ರಾಜ್ಯದಲ್ಲಿ ಅಗ್ನಿಶಾಮಕ ವಾಹನಗಳ ಖರೀದಿಗೆ ಕ್ರಮ: ಡಾ.ಜಿ.ಪರಮೇಶ್ವರ
ಬೆಳಗಾವಿ: ರಾಜ್ಯದ ವಿವಿಧ ಅಗ್ನಿಶಾಮಕ ಠಾಣೆಗಳಿಗೆ ಅತ್ಯಂತ ಅಗತ್ಯವಿರುವ ಅಗ್ನಿಶಾಮಕ ವಾಹನಗಳ ಖರೀದಿಗೆ ಕ್ರಮ ವಹಿಸಲಾಗುವುದು ಎಂದು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ಹೇಳಿದರು. ವಿಧಾನ ಪರಿಷತ್ತಿನಲ್ಲಿ ಸದಸ್ಯರಾದ ಶರಣಗೌಡ ಬಯ್ಯಾಪುರ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು,
ಅಗ್ನಿಶಾಮಕ ಇಲಾಖೆಯಲ್ಲಿ 15 ವರ್ಷ ಮೇಲ್ಪಟ್ಟು ರಸ್ತೆ ಚಾಲನೆಯಿಂದ ಸ್ಥಗಿತಗೊಂಡಿರುವ ಒಟ್ಟು 358 ವಾಹನಗಳ ಪೈಕಿ 93 ವಾಹನಗಳನ್ನು ಉಪಯೋಗಿಸಲು ಮುಂದಿನ 05 ವರ್ಷಗಳ ಅವಧಿಗೆ ರಸ್ತೆ ಚಾಲನೆಗೆ ವಿನಾಯಿತಿ ನೀಡಿ ಕಾಲಾವಧಿ ವಿಸ್ತರಿಸುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗಿದೆ. ಈ ಪಟ್ಟಿಯಲ್ಲಿ ಕೊಪ್ಪಳ ಜಿಲ್ಲೆಯ 03 ವಾಹನಗಳೂ ಸೇರಿವೆ.
ಪ್ರಸ್ತುತ 150 ಜಲವಾಹನಗಳ ಕವಚ ನಿರ್ಮಾಣ ಮಾಡಲು ಕಾರ್ಯಾದೇಶ ನೀಡಲಾಗಿದ್ದು, ಇದರಲ್ಲಿ 25 ವಾಹನಗಳನ್ನು ಸ್ವೀಕರಿಸಿ ಅಗ್ನಿಶಾಮಕ ಠಾಣೆಗಳಿಗೆ ಮಂಜೂರು ಮಾಡಲಾಗಿದೆ. ಪ್ರಸ್ತುತ 15 ಜಲವಾಹನಗಳನ್ನು ಅಗ್ನಿಶಾಮಕ ಇಲಾಖೆಯಲ್ಲಿ ಸ್ವೀಕರಿಸಿದ್ದು, ಈ ವಾಹನಗಳಿಗೆ ಕೆ.ಜಿ.ಐ.ಡಿ ವಿಮೆ ಮತ್ತು ಆರ್.ಟಿ.ಓ. ನೋಂದಣಿ ಮಾಡಿಸುವ ಕೆಲಸ ಪ್ರಗತಿಯಲ್ಲಿದೆ. ಬಾಕಿ ಉಳಿದ 110 ಜಲವಾಹನಗಳ ಕವಚ ನಿರ್ಮಾಣ ಕಾರ್ಯವು ಪ್ರಗತಿಯಲ್ಲಿದ್ದು, ಸರಬರಾಜಾದ ನಂತರ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಅಗ್ನಿಶಾಮಕ ಠಾಣೆಗಳಿಗೆ ಜಲವಾಹನಗಳನ್ನು ಮಂಜೂರು ಮಾಡಲು ಪರಿಶೀಲಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.






