗಿತ್ತು ಅನ್ನೋದು ಇದರ ವಿಶೇಷತೆ. ಪರಿಸರದ ಬಗ್ಗೆ ಮತ್ತು ಪರಿಸರ ದಿನಗಳ ಬಗ್ಗೆ ಚುಟುಕು ಮಾಹಿತಿ ಕೂಡ ಈ ಕ್ಯಾಲೆಂಡ್ರ್ನಲ್ಲಿದೆ. ಅದಷ್ಟೆ ಅಲ್ಲದೆ ಇಲ್ಲಿ “ಯಶೋಮಾರ್ಗ”ದ ಬಗ್ಗೆ ಸಂಪೂರ್ಣ ಮಾಹಿತಿ ಜೊತೆಯಲ್ಲಿ ಮುಕ್ತ ಅಭಿಪ್ರಾಯ ಹಂಚಿಕೊಳ್ಳಲು ಒಂದು ಉತ್ತಮ ವೇದಿಕೆ ಕಲ್ಪಿಸಲಾಗಿದೆ.
ಒಗ್ಗಟ್ಟಿನಲ್ಲಿ ಬಲವಿದೆ ಅನ್ನುವ ಮಾತು ಎಂದಿಗೂ ಚಾಲ್ತಿಯಲ್ಲಿರೋ ಸತ್ಯ. ಒಬ್ಬರೇ ಹೋರಾಟ ಮಾಡುವ ಬದಲು ಒಳ್ಳೆ ಕಾರ್ಯಕ್ಕೆ ಮತ್ತಷ್ಟು ಜನರು ಕೈ ಜೋಡಿಸಿದರೆ ಇಂತಹ ಒಳ್ಳೆ ಕಾರ್ಯಗಳು ಆದಷ್ಟು ವೇಗವಾಗಿ ಜನರ ಬಳಿಗೆ ತಲುಪುತ್ತದೆ ಎನ್ನುವುದಕ್ಕೆ ಯಶೋಮಾರ್ಗ ಉತ್ತಮ ಉದಾಹರಣೆ.