ಕನ್ನಡ ಚಿತ್ರರಂಗದ ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ, ಅಪ್ಪು-ಪಪ್ಪು ಸಿನಿಮಾ ಖ್ಯಾತಿಯ ಸ್ನೇಹಿತೇಶ್ ಗೂಂಡಾಗಿರಿ ನಡೆಸಿದ್ದು, ಮಹಿಳೆ ಮೇಲೆ ಹಲ್ಲೆ ಆರೋಪ ಕೇಳಿಬಂದಿದೆ.
ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ನಲ್ಲಿ ಈ ಘಟನೆ ನಡೆದಿದೆ. ಈಸ್ಟ್ ವೆಸ್ಟ್ ಗ್ರೂಪ್ ಮಾಲೀಕ ರಜತ್ ಮನೆಗೆ ನುಗ್ಗಿ ಹಲ್ಲೆ ಮಾಡಲಾಗಿದೆ. 10 ಜನ ಬೌನ್ಸರ್ಗಳನ್ನು ಕರೆದುಕೊಂಡು ಬಂದು ಗಲಾಟೆ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ತಮ್ಮ ಮನೆಯ ಎದುರಿನ ಮನೆ ಕೆಲಸದ ಮಹಿಳೆ ಮೇಲೆ ಸ್ನೇಹಿತೇಶ್ ತನ್ನ ಗುಂಪಿನ ಜೊತೆ ಬಂದು ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಇಬ್ಬರು ಮಹಿಳಾ ಸಿಬ್ಬಂದಿಗೆ ಥಳಿಸಿದ ಆರೋಪ ಕೂಡ ಇದೆ. ಸದ್ಯ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇಂದು ಸಂಜೆ ಸ್ನೇಹಿತೇಶ್ ಮನೆ ಎದುರು ಇಬ್ಬರು ಮಹಿಳೆಯರು ಕಸ ಗುಡಿಸುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಸ್ನೇಹಿತೇಶ್ ಮತ್ತು ಆತನ ಬೌನ್ಸ್ಸರ್ಸ್ ಆಟವಾಡುತ್ತಿದ್ದರು. ಆಗ ಸ್ನೇಹಿತೇಶ್ ಮೈ ಮೇಲೆ ಕಸ ಬೀಳುತ್ತೆ ಗುಡಿಸಬೇಡಿ ಎಂದು ಕಿರಿಕ್ ಮಾಡಿದ್ದಾನೆ. ನಂತರ ಗಲಾಟೆ ಮುಂದುವರೆದಿದ್ದು ಸ್ನೇಹಿತೇಶ್ ಮಹಿಳೆ ಮನೆಗೆ ನುಗ್ಗಿ ಹಲ್ಲೆ ನಡೆಸಿ, ಮಹಿಳೆ ಮನೆಯಲ್ಲಿದ್ದ ವಸ್ತುಗಳನ್ನು ಹಾಳು ಮಾಡಿದ್ದಾರೆ, ಹೆಣ್ಣು ಎಂಬುದನ್ನು ನೋಡದೇ ಮಹಿಳೆ ಬಟ್ಟೆ ಹರಿದು ಹಲ್ಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.