ವಿಶ್ವಕಪ್ ಹೀರೋ 1 ವರ್ಷದ ನಿಷೇಧದ ಶಿಕ್ಷೆಗೆ ಒಳಗಾಗಿದ್ದಾರೆ. 2018ರ ಅಂಡರ್ 19 ವರ್ಲ್ಡ್ಕಪ್ ಫೈನಲ್ನಲ್ಲಿ ಸೆಂಚುರಿ ಸಿಡಿಸಿ ಮಿಂಚಿದ್ದ ಯುವ ಆಟಗಾರ ಮಂಜೋತ್ ಕಾಲ್ರಾ ಶಿಕ್ಷೆಗೆ ಗುರಿಯಾದವರು! ಡೆಲ್ಲಿ ಹಾಗೂ ಜಿಲ್ಲಾ ಕ್ರಿಕೆಡ್ ಬೋರ್ಡ್ ಮಂಜೋತ್ ಗೆ ರಣಜಿ ಕ್ರಿಕೆಟ್ ಆಡದಂತೆ 1 ವರ್ಷ ನಿಷೇಧ ಹೇರಿದೆ.
ಎಡಗೈ ಬ್ಯಾಟ್ಸ್ಮನ್ ಮಂಜೋತ್ ಕಾಲ್ರಾ ಅಂಡರ್ -19 ವಿಶ್ವಕಪ್ ನಲ್ಲಿ ಭಾರತ ತಂಡದ ಪರ ಉತ್ತಮ ಪ್ರದರ್ಶನ ನೀಡಿದ್ದರು. ಭರವಸೆಯ ಆಟಗಾರರಾಗಿರುವ ಇವರು ವಯಸ್ಸಿನ ತಪ್ಪು ಪ್ರಮಾಣ ಪತ್ರ ನೀಡಿ ಇದೀಗ ಶಿಕ್ಷೆ ಅನುಭವಿಸುತ್ತಿದ್ದಾರೆ. ಅಂಡರ್ 16 ಮತ್ತು ಅಂಡರ್ 19 ಕ್ರಿಕೆಟ್ ಆಡುವಾಗ ಕಾಲ್ರಾ ಡೆಲ್ಲಿ ಸಂಸ್ಥೆಗೆ ತಪ್ಪು ಪ್ರಮಾಣ ಪತ್ರ ನೀಡಿದ್ದರು. ಈ ಹಿನ್ನೆಲೆಯಲ್ಲಿ 1 ವರ್ಷ ರಣಜಿ ಕ್ರಿಕೆಟ್ ಆಡದಂತೆ ಹಾಗೂ 2 ವರ್ಷ ಅಂಡರ್ 23 ಕ್ರಿಕೆಟ್ ಆಡದಂತೆ ಶಿಕ್ಷೆಗೆ ಗುರಿಯಾಗಿದ್ದಾರೆ.
ಬಿಸಿಸಿಐ ಮಾಹಿತಿಯ ಅನ್ವಯ ಕಾಲ್ರಾ 20 ವರ್ಷ, 351 ದಿನ ವಯಸ್ಸಿನವರಾಗಿದ್ದು, ಕಳೆದ ವಾರ ಅಂಡರ್-23 ರಲ್ಲಿ ದೆಹಲಿ ತಂಡದಲ್ಲಿ ಬಂಗಾಳದ ವಿರುದ್ಧ ನಡೆದ ಮ್ಯಾಚಿನಲ್ಲಿ ಪಾಲ್ಗೊಂಡು ಉತ್ತಮ ಆಟವಾಡಿದ್ದರು. ಡೆಲ್ಲಿ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರಾಗಿದ್ದ ನಿವೃತ್ತ ನ್ಯಾಯಮೂರ್ತಿ, ಬಾದರ್ ದುರಾಜ್ ಅಹ್ಮದ್ ಅವರು ತಮ್ಮ ಅಂತಿಮ ದಿನದಂದು ಆದೇಶವನ್ನು ಹೊರಡಿಸಿದ್ದಾರೆ. ಈ ಹುದ್ದೆಗೆ ಹೊಸಬರು ನೇಮಕವಾಗಿ ಕಾಲ್ರಾ ಮೇಲಿನ ನಿಷೇಧವನ್ನು ತೆರವು ಮಾಡುವವರೆಗೂ ತಂಡಕ್ಕೆ ಪರಿಗಣಿಸಲಾಗಲ್ಲ.
ಇಂತಹದ್ದೇ ಅಪರಾಧದಲ್ಲಿ ದೆಹಲಿ ತಂಡದ ಉಪನಾಯಕ ನಿತೀಶ್ ರಾಣಾ ಅವರಿಗೆ ಯಾವುದೇ ಶಿಕ್ಷೆಯಾಗಿಲ್ಲ. ಶಿಸ್ತುಕ್ರಮದಿಂದ ಅವರಿಗೆ ವಿನಾಯಿತಿ ನೀಡಿ, ಹೆಚ್ಚಿನ ದಾಖಲೆಗಳನ್ನು ನೀಡಲು ಕೋರಲಾಗಿತ್ತು. ಆದರೆ, ಕಾಲ್ರಾಗೆ ಶಿಕ್ಷೆ ವಿಧಿಸಲಾಗಿರುವುದು ಅಚ್ಚರಿ ತಂದಿದೆ!