ಬರಬರುತ್ತಾ ಎಲ್ಲವೂ ಯಾಂತ್ರೀಕೃತ ಬದುಕು. ಈ ಬದುಕಲ್ಲಿ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಜನ್ಮ ನೀಡಿದ ತಂದೆ-ತಾಯಿಯನ್ನು ಮನೆಯಿಂದ ಆಚೆ ಹಾಕುವುದಿರಲಿ, ಅವರನ್ನು ಕೊಲೆ ಮಾಡಿದ ಪಾಪಿ ಮಕ್ಕಳೂ ಇದ್ದಾರೆ…!
ಇಂತವರ ನಡುವೆ ಬೆಲೆಕಟ್ಟಲಾಗದ ಸಂಬಂಧ ಉಳಿಸಲು ಜೀವ ಮುಡಿಪಾಗಿಡುವ ಮಂದಿಯೂ ಅಲ್ಲಲ್ಲಿ ಇದ್ದಾರೆ.
ಇಲ್ಲಿ ಇಷ್ಟೆಲ್ಲಾ ಹೇಳೋಕೆ ಕಾರಣ ಮೈಸೂರಿನ ವೀರನಗರ ನಿವಾಸಿ ಪ್ರೀತೇಶ್ ಜೈನ್.
ಹೌದು ಪ್ರೀತೇಶ್ ಜೈನ್ ತನ್ನ ತಂದೆಗೆ ಲಿವರ್ ದಾನಮಾಡಲು ಮುಂದಾಗಿದ್ದಾರೆ. ಲಿವರ್ ದಾನಕ್ಕೆ ತನ್ನ ದೇಹದ ತೂಕ ಅಡ್ಡಿಯಾಗಿದ್ದು, ಇದನ್ನು ಇಳಿಸಲು ಸೈಕಲ್ ಸವಾರಿ ಮಾಡುತ್ತಿದ್ದಾರೆ.
ಪ್ರೀತೇಶ್ ಚಿನ್ನ ಮತ್ತು ಬೆಳ್ಳಿ ವ್ಯಾಪಾರಿ. ಇವರ ತಂದೆ ಅಶೋಕ್ ಜೈನ್ ಅವರು ಕಳೆದ ಎಂಟು ವರ್ಷಗಳಿಂದ ಲಿವರ್ ಸಿರೋಸಿಸ್ ನಿಂದ ಬಳಲುತ್ತಿದ್ದಾರೆ. ಎಷ್ಟೇ ಚಿಕಿತ್ಸೆ ಪಡೆದರೂ ಅವರು ಗುಣಮುಖವಾಗಲಿಲ್ಲ.ವೈದ್ಯರು ಅಶೋಕ್ ಅವರ ಲಿವರ್ ಅನ್ನು ತೆಗೆದು ಹೊಸ ಲಿವರ್ ಜೋಡಣೆ ಮಾಡಬೇಕೆಂದು ಹೇಳಿದ್ದಾರೆ. ರಕ್ತ ಸಂಬಂಧಿಗಳೇ ಲಿವರ್ ದಾನ ಮಾಡಿದರೆ ಉತ್ತಮ ಎಂದು ಹೇಳಿದ್ದಾರೆ. ಪ್ರಿತೇಶ್ ಕುಟುಂಬದ ಒಪ್ಪಿಗೆ ಮೇರೆಗೆ ಲಿವರ್ ದಾನ ಮಾಡಲು ಮುಂದಾಗಿದ್ದಾರೆ.
ಪಿತ್ರೇಶ್ 90ಕೆಜಿ ತೂಗುತ್ತಿದ್ದರಿಂದ ಲಿವರ್ ದಾನಕ್ಕೆ ಆ ತೂಕ ಅಡ್ಡಿಯಾಗಿದೆ. 70ರಿಂದ 75 ಕೆಜಿ ತೂಕಕ್ಕೆ ಇಳಿಸಲು ವೈದ್ಯರು ಸಲಹೆ ನೀಡಿದ್ದಾರೆ. ನಿತ್ಯದ ವ್ಯಾಯಾಮದ ಜೊತೆಗೆ ಚಾಮುಂಡಿಬೆಟ್ಟಕ್ಕೆ ಪ್ರತಿದಿನ ಸೈಕಲ್ ತುಳಿಯುತ್ತಿದ್ದಾರೆ. ಈಗ 7 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ.
ಪ್ರೀತೇಶ್ ಅವರನ್ನು ಮೆಚ್ಚಲೇ ಬೇಕಲ್ಲವೇ…?