ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಾತನಾಡಿದ ನಟ ಪ್ರಕಾಶ್ ರೈ ಅವರಿಗೆ ಸಂಸದ ಪ್ರತಾಪ್ ಸಿಂಹ ಖಡಕ್ ಉತ್ತರ ನೀಡಿದ್ದಾರೆ. ಅಷ್ಟೇ ಅಲ್ಲದೆ ಒಂದಿಷ್ಟು ಪ್ರಶ್ನೆಗಳನ್ನು ಪ್ರಕಾಶ್ ರೈ ಮುಂದಿಟ್ಟಿರುವ ಅವರು ನೀವು ನಿಜ ಜೀವನದಲ್ಲಿಯೂ ಖಳನಟರಾಗಬೇಡಿ ಎಂದು ಹೇಳಿದ್ದಾರೆ.
ಮೋದಿ ನನಗಿಂತ ಬಹುದೊಡ್ಡ ನಟ ಎಂಬ ಪ್ರಕಾಶ್ ರೈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಪ್ರತಾಪ್ ಸಿಂಹ, ರಾಜ್ಕುಮಾರ್, ಅಮಿತಾಬಚ್ಚನ್, ಬಾಲಣ್ಣ ಸೇರಿದಂತೆ ಅನೇಕ ಅದ್ಬುತ ನಟರುಗಳನ್ನು ನೋಡಿದ್ದೇವೆ. ಅವರ್ಯಾರು ಯಾವತ್ತೂ ತಮ್ಮನ್ನು ತಾವು ದೊಡ್ಡ ನಟ, ಅದ್ಭುತ ನಟ ಎಂದು ಹೇಳಿಕೊಂಡಿಲ್ಲ. ನೀವು ನಿಮಗೆ ನೀವೇ ದೊಡ್ಡ ನಟ ಎಂದು ಹೇಳಿಕೊಳ್ಳುವ ದುರಂಹಕಾರವನ್ನು ಬಿಡಿ ಎಂದಿದ್ದಾರೆ.
ಗೌರಿ ಹತ್ಯೆಯನ್ನು ನಾವೂ ಕೂಡ ಖಂಡಿಸುತ್ತೇವೆ. ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡಿ, ಅದನ್ನು ಬಿಟ್ಟು ಮೋದಿ ವಿರುದ್ಧ ಅವಹೇಳನಕಾರಿ ಮಾತನ್ನೇಕೆ ಆಡುತ್ತೀರಿ ಎಂದು ರೈ ಅವರನ್ನು ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.
ನಟರಾಗಿರುವ ನಿಮಗೂ ವಿವೇಚನೆ ಇದೆ ಎನ್ನುವುದನ್ನು ಮರೆಯಬೇಡಿ. ಈಗ ಮಾತನಾಡುತ್ತಿರುವ ನೀವು ಹಿಂದೆ ಬಿಜೆಪಿ ಕಾರ್ಯಕರ್ತರ ಹತ್ಯೆಯಾದಾಗ ಏಕೆ ಮಾತಾಡಿಲ್ಲ. ಅವರ್ಯಾರು ಕನ್ನಡಿಗರಲ್ಲವೇ? ಅಷ್ಟೇ ಏಕೆ ಕಾವೇರಿ ವಿಚಾರದಲ್ಲಿ ನಿಮ್ಮನ್ನು ಪ್ರಶ್ನೆ ಮಾಡಿದಾಗ ನಯವಾಗಿ ಉತ್ತರಿಸುವ ಬದಲು ನಾನೊಬ್ಬ ನಟ, ನಟನಾಗಿರಲು ಬಿಡಿ ಎಂದು ಕಿರಿಚಾಡಿ ತಮಿಳಿನ ಪ್ರೀತಿ ಮೆರೆದಿದ್ದೀರಲ್ಲ. ಈಗಲೂ ನಟರಾಗಿಯೇ ಇರಿ. ಇಲ್ಲವಾದದಲ್ಲಿ ಯಾರನ್ನು ಪ್ರಶ್ನಿಸಬೇಕೋ ಅವರನ್ನು ಪ್ರಶ್ನಿಸಿ. ಪ್ರಧಾನಿ ಮೋದಿಯನ್ನು ಹಾದಿಗೆ ಬೀದಿಗೆ ತಂದು ಮಾತನಾಡಬೇಡಿ. ನಿಮ್ಮ ನಟನೆಯನ್ನು ಇಷ್ಟಪಟ್ಟಿರುವ ನಮಗೆ ನಿಮ್ಮಮೇಲೆ ಗೌರವವಿದೆ ಅದನ್ನು ಉಳಿಸಿಕೊಳ್ಳಿ ಎಂದು ಹೇಳಿದ್ದಾರೆ.