ಈ ಬಾರಿ ಮುಂಬೈ ಇಂಡಿಯನ್ಸ್ ಪರ ಆಡ್ತಾರಾ ಅರ್ಜುನ್ ತೆಂಡೂಲ್ಕರ್?

admin
1 Min Read

ಮುಂಬೈ: ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಆಟಗಾರರ ಹರಾಜು ಕಣದಲ್ಲಿ ಪಾಲ್ಗೊಳ್ಳಲು ಅರ್ಹರಾಗಿದ್ದಾರೆ. ದೇಸಿ ಕ್ರಿಕೆಟ್‌ನಲ್ಲಿ ಮುಂಬೈ ತಂಡದ ಪರ ಪಾದಾರ್ಪಣೆ ಮಾಡಿರುವುದರಿಂದ ಅವರಿನ್ನು ಐಪಿಎಲ್ ಹರಾಜು ಕಣದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಸದ್ಯ ನಡೆಯುತ್ತಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಅರ್ಜುನ್ ತೆಂಡೂಲ್ಕರ್ ಮುಂಬೈ ತಂಡದ ಪರ ಪಾದಾರ್ಪಣೆ ಮಾಡಿದ್ದರು. ಹರ್ಯಾಣ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಎಡಗೈ ಮಧ್ಯಮ ವೇಗಿ ಅರ್ಜುನ್ 34 ರನ್‌ಗೆ 1 ವಿಕೆಟ್ ಪಡೆದಿದ್ದರು. ಆದರೆ ಬ್ಯಾಟಿಂಗ್‌ನಲ್ಲಿ ಅರ್ಜುನ್‌ಗೆ ಅವಕಾಶ ಲಭಿಸಿರಲಿಲ್ಲ. ಪಂದ್ಯದಲ್ಲಿ ಹರ್ಯಾಣ 8 ವಿಕೆಟ್ ಸುಲಭ ಗೆಲುವು ಕಂಡಿತ್ತು.

ಭಾರತ ಅಂಡರ್ 19 ತಂಡದ ಪರ ಅರ್ಜುನ್ 2018ರಲ್ಲಿ ಪಾದಾರ್ಪಣೆ ಮಾಡಿದ್ದರು. ಆದರೆ ದೇಸಿ ಕ್ರಿಕೆಟ್‌ ತಂಡಕ್ಕೆ ಅರ್ಜುನ್ 2 ವರ್ಷಗಳ ಬಳಿಕ ಸೇರಿಕೊಂಡಿದ್ದಾರೆ. 21ರ ಹರೆಯದ ಬೌಲಿಂಗ್ ಆಲ್‌ರೌಂಡರ್ ಅರ್ಜುನ್ ಇಂಗ್ಲೆಂಡ್‌ನಲ್ಲಿ ಕ್ಲಬ್‌ ಕ್ರಿಕೆಟ್‌ನಲ್ಲಿ ಕೊಂಚ ಅಭ್ಯಾಸ ಮಾಡಿದ್ದರು.

ಮುಂಬೈ ತಂಡದ ಪರ ಆಡಿರುವುದರಿಂದ ಅರ್ಜುನ್ ಇನ್ನು 2021ರ ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳಲು ಅರ್ಹರಾಗಿದ್ದಾರೆ. ಮುಂಬೈ ತಂಡದ ಪರ ಆಡಿದ್ದಾರೆಂದರೆ ಅರ್ಜುನ್ ಐಪಿಎಲ್‌ನಲ್ಲಿ ಆಡುವ ಸಾಧ್ಯತೆ ಹೆಚ್ಚಿದೆ. ಹಾಗಂತ ಹರಾಜಿನಲ್ಲಿ ಆಯ್ಕೆಯಾದರೂ ಅರ್ಜುನ್ ಐಪಿಎಲ್‌ಗೆ ಪಾದಾರ್ಪಣೆ ಮಾಡಬೇಕಾದರೆ ಶ್ರಮವಹಿಸಿ ದುಡಿಯಬೇಕಿದೆ, ಅಭ್ಯಾಸ ನಡೆಸಬೇಕಿದೆ.

 

Share This Article
Leave a Comment