ಎನ್. ಅಂಬಿಕಾ. ಮುಂಬೈ ಮಹಾನಗರದ ದಕ್ಷ ಪೊಲೀಸ್ ಅಧಿಕಾರಿ. ಮೂಲತಃ ನಮ್ಮ ನೆರೆಯ ತಮಿಳುನಾಡಿನ ದಿಂಡಿಕಲ್ ನಿವಾಸಿ. 14ನೇ ವಯಸ್ಸಿನಲ್ಲೇ ಪೊಲೀಸ್ ಪೇದೆಯ ಕೈ ಹಿಡಿದಿದ್ದರು. 10ನೇ ತರಗತಿ ಸಹ ಓದಿರಲಿಲ್ಲ. ಅಲ್ಲದೆ, ಇವರಿಗೆ 18ನೇ ವಯಸ್ಸಿಗೆ ಅಳಿಗನ್ ಮತ್ತು ನಿಹಾರಿಕಾ ಎಂಬ ಇಬ್ಬರು ಮಕ್ಕಳು.
ಅಂಬಿಕಾ ಅವರು ಒಮ್ಮೆ ಪೊಲೀಸ್ ಪೇದೆಯಾದ ತಮ್ಮ ಪತಿಯನ್ನು ಕಾಣಲು ಮಕ್ಕಳೊಂದಿಗೆ ಒಂದು ಕಾರ್ಯಕ್ರಮಕ್ಕೆ ಹೋಗುತ್ತಾರೆ. ಅಲ್ಲಿ ಒಬ್ಬ ಡಿಜಿಪಿಗೆ ಎಲ್ಲರೂ ಗೌರವವನ್ನು ಕೊಡುವುದನ್ನು ನೋಡುತ್ತಾರೆ. ಮತ್ತೆ ಅಲ್ಲಿ ಕೆಲವು ಐಪಿಎಸ್ ಅಧಿಕಾರಿಗಳು ನಿಂತಿರುವುದನ್ನು ಕಂಡು ಅವರು ಯಾರು ಎಂದು ತಮ್ಮ ಪತಿಯ ಬಳಿ ವಿಚಾರಿಸುತ್ತಾರೆ.
ಅಂಬಿಕಾ ಅವರ ಪತಿ ಪೋಲಿಸ್ ಪೇದೆ, ಅವರೆಲ್ಲ ದೊಡ್ಡ ಅಧಿಕಾರಿಗಳು ಎಂದು ವಿವರ ಕೊಡುತ್ತಾರೆ. ಆಗ ಅಂಬಿಕಾ ಐಪಿಎಸ್ ಅಧಿಕಾರಿ ಆಗಬೇಕೆಂದು ನಿರ್ಧರಿಸುತ್ತಾರೆ. ಒಮ್ಮೆ ಅವರು ತಮ್ಮ ಗಂಡನಿಗೆ ಹೇಳುತ್ತಾರಂತೆ. ತಾನು ಕೂಡ ಪೊಲೀಸ್ ಅಧಿಕಾರಿ ಆಗಬೇಕೆಂದು. ಅದಕ್ಕೆ ಒಪ್ಪಿಕೊಂಡ ಪೊಲೀಸ್ ಪೇದೆ ತನ್ನ ಹೆಂಡತಿ ಅಂಬಿಕಾ ಅವರಿಗೆ ಪ್ರೋತ್ಸಾಹ ನೀಡುತ್ತಾರೆ.
ನಂತರ ಅಂಬಿಕಾ, ಹತ್ತನೇ ತರಗತಿ, ಪಿಯುಸಿಯನ್ನು ತಮಿಳು ಮಾಧ್ಯಮದಲ್ಲಿ ಮುಗಿಸುತ್ತಾರೆ. ನಂತರ ಅವರು ಮುಂದಿನ ವ್ಯಾಸಂಗ ಹಾಗೂ ತರಬೇತಿಗಾಗಿ ಚೆನ್ನೈಗೆ ತೆರಳುತ್ತಾರೆ. ಅಲ್ಲಿ ಪಿಜಿಯಲ್ಲಿ ಉಳಿದುಕೊಳ್ಳಲು ಅಂಬಿಕಾ ಅವರ ಪತಿಯೇ ಎಲ್ಲ ವ್ಯವಸ್ಥೆಯನ್ನು ಮಾಡಿಕೊಡುತ್ತಾರೆ. ನಂತರ ಮೂರು ವರ್ಷ ಕಳೆದರೂ ಅವರು ಯುಪಿಎಸ್ಸಿ ಪರೀಕ್ಷೆಯ ಪ್ರಿಲಿಮ್ಸ್ ಕೂಡ ಪಾಸ್ ಮಾಡುವುದಿಲ್ಲ. ಆಗ ಅವರ ಗಂಡ, ನಿನಗೆ ಓದಲು ಸಾಧ್ಯವಿಲ್ಲ ಸಾಕು ಮನೆಗೆ ವಾಪಸ್ ಬರುವಂತೆ ಕೇಳಿಕೊಳ್ಳುತ್ತಾರೆ.
