ನ್ಯೂಸ್ 18 ಕನ್ನಡದಲ್ಲಿ ಭಾರೀ ಬದಲಾವಣೆ…!

1
565

ಬದಲಾವಣೆ ಜಗದ ನಿಯಮ ಎನ್ನುವ ಹಾಗೆ, ನ್ಯೂಸ್​ 18 ವಾಹಿನಿಯಲ್ಲಿ ಬದಲಾವಣೆ ನಿರಂತರವಾಗಿ ನಡೀತಾನೆ ಇದೆ. ಸದ್ಯ ಹಿಂದೆಂದಿಗಿಂತಲೂ ದೊಡ್ಡ ಮಟ್ಟದ ಬದಲಾವಣೆಯಾಗಿದ್ದು, ಬಲಿಷ್ಠ ತಂಡವೊಂದು ವಾಹಿನಿಯನ್ನ ಮುನ್ನಡೆಸುವ ಜವಾಬ್ದಾರಿಯನ್ನ ಹೊತ್ತುಕೊಂಡಿದೆ. ಈ ಮೊದಲು ಈಟಿವಿ ನ್ಯೂಸ್​ ಹೆಸರಿನಿಂದ ಕನ್ನಡಿಗರ ಮನೆ ಮಾತಾಗಿದ್ದ ವಾಹಿನಿ ಇತ್ತೀಚೆಗಷ್ಟೇ ನ್ಯೂಸ್​ 18 ಕನ್ನಡ ಎಂದು ಬದಲಾಗಿದೆ. ಆರಂಭದಲ್ಲಿ ಜಿ.ಎನ್​. ಮೋಹನ್​ ಈಟಿವಿ ನ್ಯೂಸ್​ನ ನೇತೃತ್ವ ವಹಿಸಿದ್ದರು. ಬಳಿಕ ರಂಗನಾಥ ಭಾರದ್ವಾಜ್​ ಸಾರಥ್ಯ ವಹಿಸಿಕೊಂಡರು. ಕೆಲ ತಿಂಗಳಲ್ಲೇ ಶಿವಮೊಗ್ಗ ಮೂಲದ ದೆಹಲಿ ಪತ್ರಕರ್ತ ಡಿ.ಪಿ. ಸತೀಶ್​ ಜವಾಬ್ದಾರಿ ಹೊತ್ತುಕೊಂಡಿದ್ದರು. ಆನಂತರದಲ್ಲಿ ಅನಂತ್​ ಚಿನಿವಾರ್​ ವಾಹಿನಿಯ ಎಡಿಟರ್​ ಇನ್​ ಚೀಫ್​ ಆಗಿ ಕಾರ್ಯ ನಿರ್ವಹಿಸಿದ್ದರು. ಕೆಲವೇ ವರ್ಷಗಳಲ್ಲಿ ನಾಲ್ಕೈದು ಸಂಪಾದಕರನ್ನು ಕಂಡಂತಾ ನ್ಯೂಸ್​18ನಲ್ಲಿ ಈಗ ಮತ್ತೆ ಹೊಸ ತಂಡ ರೆಡಿಯಾಗಿದೆ.
ಇಲ್ಲಿಗೆ ಒಂದು ವರ್ಷದ ಹಿಂದಷ್ಟೇ ಸುದ್ದಿ ಟಿವಿಯಿಂದ ಹೊರಬಂದ ಲಕ್ಷ್ಮಣ್​ ಹೂಗಾರ್​, ಸಂಪಾದಕೀಯ ಸಲಹೆಗಾರರಾಗಿ ನ್ಯೂಸ್​18 ಸೇರಿದ್ದರು. ಇತ್ತೀಚೆಗಷ್ಟೇ ಸುವರ್ಣ ವಾಹಿನಿ ತೊರೆದ ಡೇರ್​ ಡೆವಿಲ್​ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಕೂಡ ನ್ಯೂಸ್​18 ವಾಹಿನಿ ಸೇರಿದ್ದಾರೆ. ಇನ್ನು ಕಳೆದ ವಾರವಷ್ಟೇ ಸುವರ್ಣ ವಾಹಿನಿಯ ಪ್ರೋಗ್ರಾಮ್​ ಎಡಿಟರ್​ ಆಗಿದ್ದ ಸಿದ್ದು ಕಾಳೋಜಿ ಹಾಗೂ ಪ್ರೊಡಕ್ಷನ್​ ಹೆಡ್​ ಆಗಿದ್ದಂತಾ ಸ್ವರೂಪ್​ ಮುರಗೋಡು ಅವರು ಕೂಡ ನ್ಯೂಸ್​18 ಸೇರಿದ್ದಾರೆ.
ಸದ್ಯಕ್ಕೆ ವಿಜಯಲಕ್ಷ್ಮಿ ಶಿಬರೂರು, ಲಕ್ಷ್ಮಣ್​ ಹೂಗಾರ್​, ಸಿದ್ದು ಕಾಳೋಜಿ ಹಾಗೂ ಸ್ವರೂಪ್ ಅವರೇ ನ್ಯೂಸ್​18 ಕನ್ನಡ ವಾಹಿನಿಯ ಕೋರ್​ ಟೀಮ್​. ವಾಹಿನಿಯ ಎಡಿಟರ್​ ಇನ್​ ಚೀಫ್​ ಹುದ್ದೆ ಖಾಲಿ ಇದೆ. ಆದರೆ ಈಗಾಗಲೇ ಈ ಹುದ್ದೆಗೆ ಅನೇಕ ಹೆಸರುಗಳು ಚಾಲ್ತಿಗೆ ಬಂದಿವೆ. ಅವುಗಳ ಪೈಕಿ ಪ್ರಜಾ ಟಿವಿಯ ಮುಖ್ಯಸ್ಥ ಮನೋಜ್​, ದಿಗ್ವಿಜಯ ವಾಹಿನಿಯ ಸಂಪಾದಕ ಚೇತನ್​ ಸೇರಿದಂತೆ ಹಲವು ಹೆಸರುಗಳು ಚಾಲ್ತಿಯಲ್ಲಿವೆ. ಒಟ್ಟಾರೆ, ಕನ್ನಡ ಸುದ್ದಿವಾಹಿನಿಗಳ ಟಿಆರ್​ಪಿ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನವನ್ನು ಹೊಂದಿರುವ ನ್ಯೂಸ್​18 ಕನ್ನಡ, ಬದಲವಾಣೆ ವಿಚಾರದಲ್ಲಿ ನಂಬರ್​ ಒನ್​ ಸ್ಥಾನದಲ್ಲಿದೆ ಅಂದರೆ ತಪ್ಪೇನು ಇಲ್ಲ.

1 COMMENT

LEAVE A REPLY

Please enter your comment!
Please enter your name here