ವಿಜಯ ಕರ್ನಾಟಕ ದಿನ ಪತ್ರಿಕೆಯ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಯೊಬ್ಬರು ಕಳ್ಳರ ಬೆನ್ನಟ್ಟಿ , ಸಾರ್ವಜನಿಕರ ಸಹಾಯದಿಂದ ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ…!
ವಿಕ ಎಚ್ .ಆರ್ ಅಧಿಕಾರಿ ಡಾ. ಪ್ರಸನ್ನ ಮತ್ತು ಅಂಚೆ ಇಲಾಖೆಯಲ್ಲಿ ಅಧೀಕ್ಷಕರಾಗಿರುವ ಅವರ ಪತ್ನಿ ರೇಖಾ ಅವರು ಬೆಂಗಳೂರಿನ ಆರ್ ಟಿ ನಗರದಲ್ಲಿರುವ ತರಬಾಳು ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಸಂಜೆ ವಿವಾಹ ಸಮಾರಂಭವೊಂದರಲ್ಲಿ ಭಾಗಿಯಾಗಿದ್ದರು.
ರಾತ್ರಿ ಸುಮಾರು 9.30ರ ವೇಳೆಗೆ ಮನೆಗೆ ವಾಪಸ್ಸಾಗಲು ಕಲ್ಯಾಣ ಮಂಟಪದ ಎದುರು ನಿಂತು ಕ್ಯಾಬ್ ಬುಕ್ ಮಾಡುತ್ತಿದ್ದರು. ಅಷ್ಟರಲ್ಲಿ ಸ್ಕೂಟರ್ ನಲ್ಲಿ ಬಂದ ಸರಗಳ್ಳರು ಪ್ರಸನ್ನ ಅವರ ಪಕ್ಕದಲ್ಲೇ ಇದ್ದ ಪತ್ನಿ ರೇಖಾ ಅವರ ಕತ್ತಿನಲ್ಲಿದ್ದ ಸರ ಕಸಿಯಲು ವಿಫಲ ಯತ್ನ ಮಾಡಿದ್ದಾರೆ.
ಸರ ಸಿಗದ ಕಳ್ಳರು ಕೂಡಲೇ ಪ್ರಸನ್ನ ಅವರ ಕೈ ನಲ್ಲಿದ್ದ ಮೊಬೈಲ್ ಕಿತ್ತುಕೊಂಡಿದ್ದಾರೆ. ತಡಮಾಡದೆ ಪ್ರಸನ್ನ ಕಳ್ಳ ಕಳ್ಳ ಎಂದು ಕೂಗುತ್ತಾ ಸ್ಕೂಟರ್ ಹಿಂದೆ ಓಡಿದ್ದಾರೆ..!
ಆಗ ಎದುರುಗಡೆ ಬೈಕ್ ನಿಂದ ಬರ್ತಿದ್ದ ಬೈಕ್ ಸವಾರನೊಬ್ಬ ಕಳ್ಳರ ಸ್ಕೂಟರ್ ಅಡ್ಡಗಟ್ಟಿದ್ದಾನೆ. ಆಗ ತಪ್ಪಿಸಿಕೊಳ್ಳಲು ಯತ್ನಿದ ಕಳ್ಳರು ಕೆಳಗೆ ಬಿದ್ದಿದ್ದಾರೆ. ಓರ್ವ ಸ್ಥಳದಿಂದ ಕಾಲ್ಕಿತ್ತಿದ್ದಾನೆ.ಇನ್ನೊಬ್ಬನನ್ನು ಪ್ರಸನ್ನ ಹಿಡಿದುಕೊಂಡಿದ್ದಾರೆ. ತಪ್ಪಿಸಿಕೊಂಡು ಹೋಗುತ್ತಿದ್ದ ಇನ್ನೋರ್ವ ಕಳ್ಳನನ್ನು ಸಾರ್ವಜನಿಕರು ಹಿಡಿದಿದ್ದಾರೆ. ಇಬ್ಬರಿಗೂ ಜನ ಧರ್ಮದೇಟು ನೀಡಿ ಬುದ್ಧಿ ಕಲಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಸರಗಳ್ಳರನ್ನು ವಶಕ್ಕೆ ಪಡೆದಿದ್ದಾರೆ.