ಆಗ ಅದಕ್ಕೆ ಉತ್ತರಿಸಿದ ಅಂಬಿಕಾ, ಇನ್ನೊಂದು ವರ್ಷದ ಕಾಲ ಅವಕಾಶ ಕೊಡಿ ಪ್ರಯತ್ನಿಸುತ್ತೇನೆ ಅಂತಾರೆ. ಪಾಸ್ ಆಗ್ದೇ ಹೋದ್ರೆ ವಾಪಸ್ ಬಂದು ಶಿಕ್ಷಕಿಯಾಗಿ ವೃತ್ತಿ ಪ್ರಾರಂಭಿಸುತ್ತೇನೆಂದು ಭರವಸೆ ಕೊಡುತ್ತಾರೆ. ನಂತರ ನೋಡಿ, ಒಂದು ವರ್ಷದ ಬಳಿಕ ಅಂದರೆ, 2008ರಲ್ಲಿ ಅವರು ಪ್ರಿಲಿಮ್ಸ್, ಮೇನ್ ಎಕ್ಸಾಮ್ ಹಾಗೂ ಇಂಟರ್ವ್ಯೂ ಅನ್ನು ಪಾಸ್ ಮಾಡಿ ಐಪಿಎಸ್ ಅಧಿಕಾರಿ ಆಗುತ್ತಾರೆ.
ಐಪಿಎಸ್ ಅಧಿಕಾರಿ ಆದ ಮೇಲೆ ಅಂಬಿಕಾ ಅವರು ಟ್ರೈನಿಂಗ್ ದಿನಗಳಲ್ಲಿ ನಮ್ಮ ಕರ್ನಾಟಕದ ಐಪಿಎಸ್ ಆಫೀಸರ್ ರವಿ ಡಿ ಚನ್ನಣ್ಣನವರ್ ಜೊತೆ ಕೆಲಸ ಮಾಡಿದ್ದರಂತೆ. ಸದ್ಯ ಅಂಬಿಕಾ ಅವರು, ಮುಂಬೈ ನಾರ್ತ್ ಜೋನ್ ನಲ್ಲಿ ಡಿಸಿಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ ಬೆಸ್ಟ್ ಪೊಲೀಸ್ ಆಫೀಸರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಬಡವರು ಮತ್ತು ಹಿರಿಯ ನಾಗರಿಕರ ಬಗ್ಗೆ ವಿಶೇಷ ಕಾಳಜಿವುಳ್ಳ ಅಧಿಕಾರಿ ಎನಿಸಿದ್ದಾರೆ.
ಐಪಿಎಸ್ ಅಧಿಕಾರಿ ಅಂಬಿಕಾ ಅವರ ಸ್ಪೂರ್ತಿದಾಯಕ ಕಥೆಯನ್ನು ನಮ್ಮ ಪೊಲೀಸ್ ಆಫೀಸರ್ ರವಿ ಚನ್ನಣ್ಣನವರ್ ವೇದಿಕೆಯೊಂದರಲ್ಲಿ ಹಂಚಿಕೊಂಡಿದ್ದಾರೆ. ಅಂಬಿಕಾ ಅವರು ಪ್ರತಿಯೊಬ್ಬರಿಗೂ ಸ್ಫೂರ್ತಿ ಎಂದೇ ಹೇಳಿದ್ದಾರೆ. ನೀವು ನೋಡಿರುವಂತೆ, ಅಂಬಿಕಾ ಅವರ ಗುರಿ ಮತ್ತು ದಿಟ್ಟತನ ಪ್ರತಿಯೊಬ್ಬರಿಗೂ ಆದರ್ಶ ಅಲ್ಲವೇ?