ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ

tnit editors
1 Min Read

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ

ಬೆಂಗಳೂರು: ತಮ್ಮ ವಿರುದ್ಧ ಪ್ರಕಟವಾದ ಆಕ್ಷೇಪಾರ್ಹ ಹೇಳಿಕೆಗಳನ್ನು ಪ್ರಶ್ನಿಸಿ ಶ್ರೀಲಂಕಾ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಎಎಚ್‌ಎಂಡಿ ನವಾಜ್ ಸಲ್ಲಿಸಿದ ಅರ್ಜಿಗೆ ಗೂಗಲ್ ಎಲ್‌ಎಲ್‌ಸಿ ಹಾಗೂ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿವೆ.

ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸಚ್ಚಿನ್ ಶಂಕರ್ ಮಗದಂ ಅವರಿದ್ದ ಪೀಠ ನಡೆಸಿತು. ವಿಚಾರಣೆ ವೇಳೆ ಗೂಗಲ್ ಪರ ವಕೀಲರು, ಅರ್ಜಿದಾರರು ವಿದೇಶದ ನ್ಯಾಯಮೂರ್ತಿಯಾಗಿದ್ದು, ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಅಧಿಕಾರವಿದೆಯೇ ಎಂಬ ಪ್ರಶ್ನೆ ಎತ್ತಿದರು. ಅಲ್ಲದೆ, ಆರೋಪಿತ ವಿಷಯಗಳು ಶ್ರೀಲಂಕಾದಲ್ಲಿ ಪ್ರಕಟವಾಗಿದ್ದು, ಗೂಗಲ್ ಅಮೆರಿಕದಲ್ಲಿ ನೋಂದಾಯಿತ ಕಂಪನಿ ಆಗಿದೆ ಎಂದು ಪೀಠಕ್ಕೆ ವಿವರಿಸಿದರು.

ಕೇಂದ್ರ ಸರ್ಕಾರದ ಪರ ವಕೀಲರು ಸಹ, ವಿದೇಶಿ ನ್ಯಾಯಮೂರ್ತಿಯೊಬ್ಬರು ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಈ ಅರ್ಜಿಯನ್ನು ಇಲ್ಲಿ ವಿಚಾರಣೆ ನಡೆಸಲು ಯೋಗ್ಯತೆ ಇರುವುದನ್ನು ಅರ್ಜಿದಾರರು ಸಮರ್ಪಕವಾಗಿ ವಿವರಿಸಿಲ್ಲ ಎಂದು ವಾದಿಸಿದರು.

ಇದಕ್ಕೆ ಪ್ರತಿಯಾಗಿ ಅರ್ಜಿದಾರರ ಪರ ವಕೀಲರು, ಸಂವಿಧಾನದ ಸಮಾನತೆ ಹಕ್ಕು (ಪರಿಚ್ಛೇದ 14) ಭಾರತೀಯ ನಾಗರಿಕರಷ್ಟೇ ಅಲ್ಲದೆ ಇತರರಿಗೂ ಅನ್ವಯವಾಗುತ್ತದೆ ಎಂದು ತಿಳಿಸಿದರು. ಗೂಗಲ್ ಮಧ್ಯವರ್ತಿ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅಪವಾದಾತ್ಮಕ ವಿಷಯಗಳನ್ನು ತೆಗೆದುಹಾಕುವ ಜವಾಬ್ದಾರಿ ಹೊಂದಿದೆ ಎಂದು ಹೇಳಿದರು.

ಇದೇ ವೇಳೆ, ವಿಚಾರಣೆಯಲ್ಲಿರುವ ಪ್ರಕರಣದ ಬಗ್ಗೆ ಆಕ್ಷೇಪಾರ್ಹ ವಿಷಯಗಳು ಪ್ರಕಟವಾಗುವುದು ನ್ಯಾಯಾಂಗದ ಗೌರವಕ್ಕೆ ಧಕ್ಕೆಯಾಗಿದೆ ಎಂದು ವಾದಿಸಿದರು.

ಎರಡೂ ಪಕ್ಷಗಳ ವಾದಗಳನ್ನು ಆಲಿಸಿದ ನ್ಯಾಯಪೀಠ, ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್ 6ಕ್ಕೆ ಮುಂದೂಡಿತು.

Share This Article