ಭಾರತ ತಂಡದ ಮಾಜಿ ನಾಯಕ , ಕಿರಿಯರ ಗುರು, ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್ ಸಾಮಾನ್ಯವಾಗಿ ಯಾವುದೇ ವಿವಾದದಲ್ಲಿ ಸಿಲುಕಿಕೊಂಡವರಲ್ಲ. ಈಗ ಅವರು ಸ್ವಹಿತಾಸಕ್ತಿ ಸಂಘರ್ಷದ ಸುಳಿಯಲ್ಲಿ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಮುಖ್ಯಸ್ಥ ಸ್ಥಾನದ ಅಧಿಕಾರ ಸ್ವೀಕರಿಸಲು ವಿಳಂಬವಾಗುತ್ತಿದೆ ಎನ್ನಲಾಗಿದೆ.
ಪೂರ್ವನಿಗದಿಯಂತೆ ದ್ರಾವಿಡ್ ಜುಲೈ 1ರಂದೇ ಅಧಿಕಾರ ಸ್ವೀಕರಿಸಬೇಕಿತ್ತು. ದ್ರಾವಿಡ್ ಇಂಡಿಯಾ ಸಿಮೆಂಟ್ಸ್ನಲ್ಲಿ ಉದ್ಯೋಗಿಯಾಗಿರುವುದರಿಂದ ಅದು ಸಾಧ್ಯವಾಗಿಲ್ಲ. ಬಿಸಿಸಿಐ ನಿಯಮದಂತೆ ಏಕಕಾಲದಲ್ಲಿ ಎರಡು ಕಡೆ ಸಂಬಳ ಪಡೆಯುವಂತಿಲ್ಲ. ಇದು ದ್ರಾವಿಡ್ ಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಆದ್ದರಿಂದ ದ್ರಾವಿಡ್ ಇಂಡಿಯಾ ಸಿಮೆಂಟ್ಸ್ಗೆ ರಾಜೀನಾಮೆ ಸಲ್ಲಿಸಿದ ಬಳಿಕವೇ ಎನ್ಸಿಎ ಅಧಿಕಾರ ಸ್ವೀಕರಿಸುವ ಸಾಧ್ಯತೆ ಹೆಚ್ಚಿದೆ.
ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ ಸದಸ್ಯ ಸಂಜೀವ್ ಗುಪ್ತಾ ಅವರು ನೀಡಿದ್ದ ದೂರಿನ ಅನ್ವಯ ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ಈಗಾಗಲೆ ಹಿತಾಸಕ್ತಿ ಸಂಘರ್ಷ ಆರೋಪದ ವಿಚಾರಣೆಯನ್ನು ಎದುರಿಸಿದ್ದಾರೆ. ದ್ರಾವಿಡ್ ವಿರುದ್ಧವೂ ಸಂಜೀವ್ ಗುಪ್ತಾ ಜೂನ್ 30ರಂದು ಬಿಸಿಸಿಐ ಒಂಬುಡ್ಸ್ಮನ್ ಡಿಕೆ ಜೈನ್ ಹಾಗೂ ಕ್ರಿಕೆಟ್ ಆಡಳಿತಾಧಿಕಾರಿಗಳ ಸಮಿತಿಗೆ (ಸಿಒಎ) ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ದ್ರಾವಿಡ್ ಕೂಡ ಸ್ವ ಹಿತಾಸಕ್ತಿ ಸಂಘರ್ಷ ಎದುರಿಬೇಕಾಗಿ ಬಂದಿದೆ.