ರೇಣುಕಾಸ್ವಾಮಿ ಕೊಲೆ ಪ್ರಕರಣ: ಇಂದು ದರ್ಶನ್ ಜಾಮೀನು ಅರ್ಜಿ ಭವಿಷ್ಯ ನಿರ್ಧಾರ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿರುವ ದರ್ಶನ್, ಪವಿತ್ರಾ ಗೌಡ ಮುಂತಾದವರ ಭವಿಷ್ಯ ಇಂದು ನಿರ್ಧಾರ ಆಗಲಿದೆ. ಪವಿತ್ರಾ ಗೌಡ ಎ1 ಆಗಿದ್ದು, ಪರಪ್ಪನ ಅಗ್ರಹಾರದಲ್ಲಿ ಕಂಬಿ ಎಣಿಸುತ್ತಿದ್ದಾರೆ. ಇತ್ತ ಮೆಡಿಕಲ್ ಬೇಲ್ ಮೇಲೆ ಹೊರಗೆ ಬಂದ ದರ್ಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಹೈಕೋರ್ಟ್ನಲ್ಲಿ ಇಬ್ಬರ ಬೇಲ್ ಅರ್ಜಿ ವಿಚಾರಣೆ ಕೂಡ ನಡೆದಿತ್ತು. ವಾದ-ಪ್ರತಿವಾದದ ಬಳಿಕ ನ್ಯಾಯಾಧೀಶರು ತೀರ್ಪು ಕಾಯ್ದಿರಿಸಿದ್ರು. ಅದರಂತೆ ಇಂದು ತೀರ್ಪು ಪ್ರಕಟ ಆಗಲಿದೆ.
ಇಂದು ಹೈಕೋರ್ಟ್ ನಲ್ಲಿ ಮಹತ್ವದ ತೀರ್ಪು ಹೊರ ಬೀಳಲಿದ್ದು, ಈ ಮೂಲಕ ದಾಸನ ಸಿನಿ ಭವಿಷ್ಯ ಮುಂದೆ ಏನು ಎಂಬುವುದು ನಿರ್ಧಾರವಾಗಲಿದೆ. ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರ ನೇತೃತ್ವದ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಕಳೆದ ಕೆಲ ವಾರಗಳಿಂದ ನಡೆಯುತ್ತಿತ್ತು. ದರ್ಶನ್ ಪರವಾಗಿ ವಕೀಲ ಸಿವಿ ನಾಗೇಶ್ ವಾದ ಮಂಡಿಸಿ, ದರ್ಶನ್ ಅವರನ್ನು ಈ ಪ್ರಕರಣದಲ್ಲಿ ಸಿಕ್ಕಿಸಲಾಗಿದೆ ಎಂದು ಹೇಳಿದ್ದಾರೆ.
ಅತ್ತ, ಸರ್ಕಾರಿ ಪರ ವಕೀಲ ಪ್ರಸನ್ನ ಕುಮಾರ್ ಅವರು ದರ್ಶನ್ ಅವರು ಈ ಪ್ರಕರಣದಲ್ಲಿ ಭಾಗಿ ಆಗಿದ್ದಾರೆ ಎಂಬುದಕ್ಕೆ ಸಾಕ್ಷಿಗಳು ಸಿಕ್ಕಿವೆ ಎಂಬುದನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದಾರೆ.
ಸದ್ಯ ಕೋರ್ಟ್ ಎರಡೂ ಕಡೆಯ ವಾದವನ್ನು ಆಲಿಸಿದ್ದು, ತೀರ್ಪನ್ನು ಕಾಯ್ದಿರಿಸಿದೆ. ಇಂದು ಮಧ್ಯಾಹ್ನ 2:30ರ ಸುಮಾರಿಗೆ ತೀರ್ಪನ್ನು ನೀಡಲಿದೆ. ಸದ್ಯ ದರ್ಶನ್ ಅವರು ಆಸ್ಪತ್ರೆಯಿಂದಲೇ ಟೆನ್ಷನ್ನಲ್ಲಿ ಇದಕ್ಕಾಗಿ ಕಾಯುತ್ತಿದ್ದಾರೆ. ಇದು ದರ್ಶನ್ ಅವರ ಸಿನಿ ಭವಿಷ್ಯವನ್ನೂ ನಿರ್ಧರಿಸಲಿದೆ.