ಈ ಜಿಲ್ಲೆಯ 270 ಗ್ರಾಮಗಳಲ್ಲಿ ಕೊರೊನಾವೇ ಇಲ್ಲ!

admin
2 Min Read

ಚಾಮರಾಜನಗರ ಎರಡು ರಾಜ್ಯಗಳೊಂದಿಗೆ ಗಡಿಯನ್ನು ಹಂಚಿಕೊಂಡಿರುವುದಲ್ಲದೆ, ಬುಡಗಟ್ಟು ಜನಾಂಗದವರು ಹೆಚ್ಚು ವಾಸಿಸುವ ಮತ್ತು ಅಭಿವೃದ್ಧಿ ವಂಚಿತ ಜಿಲ್ಲೆಯಾಗಿದೆ ಎಂಬುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ. ಇಂತಹ ಜಿಲ್ಲೆಯಲ್ಲಿ ತೀವ್ರ ಗತಿಯಲ್ಲಿ ಏರುತ್ತಿದ್ದ ಕೊರೊನಾ ಸೋಂಕನ್ನು ತಹಬದಿಗೆ ತರುವ ಪ್ರಯತ್ನ ನಡೆಯುತ್ತಲೇ ಇದ್ದು ಅದರ ಫಲವಾಗಿ ಈಗ 530 ಗ್ರಾಮಗಳ ಪೈಕಿ 270 ಗ್ರಾಮಗಳು ಕೊರೊನಾದಿಂದ ಮುಕ್ತಿ ಪಡೆಯುವಂತಾಗಿದೆ.

 

ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದಾಗಿ 24 ಕೊರೊನಾ ಸೋಂಕಿತರುಸಾವನ್ನಪ್ಪಿದ ಘಟನೆಯ ಬಳಿಕ ಜಿಲ್ಲೆಯತ್ತ ರಾಜ್ಯದ ಜನ ಬೊಟ್ಟು ಮಾಡಿ ತೋರಿಸುವಂತಾಗಿತ್ತು. ಆದರೆ ಈ ದುರಂತಕ್ಕೆ ಕಾರಣಗಳೇನು? ಎಂಬುದು ಇದೀಗ ಬೇರೆ ಬೇರೆ ವಿಚಾರಗಳ ರೂಪದಲ್ಲಿ ಹೊರ ಬರುತ್ತಿವೆ.

ಆ ವಿಚಾರ ಆಚೆಗಿರಲಿ. ಯಾವಾಗ ದುರಂತ ಸಂಭವಿಸಿತೋ ಅವತ್ತಿನಿಂದಲೇ ಜಿಲ್ಲಾ ಉಸ್ತುವಾರಿ ಸಚಿವರಾದ ಸುರೇಶ‍್ ಕುಮಾರ್ ಮತ್ತು ಜನಪ್ರತಿನಿಧಿಗಳು ಜಿಲ್ಲೆಯತ್ತ ಪಕ್ಷ ಬೇಧ ಮರೆತು ಕಾರ್ಯ ನಿರ್ವಹಿಸುವುದರೊಂದಿಗೆ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿದರು. ಜಿಲ್ಲೆಯಾದ್ಯಂತ ಹೊಸ ಕಾರ್ಯಕ್ರಮಗಳು ಜಾರಿಯಾದವು. ಕೋವಿಡ್ ಕ್ಯಾಪ್ಟನ್ ಎಂಬ ವಿನೂತನ ಕಾರ್ಯಕ್ರಮಗಳ ಮೂಲಕ ಸೋಂಕು ತಡೆಗೆ ಪಣ ತೊಡಲಾಯಿತು.

ಇದೀಗ ಹಾಡಿವಾಸಿಗಳೇ ಹೆಚ್ಚಿರುವ ಪ್ರದೇಶಗಳಿಗೆ ತೆರಳಿ ಅವರಿಗೆ ಲಸಿಕೆ ನೀಡುವ ಕಾರ್ಯಕ್ರಮ ಆರಂಭಿಸಲಾಗಿದೆ. ಬಹಳಷ್ಟು ಹಾಡಿವಾಸಿಗಳು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದರೂ ಅವರನ್ನು ಮನವೊಲಿಸುವ ಕೆಲಸಗಳು ನಡೆಯುತ್ತಿವೆ. ಬಹಳಷ್ಟು ಗ್ರಾಮಗಳಿಗೆ ಉಸ್ತುವಾರಿ ಸಚಿವರು ಸೇರಿದಂತೆ ಶಾಸಕರು ತೆರಳಿ ಟಾಸ್ಕ್ ಪೋರ್ಸ್ ಸಭೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತಿದ್ದಾರೆ. ಇದರಿಂದ ಸೋಂಕಿನ ಮತ್ತು ಸಾವಿನ ಸಂಖ್ಯೆಯಲ್ಲಿ ಇಳಿಮುಖ ಕಂಡು ಬರುತ್ತಿದೆ.

ಮಂಗಳವಾರದವರೆಗಿನ ಕೊರೊನಾ ಸೋಂಕಿನ ಅಂಕಿ ಅಂಶಗಳನ್ನು ಗಮನಿಸಿದರೆ ಜಿಲ್ಲೆಯಲ್ಲಿ ಒಂದೇ ದಿನ 149 ಹೊಸ ಪ್ರಕರಣ ದಾಖಲಾಗುವ ಮೂಲಕ ಇಳಿಕೆ ಕಾಣಿಸುತ್ತಿದೆ. ಜತೆಗೆ ಸೋಂಕಿನಿಂದ ಬಳಲುತ್ತಿದ್ದ 3 ಮಂದಿ ಸಾವನ್ನಪ್ಪಿದ್ದು ಸಾವಿನ ಪ್ರಮಾಣವೂ ತಗ್ಗಿದೆ. ಇದರಿಂದ ಜನ ನಿಟ್ಟುಸಿರು ಬಿಡುವಂತಾಗಿದೆ.

 

ಇದೀಗ ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 2,561ಕ್ಕೆ ಇಳಿದಿದ್ದು, ಇದುವರೆಗೆ 25545 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರ ನಡುವೆ ಕೋವಿಡ್ ಲಸಿಕೆ ನೀಡುವ ಕಾರ್ಯ ಪ್ರಗತಿಯಲ್ಲಿದ್ದು, ಜಿಲ್ಲೆಯಲ್ಲಿ ಒಂದೇ ದಿನ 5372 ಮಂದಿಗೆ ಕೋವಿಡ್‍ ಲಸಿಕೆ ನೀಡಲಾಗಿದೆ.

 

ಸದ್ಯ ಜಿಲ್ಲೆಯಲ್ಲಿ 216927 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಒಟ್ಟಾರೆ ಗಡಿಜಿಲ್ಲೆ ಚಾಮರಾಜನಗರ ನಿಧಾನವಾಗಿ ಕೊರೊನಾ ದಿಂದ ಚೇತರಿಸಿಕೊಳ್ಳುತ್ತಿರುವುದು ಜನರಲ್ಲಿ ಸ್ವಲ್ಪ ಮಟ್ಟಿಗೆ ನೆಮ್ಮದಿ ತಂದಿದೆ.

 

Share This Article
Leave a Comment