ಉತ್ತರ ಕನ್ನಡದ ಇವತ್ತಿನ ಪರಿಸ್ಥಿತಿಗೆ ಯಾರು ಕಾರಣವೋ ಗೊತ್ತಿಲ್ಲ. ಆದರೆ, ಪ್ರತಿಯೊಂದು ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿವೆ ಎನ್ನುವುದರಲ್ಲಿ ಅನುಮಾನವಿಲ್ಲ. ಅನುಮಾನಾಸ್ಪದ ಸಾವಿಗೀಡಾದ ಯುವಕ ಪರೇಶ್ ಮೇಸ್ತಾ
ಈ ರಾಜಕೀಯ ಪಕ್ಷಗಳಿಗೆ ಆಹಾರವಾಗಿರುವುದು ವಿಪರ್ಯಾಸ…!
ಪ್ರೀತಿಯ ಮಿತ್ರರೇ, ಸಾವಿನಲ್ಲಿ ರಾಜಕೀಯ ಮಾಡ್ತಿರೋ ಎಲ್ಲಾ ರಾಜಕೀಯ ಪಕ್ಷಗಳು, ರಾಜಕಾರಣಿಗಳು ಕೂಡ ಒಂದೇ. ಘಟನೆಗೆ ಸಂಬಂಧಿಸಿದಂತೆ ಎಲ್ಲವೂ ಅಂತೆ-ಕಂತೆ. ರಾಜಕೀಯ ಪಕ್ಷಗಳು ತಮಗೆ ಬೇಕಾದಂತೆ ಘಟನೆಗೆ ಬಣ್ಣ ಹಚ್ಚುತ್ತವೆ. ತಪ್ಪು
ಸಂದೇಶಗಳನ್ನು ರವಾನೆ ಮಾಡುತ್ತವೆ. ಸತ್ಯ ಕಂಡವರು ಯಾರು…? ತನ್ನ ಸಾವು ಹೇಗಾಯ್ತು ಅಂತ ಪರೇಶ್ ಬಂದು ಹೇಳಿದರೂ ಇವರುಗಳು ನಂಬಲ್ಲ! ಕಾರಣವಿಷ್ಟೇ, ಬಹುತೇಕ ರಾಜಕಾರಣಿಗಳಿಗೆ, ಪಕ್ಷಗಳಿಗೆ ಬೇಕಾಗಿರೋದು ಪರೇಶ್
ಸಾವಿನ ಸತ್ಯ ಬಯಲಾಗಬೇಕಿರುವುದಲ್ಲ…! ಬದಲಿಗೆ ಅವರಿಗೆ ಬೇಕಾಗಿರುವುದು ವೋಟ್ ಮಾತ್ರ..! ಹೌದು, ಸಂಶಯವಿಲ್ಲ ಅಷ್ಟು ಮಾತ್ರ…!
ಈ ಘಟನೆ ಮಾತ್ರವಲ್ಲ, ನೀವು ಇಂತಹ ಯಾವುದೇ ಕೋಮುಗಲಭೆಗಳನ್ನು ತೆಗೆದುಕೊಳ್ಳಿ. ಬೆಂಕಿಹಚ್ಚಿ ಮರೆಯಲ್ಲಿ ನಿಂತು ಮಜಾ ನೋಡೋರು ನಾಯಕರೆನಿಸಿಕೊಂಡವರು…! ಸಾಯೋದು, ನೋವು ತಿನ್ನೋದು ಜನಸಾಮಾನ್ಯರು. ಪ್ರಚೋದನಕಾರಿ
ಸಂದೇಶಗಳಿಗೆ ಕಿವಿಗೊಡುವ ಹಿತ್ತಾಳೆ ಕಿವಿ ನಿಮ್ಮದಾಗದಿರಲಿ. ನಿಮಗೆ ಹೆಚ್ಚುಕಡಿಮೆಯಾದರೆ? ನಿಮ್ಮ ಕುಟುಂಬ, ಅಪ್ಪ-ಅಮ್ಮ, ಹೆಂಡ್ತಿ-ಮಕ್ಕಳು ಅನಾಥರಾಗುತ್ತಾರೆಯೇ ವಿನಃ ನಿಮ್ಮನ್ನು ಪ್ರಚೋದಿಸಿದ ಯಾವ ನಾಯಕನೂ ಅಲ್ಲ…!
ರಸ್ತೆಯಲ್ಲಿ ಹೊಡೆದಾಡಿ ಸಾಯೋದು ನೀವು, ನಿಮ್ಮವರು…! ಆದ್ದರಿಂದ ದಯವಿಟ್ಟು ಇಂತಹ ಯಾವುದೇ ಘಟನೆಗಳಲ್ಲಿ ಭಾಗಿಯಾಗಬೇಡಿ. ನಿಮ್ಮನ್ನು ನಂಬಿದವರಿಗಾಗಿ ನೀವು ಬದುಕಿ… ಬದುಕಲು ಬಿಡಿ…ಯಾವ ರಾಜಕಾರಣಿಯೂ ಬಡಜೀವಗಳಿಗೆ ಅನ್ನ ಹಾಕಲಾರ…ನಾವೇ ದುಡಿಯಬೇಕು, ತಿನ್ನಬೇಕು…! ಹಾಗಾಗಿ ಇಂತಹ ಹೊಲಸು ರಾಜಕೀಯದಲ್ಲಿ ನೀವು ಕಳೆದು ಹೋಗದಿರಿ…ಇದು ನಿಮ್ಮ ‘ದಿ ನ್ಯೂ ಇಂಡಿಯನ್ ಟೈಮ್ಸ್’ ನ ಕಳಕಳಿಯ ಪ್ರಾರ್ಥನೆ…