ಬೆಂಗಳೂರಲ್ಲಿ ಮಧ್ಯರಾತ್ರಿ ಯುವತಿ ಮೇಲೆ ಅತ್ಯಾಚಾರ: ಕಾಮುಕರು ಅರೆಸ್ಟ್!
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ಭೀಕರ ಘಟನೆಯೊಂದು ನಡೆದಿದೆ. ಕೆಆರ್ ಮಾರುಕಟ್ಟೆ ಬಸ್ ನಿಲ್ದಾಣದಲ್ಲಿ ಕುಳಿತಿದ್ದ ಮಹಿಳೆಯನ್ನು ಹೊತ್ತೊಯ್ದು ಅತ್ಯಾಚಾರ ಎಸಗಿದ ದುಷ್ಕರ್ಮಿಗಳು ಚಿನ್ನಾಭರಣ, ನಗದು, ಹಣ ದೋಚಿದ್ದಾರೆ. ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ಗಣೇಶ್, ಶರವಣ ಬಂಧಿತ ಆರೋಪಿಗಳಾಗಿದ್ದು, ಕೆ.ಆರ್ ಮಾರ್ಕೆಟ್ನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಏನಿದು ಪ್ರಕರಣ?
ಕಳೆದ ಭಾನುವಾರ ಮಧ್ಯರಾತ್ರಿ 11.30ರ ವೇಳೆಗೆ ತಮಿಳುನಾಡಿನಿಂದ ಬಂದ ಮಹಿಳೆ ಯಲಹಂಕಕ್ಕೆ ತೆರಳಲು ಕೆ.ಆರ್ ಮಾರ್ಕೆಟ್ ಬಳಿ ಬಸ್ ಗಾಗಿ ಕಾಯುತ್ತಿರುವಾಗ ಘಟನೆ ನಡೆದಿದೆ. ಯಲಹಂಕ ಕಡೆಗೆ ಬಸ್ ಬರದ ಕಾರಣ ಬಸ್ ಎಲ್ಲಿ ಬರುತ್ತೆ ಅಂತಾ ದುಷ್ಕರ್ಮಿಗಳನ್ನ ವಿಚಾರಿಸಿದ್ದಾರೆ. ಬಸ್ ಬರುವ ಜಾಗ ತೋರಿಸತ್ತೇವೆ ಅಂತಾ ಬಸ್ ನಿಲ್ದಾಣದ ಸಮೀಪದಲ್ಲೇ ಇರುವ ಗೋಡೌನ್ ಸ್ಟ್ರೀಟ್ಗೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾರೆ.
ಅತ್ಯಾಚಾರ ಮಾಡಿ ಮಹಿಳೆಯ ಮೇಲಿದ್ದ ಆಭರಣಗಳನ್ನ ದೋಚಿ ಪರಾರಿಯಾಗಿದ್ದಾರೆ. ಸಂತ್ರಸ್ತ ಮಹಿಳೆ ಬೆಂಗಳೂರಿನ ಕೇಂದ್ರ ವಿಭಾಗದ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಎರಡು ವಿಶೇಷ ತಂಡಗಳನ್ನ ರಚಿಸಿ ಕಾಮುಕರಿಗೆ ಹೆಡೆಮುರಿ ಕಟ್ಟಲು ಬಲೆ ಬೀಸಿದ್ದರು. ಇಂದು ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.