ಮದುವೆ ವಿಚಾರಕ್ಕೆ ಜಗಳ: ಪ್ರಿಯತಮೆಯನ್ನು ವೈಯರ್‌ನಿಂದ ಕತ್ತು ಬಿಗಿದು ಕೊಲೆ

tnit editors
1 Min Read

ಮದುವೆ ವಿಚಾರಕ್ಕೆ ಜಗಳ: ಪ್ರಿಯತಮೆಯನ್ನು ವೈಯರ್‌ನಿಂದ ಕತ್ತು ಬಿಗಿದು ಕೊಲೆ

ಬೆಂಗಳೂರು: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಬೆಂಗಳೂರಿಗೆ ಕರೆತಂದ ಪ್ರಿಯಕರನೇ, ಮದುವೆ ವಿಚಾರಕ್ಕೆ ಶುರುವಾದ ಜಗಳದ ಹಿನ್ನೆಲೆ ಪ್ರಿಯತಮೆಯನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಕೊಡತಿ ಬಳಿ ನಡೆದಿದೆ.

ಕೊಡಗು ಮೂಲದ ರಂಜಿತಾ (24) ಮೃತಪಟ್ಟವರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಯ್ಯಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಮೃತ ರಂಜಿತಾ ಹಾಗೂ ಆರೋಪಿ ಅಯ್ಯಪ್ಪ ಇಬ್ಬರೂ ಕೊಡಗಿನ ಪೊನ್ನಂಪೇಟೆ ಮೂಲದವರು. ಅಯ್ಯಪ್ಪ ಈಗಾಗಲೇ ವಿವಾಹಿತನಾಗಿದ್ದು, ಮೊದಲ ಪತ್ನಿಯಿಂದ ದೂರವಾಗಿದ್ದನು. ತನ್ನ ಊರಿನ ಪಕ್ಕದವಳಾದ ರಂಜಿತಾಳನ್ನು ಪ್ರೀತಿಸುತ್ತಿದ್ದ ಆತ, ಅವಳನ್ನೇ ಮದುವೆಯಾಗುವುದಾಗಿ ನಂಬಿಸಿದ್ದನು. ಆತನ ಮಾತು ನಂಬಿದ ರಂಜಿತಾ ಮನೆ ಬಿಟ್ಟು ಬೆಂಗಳೂರಿಗೆ ಬಂದಿದ್ದಳು.

ಇಬ್ಬರೂ ಕೊಡತಿ ಬಳಿಯ ಗೋಪಾಲ್ ಎಂಬುವವರ ಮನೆಯಲ್ಲಿ ಕಳೆದ ಎರಡು ತಿಂಗಳಿನಿಂದ ವಾಸವಾಗಿದ್ದರು. ರಂಜಿತಾ ಡಿ-ಮಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ಅಯ್ಯಪ್ಪ ಡ್ರೈ ಫ್ರೂಟ್ಸ್ ಅಂಗಡಿಯಲ್ಲಿ ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಿದ್ದನು.

ಆದರೆ ಮೊದಲ ಪತ್ನಿಗೆ ವಿಚ್ಛೇದನ ನೀಡದೆ ತನ್ನನ್ನು ಮದುವೆಯಾಗುವಂತೆ ರಂಜಿತಾ ಒತ್ತಾಯಿಸುತ್ತಿದ್ದಳು. ಇದೇ ವಿಚಾರಕ್ಕೆ ಇಬ್ಬರ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು. ಶುಕ್ರವಾರ ಮಧ್ಯರಾತ್ರಿ ಜಗಳ ತೀವ್ರಗೊಂಡಾಗ ಆರೋಪಿ ಅಯ್ಯಪ್ಪ ವೈಯರ್‌ನಿಂದ ರಂಜಿತಾಳ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಕೊಲೆ ಮಾಡಿದ ಬಳಿಕ ಅದನ್ನು ಆತ್ಮಹತ್ಯೆಯಂತೆ ತೋರಿಸಲು ಅಯ್ಯಪ್ಪ ಯತ್ನಿಸಿದ್ದಾನೆ. ರಂಜಿತಾ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾಳೆ ಎಂದು ನಂಬಿಸುವಂತೆ ದೃಶ್ಯ ಸೃಷ್ಟಿಸಿ ಮನೆ ಮಾಲೀಕ ಗೋಪಾಲ್ ಅವರಿಗೆ ತಿಳಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾನೆ.

ಆದರೆ ಸ್ಥಳಕ್ಕೆ ಭೇಟಿ ನೀಡಿದ ವರ್ತೂರು ಪೊಲೀಸರು ಪರಿಶೀಲನೆ ನಡೆಸಿದಾಗ ಅಯ್ಯಪ್ಪನ ನಾಟಕ ಬಯಲಾಗಿದೆ. ಕುತ್ತಿಗೆಯ ಮೇಲಿದ್ದ ಗುರುತುಗಳು ಹಾಗೂ ಮನೆಯಲ್ಲಿದ್ದ ಸಾಕ್ಷ್ಯಾಧಾರಗಳು ಇದು ಆತ್ಮಹತ್ಯೆಯಲ್ಲ, ಕೊಲೆ ಎಂಬುದನ್ನು ಸೂಚಿಸಿವೆ. ತೀವ್ರ ವಿಚಾರಣೆ ನಡೆಸಿದ ವೇಳೆ ಆರೋಪಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.

Share This Article