ಬೆಂಗಳೂರಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಗುರುವಾಯನಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಸಿಕ್ಕಿದ್ದು, ವಿದ್ಯಾರ್ಥಿ ಬ್ಲ್ಯೂವೆಲ್ ಗೆ ಬಲಿಯಾಗಿದ್ದಾನೆಯೇ ಎಂಬ ಶಂಕೆಮೂಡಿದೆ.
ಬೆಂಗಳೂರಿನ ಐಟಿಐ ವಿದ್ಯಾಮಂದಿರ್ ಶಾಲೆಯಲ್ಲಿ ವ್ಯಾಸಂಗ ಮಾಡ್ತಿದ್ದ ಯಶ್ವಂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಡೈರಿ ಸಿಕ್ಕಿದೆ. ಅದರಲ್ಲಿ ಆರ ಯಾವುದೋ ಟಾಸ್ಕ್ ಗಾಗಿ ಬೆಂಗಳೂರಿಂದ ಉಡುಪಿಗೆ ಹೊರಟಿದ್ದ ಎನ್ನಲಾಗಿದೆ. ಜುಲೈ24ರಂದು ನಾನು ಉಡುಪಿಗೆ ಹೋಗ್ತೀನಿ, ಅಲ್ಲಿ ಕೆಲಸ ಮಾಡ್ತೀನಿ ಎಂದು ಜನವರಿ 1ರಂದು ಬರೆದಿದ್ದಾನೆ..! ಮನೆಯಿಂದ ಹೊರಡುವಾಗ ಮಂಗಳೂರು ಅಡ್ವೆಂಚರ್ ಟ್ರಿಪ್ ಗೆ ಹೋಗುವುದಾಗಿ ಚೀಟಿ ಬರೆದು ತಿಳಿಸಿದ್ದ. ಸಿಕ್ಕಿರುವ ಡೈರಿ ಬರಹ ಬ್ಲ್ಯೂವೆಲ್ ಗೆ ಬಲಿಯಾಗಿರಬಹುದೆಂಬ ಅನುಮಾನ ಹುಟ್ಟುಹಾಕಿದೆ.
ಬೆಂಗಳೂರಿನ ಹೂಡಿ ಮುನಿಸ್ವಾಮಿ ಶೆಟ್ಟಿ ಬಡಾವಣೆ ನಿವಾಸಿ ಎನ್ ವಿ ಪ್ರೇಮ್ ಕುಮಾರ್ ಅವರ ಮಗನಾದ ಯಶವಂತ್ ಐಟಿಐ ವಿದ್ಯಾಮಂದಿರ ವಿದ್ಯಾರ್ಥಿ.
ಮಂಗಳವಾರ ಈತನ ಅಜ್ಜ ಶಾಲೆಗೆ ಕಳುಹಿಸಲು ಕರೆ ತಂದು ಬಸ್ ನಿಲ್ದಾಣದಲ್ಲಿ ಬಿಟ್ಟು ಮನೆಗೆ ಮರಳಿದ್ದರು. ಆ ಬಳಿಕ ವಿದ್ಯಾರ್ಥಿ, ಕುಟುಂಬದವರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಯಶ್ವಂತ್ ಸಾಯಿ ನಾಪತ್ತೆಯಾಗಿರುವುದು ಗೊತ್ತಾಗುತ್ತಿದ್ದಂತೆ ಆತನ ಕುಟುಂಬದವರು ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇತ್ತ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಗ್ರಾಮದ ಬಳಿ ಬುಧವಾರ ಸಂಜೆ ಶಾಲಾ ಬ್ಯಾಗ್, ಶಾಲಾ ಐಡಿ ಕಾರ್ಡ್, ಆಧಾರ್ ಕಾರ್ಡ್ ಪತ್ತೆಯಾಗಿತ್ತು. ಇದನ್ನು ಕಂಡ ಸ್ಥಳೀಯರು ಈ ಬಗ್ಗೆ ಬೆಳ್ತಂಗಡಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಶೋಧ ನಡೆಸಿದಾಗ ಬಾಲಕನ ಶವ ಪತ್ತೆಯಾಗಿತ್ತು. ಬೆಂಗಳೂರಿನಿಂದ ಮಂಗಳೂರಿಗೆ ಹೋಗಲು ತೆಗೆದುಕೊಂಡಿದ್ದ 372 ರೂ. ಟಿಕೆಟ್ ಮತ್ತು ಬೆಳ್ತಂಗಡಿಯಿಂದ ಕಾರ್ಕಳಕ್ಕೆ ತೆರಳಲು ಮಾಡಿದ್ದ 53 ರೂ. ಟಿಕೆಟ್ ಕೂಡಾ ಬ್ಯಾಗಿನಲ್ಲಿ ಪತ್ತೆಯಾಗಿತ್ತು.