ಚೀಲ ತುಂಬಿಸಿಕೊಳ್ಳುವ ನೀತಿ ಅಳವಡಿಸಿಕೊಂಡಿದ್ದಾರೆ..
ಮುಖ್ಯಮಂತ್ರಿ ಕೃಪಾಕಟಾಕ್ಷದಲ್ಲೇ ಅಬಕಾರಿ ಸಚಿವರ
ಭ್ರಷ್ಟಾಚಾರ: ಸಿ.ಟಿ.ರವಿ ಆರೋಪ
ಬೆಂಗಳೂರು: ಅಬಕಾರಿ ಸಚಿವರನ್ನು ವಜಾ ಮಾಡದೇ ಇಟ್ಟುಕೊಂಡಿದ್ದನ್ನು ನೋಡಿದಾಗ ಮಾನ್ಯ ಮುಖ್ಯಮಂತ್ರಿಗಳ ಕೃಪಾಕಟಾಕ್ಷದಲ್ಲೇ ಅಬಕಾರಿ ಸಚಿವರೂ ಭ್ರಷ್ಟಾಚಾರ ನಡೆಸುತ್ತಿರುವುದು ಸ್ಪಷ್ಟವಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಆರೋಪಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಶ್ನೆಗೆ ಉತ್ತರಿಸಿದರು. ಅಬಕಾರಿ ಇಲಾಖೆ ಭ್ರಷ್ಟಾಚಾರ ಒಂದು ವರ್ಷದ ಹಿಂದೆಯೇ ಜಗಜ್ಜಾಹೀರಾಗಿತ್ತು. ಆ ಸಂದರ್ಭದಲ್ಲಿ ತೇಪೆ ಹಾಕುವ ಕೆಲಸ ಮಾಡಿದ್ದರು. ಅವತ್ತೇ ಮಂತ್ರಿಯನ್ನು ವಜಾ ಮಾಡಬೇಕಿತ್ತು ಎಂದು ತಿಳಿಸಿದರು.
ಈ ಸರಕಾರವೇ ಭ್ರಷ್ಟಾಚಾರದಲ್ಲಿ ತೊಡಗಿದೆ. ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಟೀಕಿಸಿದರು. ಯಾರು ಈ ಸರಕಾರವನ್ನು ಬೆಂಬಲಿಸಿದರೋ ಅವರೇ ಇವತ್ತು ಈ ಸರಕಾರ ಅತ್ಯಂತ ಭ್ರಷ್ಟ ಸರಕಾರ ಎಂದು ಮಾತನಾಡುತ್ತಿದ್ದಾರೆ ಎಂದು ನುಡಿದರು. ಅಂಥ ವಾತಾವರಣ ನಿರ್ಮಾಣವಾಗಿದೆ. ಗುತ್ತಿಗೆದಾರರೇ ಶೇ 60 ಕಮಿಷನ್ ಆರೋಪ ಮಾಡಿದ್ದಾರೆ ಎಂದು ಗಮನ ಸೆಳೆದರು.
ಸರಕಾರವು ಭ್ರಷ್ಟಾಚಾರದ ಚರಮಸೀಮೆಗೆ ತಲುಪಿದೆ. ಮುಖ್ಯಮಂತ್ರಿಗಳು ಕೂಡ ಇನ್ನೆಷ್ಟು ದಿನ ಇರುತ್ತೀನೋ, ನಾಳೆ ಮತ್ತೆ ಈ ಅವಕಾಶ ಸಿಗಲ್ಲ; ಇದ್ದಾಗ ಎಷ್ಟು ಚೀಲ ತುಂಬಿಸಿಕೊಳ್ಳಲು ಸಾಧ್ಯವೋ ಅಷ್ಟು ಚೀಲ ತುಂಬಿಸಿಕೊಳ್ಳುವ ನೀತಿ ಅಳವಡಿಸಿಕೊಂಡಿದ್ದಾರೆ ಎಂದು ಸಿ.ಟಿ. ರವಿ ಅವರು ಆಕ್ಷೇಪಿಸಿದರು. ಭ್ರಷ್ಟಾಚಾರದ ವಿಷಯದ ಬಗ್ಗೆ ಈ ಸರಕಾರದಲ್ಲಿ ಭ್ರಷ್ಟಾಚಾರಿಗಳಿಗೇ ಪ್ರೋತ್ಸಾಹ ಕೊಡುವ ವ್ಯವಸ್ಥೆ ನಿರ್ಮಾಣವಾಗಿದೆ ಎಂದು ತಿಳಿಸಿದರು.






