ಎಬಿಡಿ ಕಣ್ಣಿಗೆ ಬಟ್ಟೆ ಕಟ್ಟಿ ಆಡಬೇಕು ಎಂದ ಮಾಜಿ ಕ್ರಿಕೆಟಿಗ

admin
1 Min Read

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 22ನೇ ಪಂದ್ಯ ಮಂಗಳವಾರ ( ಏಪ್ರಿಲ್ 27 ) ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ನಡೆಯಿತು. ಟೂರ್ನಿಯಲ್ಲಿ ಸಮಬಲವನ್ನು ಸಾಧಿಸಿದ್ದ ಎರಡೂ ತಂಡಗಳ ನಡುವೆ ರೋಚಕ ಪಂದ್ಯ ನಡೆಯಿತು, ಪಂದ್ಯದ ಕೊನೆಯ ಎಸೆತದವರೆಗೂ ನಡೆದ ಹಣಾಹಣಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 1 ರನ್‌ನ ರೋಚಕ ಜಯವನ್ನು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

 

 

ಈ ಪಂದ್ಯದಲ್ಲಿ ಎಬಿಡಿ ವಿಲಿಯರ್ಸ್ 42 ಎಸೆತಗಳಿಗೆ ಅಜೇಯ 75 ರನ್ ಬಾರಿಸುವುದರ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು ಮತ್ತು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಸಹ ಪಡೆದುಕೊಂಡರು. ಈ ಹಿಂದೆ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿಯೂ ಸಹ ಎಬಿ ಡಿವಿಲಿಯರ್ಸ್ 34 ಎಸೆತಗಳಲ್ಲಿ 76 ರನ್ ಬಾರಿಸಿ ಸ್ಫೋಟಕ ಆಟವನ್ನಾಡಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರೋಚಕ ಜಯವನ್ನು ಸಾಧಿಸಿದ ನಂತರ ಪಂದ್ಯದ ಕುರಿತು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

 

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಎಬಿಡಿ ವಿಲಿಯರ್ಸ್ ಸೂಪರ್ ಮ್ಯಾನ್ ಶೋ ನಡೆಯಿತು, ಎಬಿ ಡಿವಿಲಿಯರ್ಸ್ ಅತ್ಯದ್ಭುತವಾದ ಇನ್ನಿಂಗ್ಸ್ ಆಡಿದರು ಎಂದು ಆಕಾಶ್ ಚೋಪ್ರಾ ಹೊಗಳಿದರು. ಅಷ್ಟೆ ಅಲ್ಲದೇ ಎಬಿ ಡಿವಿಲಿಯರ್ಸ್ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬ್ಯಾಟಿಂಗ್ ಮಾಡಿದರೂ ಸಹ ಅವರಿಗೆ ಕಷ್ಟವಾಗುವುದಿಲ್ಲ, ಇದೇ ರೀತಿ ಅದ್ಭುತ ಆಟವನ್ನು ಆಡಲಿದ್ದಾರೆ ಎಂದು ಆಕಾಶ್ ಚೋಪ್ರಾ ಹೇಳಿದರು.

 

 

ಸದ್ಯ ಗೆಲುವಿನ ಹಾದಿಗೆ ಮರಳಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು ಶುಕ್ರವಾರ ( ಏಪ್ರಿಲ್ 30 ) ನಡೆಯಲಿರುವ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಸೆಣಸಾಡಲಿದೆ.

Share This Article
Leave a Comment